ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಶೈಲಾ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ಭವಿಷ್ಯವಾಗಿರುವ ಯುವ ಸಮೂಹವನ್ನು ಮಾದಕ ವಸ್ತುಗಳ ವ್ಯಸನದಿಂದ ದೂರಾಗಿಸಲು ಮತ್ತು ಸುಸ್ಥಿರ ಮತ್ತು ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ನಶಾ ಮುಕ್ತ ಭಾರತ ಅಭಿಯಾನ ರಾಷ್ಟ್ರೀಯ ಆಂದೋಲನವಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಶೈಲಾ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಅವರು ಮಾತನಾಡುತ್ತಿದ್ದರು.
ನಶಾ ಮುಕ್ತ ಭಾರತ ಅಭಿಯಾನವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಸಮಾಜದಿಂದ ಮದ್ಯ ಮತ್ತು ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದು ಹಾಕಿದರೆ ಮಾತ್ರ ದೇಶವು ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಇಂದು ಯುವ ಜನತೆ ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸರ್ಕಾರ, ಸರ್ಕಾರೇತರ, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಡ್ರಗ್ಸ್ ಮುಕ್ತ ಪರಿಸರ ನಿರ್ಮಿಸುವುದು ಅಗತ್ಯವಾಗಿದೆ ಎಂದರು.
ನಂತರ ನಶಾ ಮುಕ್ತ ಭಾರತಕ್ಕಾಗಿ ಎಲ್ಲರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಪ್ರೊ. ಎಂ.ಎಸ್.ಖೊದ್ನಾಪೂರ, ಶ್ರೀರಾಮ ದೇಶಪಾಂಡೆ, ರಮೇಶ ಕುಮಟಗಿ, ಡಾ. ಹೃಷಿಕೇಶ ಪಾಟೀಲ, ಬಿ.ಕೆ. ವೈಶಾಲಿ, ಬಿ.ಕೆ. ಕಲ್ಯಾಣಿ, ಪ್ರೊ. ಎಂ.ಆರ್.ಜೋಶಿ, ಶಿವಾನಂದ ಬಿಜ್ಜರಗಿ, ಡಾ. ಆನಂದ ದೈಗೊಂಡ, ಪ್ರಕಾಶ ಗೋಂಧಳಿ ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಅಭಿಯಾನದಲ್ಲಿ ಸುತ್ತಮುತ್ತಲಿನ ಕಾಲನಿಗಳ ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ೧೦೦ ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

