ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಲ ಜಾತ್ರಾಮಹೋತ್ಸವ, ಜ್ಞಾನ ದಾಸೋಹಿ ಬಂಥನಾಳದ ಸಂಗನಬಸವ ಶಿವಯೋಗಿಗಳ 125 ನೇ ಜಯಂತಿ, ನೂತನ ಮಹಾದ್ವಾರ ಲೋಕಾರ್ಪಣೆ ಮತ್ತು ದ್ವಿಸಹಸ್ರ ಮಾತೆಯರ ಉಡಿತುಂಬುವ ಕಾರ್ಯಕ್ರಮ ಹಾಗೂ ಮಹಾರಥೋತ್ಸವದಂಗವಾಗಿ ಭಾನುವಾರ ಶ್ರೀಮಠದಲ್ಲಿ ಉತ್ತರ ಕರ್ನಾಟಕ ಸಾಂಸ್ಕ್ರತಿಕ ಬಿಂಬಿಸುವಂತಹ ವಿಶೇಷ ಸದ್ಭಾವನ ಬುತ್ತಿ ಊಟ ಕಾರ್ಯಕ್ರಮದಲ್ಲಿ ಸದ್ಭಕ್ತರು ವಿವಿಧ ಭಕ್ಷ್ಯಗಳ ಸವಿಯನ್ನು ಸವಿದು ಸಂಭ್ರಮಿಸಿದರು.
ಜಾತ್ರಾಮಹೋತ್ಸವದಂಗವಾಗಿ ಸದ್ಭಾವನ ಬುತ್ತಿ ಊಟದಂಗವಾಗಿ ಗ್ರಾಮದ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ರೊಟ್ಟಿ, ಚಪಾತಿ, ಹಿಟ್ಟಿನ ಪಲ್ಲ್ಯೆ, ಬದನೇಕಾಯಿ ಪಲ್ಯ್ಲೆ, ಪುಂಡಿ ಪಲ್ಯ್ಲೆ, ಕಾಳು ಪಲ್ಲ್ಯೆ, ಹಿಂಡಿ, ಮೆಣಸಿಕಾಯಿ ಚಟ್ನಿ, ಮೊಸರು, ರವೆ ಉಂಡಿ, ಶೇಂಗಾದ ಹೊಳಿಗೆ, ಮಾದಲಿ, ಉಳಿಬಾನ, ಅನ್ನ ಸಾರು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಗ್ರಾಮದ ಗೌರಿಶಂಕರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿದರು. ಶ್ರೀಮಠಕ್ಕೆ ತಲುಪಿದ ನಂತರ ಮಹಿಳೆಯರು ತಾವು ತಯಾರಿಸಿದ ವಿವಿಧ ಅಡುಗೆ ಪದಾರ್ಥಗಳನ್ನು ಒಪ್ಪಿಸಿದ ನಂತರ ಎಲ್ಲ ಅಡುಗೆ ಪದಾರ್ಥಗಳನ್ನು ಜಾತ್ರಾಮಹೋತ್ಸವಕ್ಕೆ ಆಗಮಿಸಿದ ಎಲ್ಲ ಸದ್ಭಕ್ತರಿಗೆ ಬುತ್ತಿ ಊಟ ಬಡಿಸಲಾಯಿತು.
ವಿವಿಧ ಭಕ್ಷ್ಯಗಳನ್ನು ಸವಿದ ಸದ್ಭಕ್ತರು ಸಂಭ್ರಮಿಸಿ ಎಳ್ಳ ಅಮವಾಸ್ಯೆ ದಿನವನ್ನು ಸ್ಮರಿಸಿಕೊಂಡರು.
ಗ್ರಾಮದ ನಾಗಮ್ಮ ಹಿರೇಮಠ, ಶಾಂತಾ ನರಗುಂದ, ಅನ್ನಕ್ಕ ಗುಳೇದ, ಶಾಂತಾ ಪಾಟೀಲ ಅವರನ್ನು ಮಾತನಾಡಿಸಿದಾಗ ಪ್ರತಿ ವರ್ಷದ ಶ್ರೀಮಠದ ಜಾತ್ರೆಯಂಗವಾಗಿ ಶ್ರೀಗಳು ಒಂದು ತರಹದ ಅಡುಗೆ ಮಾಡಲು ಎಲ್ಲ ಮಹಿಳೆಯರಿಗೆ ಹೇಳುತ್ತಾರೆ. ಕಳೆದ ವರ್ಷ ಕರಿಕಡಬು ಮಾಡಲು ಹೇಳಿದ್ದರು.
ಈ ವರ್ಷ ನಮಗೆ ವಿವಿಧ ತರಹದ ಉತ್ತರ ಕರ್ನಾಟಕದ ಪದಾರ್ಥಗಳನ್ನು ಮಾಡಿಕೊಂಡು ಬರಲು ತಿಳಿಸಿದ್ದರು. ಅದರಂತೆ ನಾವು ವಿವಿಧ ಅಡುಗೆ ಪದಾರ್ಥಗಳನ್ನು ಮಾಡಿಕೊಂಡು ಬಂದು ದಾಸೋಹ ಸೇವೆ ಗೈದು ಸಂತೃಪ್ತಿ ಹೊಂದಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತಗಾರರಾದ ವಿರೇಶ ವಾಲಿ, ಸಿದ್ದಾರ್ಥ ಬೈಚಬಾಳ ಅವರು ಸಂಗೀತ ಸುಧೆ ಹರಿಸಿದರು.

