ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಹಾತ್ಮರು ಮುತ್ತು ಇದ್ದಂತೆ. ಅವರು ಯಾವಾಗಲೂ ಅಮರರಾಗಿ ಉಳಿಯುತ್ತಾರೆ. ಅವರು ನೀಡಿದ ಸಂದೇಶಗಳು ಶಾಶ್ವತವಾಗಿ ಇರುತ್ತವೆ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕೆಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದ ಕರ್ತೃು ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ, ಬಂಥನಾಳದ ಸಂಗನಬಸವ ಸ್ವಾಮೀಜಿಯವರ 125ನೇ ಜಯಂತಿ, ನೂತನ ಮಹಾದ್ವಾರ ಲೋಕಾರ್ಪಣೆ ಮತ್ತು ದ್ವಿಸಹಸ್ರ ಮಾತೆಯರ ಉಡಿತುಂಬುವ ಕಾರ್ಯಕ್ರಮ ಹಾಗೂ ಮಹಾರಥೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಬಂಥನಾಳ ಸಂಗನಬಸವ ಶಿವಯೋಗಿಗಳ ಪುರಾಣ ಮಹಾಮಂಗಲ ಕಾರ್ಯಕ್ರಮ ಹಾಗೂ ಸದ್ಭಾವನ ಬುತ್ತಿ ಊಟ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಬಂಥನಾಳ ಸಂಗನಬಸವ ಶಿವಯೋಗಿಗಳು ಬರದ ನಾಡಾದ ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಜ್ಞಾನದಾಸೋಹಿಯಾಗಿದ್ದಾರೆ. ಇವರ ಇತಿಹಾಸವನ್ನು ಯುವಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಇವರ ಸ್ಮಾರಕ ಭವನವನ್ನು ವಿಜಯಪುರದಲ್ಲಿ ನಿರ್ಮಿಸಬೇಕಾದ ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ಸ್ಮಾರಕದ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಶ್ರೀಮಠದಿಂದ ಭರಿಸುವುದಾಗಿ ಹೇಳಿದರು.
25 ದಿನಗಳ ಕಾಲ ಬಂಥನಾಳ ಸಂಗನಬಸವ ಶಿವಯೋಗಿಗಳ ಪುರಾಣ ನಡೆಸಿಕೊಟ್ಟ ಪ್ರವಚನಕಾರ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಗೈದ ಬಂಥನಾಳ ಸಂಗನಬಸವ ಶಿವಯೋಗಿಗಳ ಆದರ್ಶ ಜಗತ್ತಿಗೆ ತಿಳಿಯಬೇಕಾದರೆ ಜಿಲ್ಲೆಯಲ್ಲಿ ಶಿವಯೋಗಿಗಳ ಸ್ಮಾರಕವಾಗಬೇಕು. ಶಿವಗಿರಿ ಮಾದರಿಯಲ್ಲಿ ಬೃಹತ್ ಪುತ್ಹಳಿ ನಿರ್ಮಾಣವಾಗಬೇಕು. ಭವಿಷ್ಯದಲ್ಲಿ ಯುವಪೀಳಿಗೆಗೆ ಶಿವಯೋಗಿಗಳ ಆದರ್ಶ ತಿಳಿಯುವಂತಾಗಬೇಕಿದೆ ಎಂದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀಮಠವು ಸಂಗೀತಗಾರರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಶ್ರೀಮಠದ ಶ್ರೀಗಳು ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೀಗ ಶೈಕ್ಷಣಿಕವಾಗಿಯೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು, ಮುಖಂಡರಾದ ರಮೇಶ ಸೂಳಿಬಾವಿ, ಶಂಕರಗೌಡ ಪಾಟೀಲ,ರವೀಂದ್ರ ನರಗುಂದ, ಸಂಗಪ್ಪ ನಾಗರಾಳ ಇತರರು ಇದ್ದರು. ಶಿಕ್ಷಕಿ ಗಿರೀಜಾ ಪಾಟೀಲ, ಶರಣಬಸು ಹಳಮನಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಂದ ಷಟ್ಸಸ್ಥಲ ಧ್ವಜಾರೋಹಣ ಶ್ರೀಮಠದ ಮುಂಭಾಗ ನೆರವೇರಿಸಲಾಯಿತು.

