ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ರಿಪೇರಿ ಯೋಜನೆಗೆ ಕೊನೆಗೂ ಚಾಲನೆ | ಗ್ರಾಮಸ್ಥರ ಹಲವು ವರ್ಷಗಳ ಪ್ರತಿಭಟನೆ ಫಲಪ್ರದ
ಉದಯರಶ್ಮಿ ದಿನಪತ್ರಿಕೆ
ವರದಿ: ಗುರು ಹಿರೇಮಠ
ಆಲಮೇಲ: ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ, ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ “ದೇವಣಗಾಂವ ಸೇತುವೆ”ಯ ದುರಸ್ತಿ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ರಿಪೇರಿ ಯೋಜನೆಗೆ ಸದ್ಯ ಚಾಲನೆ ದೊರೆತಿದೆ.
65 ವರ್ಷ ಹಳೆಯದಾದ ಈ ಸೇತುವೆಯ ಮೇಲ್ಭಾಗ ಸಂಪೂರ್ಣ ಹಾಳಾಗಿತ್ತು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಶೋಕ ಮನಗೂಳಿ ಅವರು, ಇಲಾಖೆ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. “ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದ ನಮಗೆ ಈಗ ನೆಮ್ಮದಿ ಸಿಕ್ಕಿದೆ” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿಜಯಪುರ, ಕಲಬುರಗಿ ಗಡಿ ರೇಖೆಯಾಗಿರುವ ಈ ಸೇತುವೆ ದುರಸ್ತಿನಿ ನಿಮಿತ್ಯ ರಸ್ತೆಯ ಸ್ಥಗಿತದಿಂದ ನಿತ್ಯ ಸಂಚರಿಸುತ್ತಿದ್ದ ಬೆಂಗಳೂರು, ಹೈದರಾಬಾದ, ಮುಂಬೈ (ಭೀವಂಡಿ), ಗೋವಾ, ಸೊಲ್ಲಾಪುರ, ಬೀದರ, ಹುಮನಾಬಾದ, ಬಸವಕಲ್ಯಾಣ, ಚಿಂಚೋಳಿ, ಆಳಂದ,ಮುಗಳಖೋಡ, ಗುಡ್ಡಾಪುರ, ಕೊಲ್ಲಾಪುರ, ಬೆಳಗಾವಿ, ಗಡಹಿಂಗ್ಲಜ್, ಬ್ಯಾಡಗಿ, ಗದಗ, ಬದಾಮಿ ,ಬಾಗಲಕೋಟೆ, ಮಿರಜ, ಸಾಂಗಲಿ ಸೇರಿದಂತೆ ಅನೇಕ ದೊಡ್ಡ ನಗರಗಳ ಸಂಪರ್ಕವನ್ನು ಈ ರಸ್ತೆ ಕಳೆದುಕೊಂಡಂತಾಗುತ್ತದೆ.
ಆದರೆ ಆಲಮೇಲ ಹಾಗೂ ಅಪಜಲಪುರ ನಗರಗಳ ಮಧ್ಯೆ ಅನೇಕ ಗ್ರಾಮಗಳ ಜನರ ಒಡನಾಟವಿದೆ ನಿತ್ಯ ಸರಕಾರಿ ನೌಕರರು, ಬ್ಯಾಂಕ್ ನೌಕರರು, ವ್ಯಾಪಾರಸ್ಥರು, ರೈತರು, ಕೂಲಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಅವಲಂಬಿತರಾಗಿದ್ದಾರೆ ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಎರಡು ಭಾಗದ ವಿದ್ಯಾರ್ಥಿಗಳು ಶಿಕ್ಷಕರು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸಿ ಪರೀಕ್ಷೆ ನಿರ್ವಹಿಸಬೇಕಿದೆ
ಅವರ ಅನುಕೂಲಕ್ಕಾಗಿ ದೇವಣಗಾಂವ ಸೇತುವೆಯ ಪಕ್ಕದಲ್ಲಿ ನದಿಯಲ್ಲಿ ಪೈಪ್ ಹಾಕಿ ಕಚ್ಚಾ ರಸ್ತೆ ನಿರ್ಮಿಸಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಜೀಪು, ಸೇರಿದಂತೆ ಸಣ್ಣ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಈ ಮೊದಲು ರಿಪೇರಿ ಸಂದರ್ಭದಲ್ಲಿ 2003ರಲ್ಲಿ ಅದೇ ರೀತಿ ಅನುಕೂಲ ಮಾಡಿ ಕೊಡಲಾಗಿತ್ತು (ದೊಡ್ಡ ವಾಹನಗಳ ಹೊರತುಪಡಿಸಿ) ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ದೇವಣಗಾಂವ ಸೇತುವೆಯ ಮೇಲಿನ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾದರೂ, ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಉತ್ತಮ ರಸ್ತೆ ಸಿಗಲಿದೆ ಎಂಬ ಭರವಸೆಯಲ್ಲಿ ಜನತೆ ಕಾಮಗಾರಿಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಈ ಐತಿಹಾಸಿಕ ಅಭಿವೃದ್ಧಿ ಕಾರ್ಯವು ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡಲಿದೆ.

ಬಸ್ ಸಂಚಾರ ಮಾರ್ಗ ಬದಲಾವಣೆ
ಮಾರ್ಚ 23 ರಿಂದ
ಸೇತುವೆಯ ರಿಪೇರಿ ಕಾಮಗಾರಿಯು ಸುಮಾರು ಎರಡು ತಿಂಗಳುಗಳ ಕಾಲ ನಡೆಯಲಿರುವ ಹಿನ್ನೆಲೆಯಲ್ಲಿ, ಕೆಎಸ್ಆರ್ಟಿಸಿ (KKRTC) ಬಸ್ಸುಗಳ ಸಂಚಾರದಲ್ಲಿ ಮಾರ್ಚ್ 23 ರಿಂದ ಮೇ ಅಂತ್ಯದವರೆಗೆ ಈ ಕೆಳಗಿನಂತೆ ಬದಲಾವಣೆ ಮಾಡಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಅಫಜಲಪುರ – ಆಲಮೇಲ: ಇನ್ನು ಮುಂದೆ ಅಫಜಲಪುರ ಘತ್ತರಗಿ, ಬಗಲೂರ, ಕುಳೆಕುಮಟಗಿ, ಗುಂದಗಿ ಆಲಮೇಲ
ಅಫಜಲಪುರ – ಸಿಂದಗಿ: ಘತ್ತರಗಿ, ಬಗಲೂರ, ಮೋರಟಗಿ ಮಾರ್ಗವಾಗಿ ಸಂಚಾರ
ಅಫಜಲಪುರ – ಇಂಡಿ , ಕರಜಗಿ, ಉಡಚಣ ,ರೋಡಗಿ , ಸಾಲೋಟಗಿ, ಮಾರ್ಗವಾಗಿ ಇಂಡಿ ಸಂಚರಿಸಲಿವೆ.
“ಕಳೆದ ಮಳೆಗಾಲದಲ್ಲಿ ಉಂಟಾದ ಭೀಕರ ನೆರೆಹಾವಳಿಯಿಂದ ದೇವಣಗಾಂವ ಸೇತುವೆ ಬಹಳಷ್ಟು ಹಾಳಾಗಿತ್ತು. ನಾನು ಖುದ್ದಾಗಿ ಹಲವು ಬಾರಿ ಸೇತುವೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದೆ. ಈ ಪ್ರಮುಖ ಸಂಪರ್ಕ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಂಕಷ್ಟವನ್ನು ಕಂಡು, ಮುಂದಿನ ದಿನಗಳಲ್ಲಿ ರಸ್ತೆ ಮತ್ತೆ ಹಾಳಾಗಬಾರದು ಎಂಬ ಉದ್ದೇಶದಿಂದ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಿದ್ದೆ. ಅದರಂತೆ ಈಗ 3.50 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗುತ್ತಿದೆ. ಜನರಿಗೆ ಸುಗಮ ಸಂಚಾರದ ವ್ಯವಸ್ಥೆಯಾಗಬೇಕು ಎಂಬುದೇ ನನ್ನ ಗುರಿ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ
ಕೋಟ್ ೨
“ನಾವು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳನ್ನು ಒಳಗೊಂಡಂತೆ ಸಮನ್ವಯ ಸಾಧಿಸಿದ್ದೇವೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರ ಅನುಕೂಲಕ್ಕಾಗಿ ಆರು ಪ್ರಮುಖ ಸ್ಥಳಗಳಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ದೇವಣಗಾಂವ ಗ್ರಾಮಸ್ಥರ ಹಿತದೃಷ್ಟಿಯಿಂದ ಸೋನ್ನ ಬ್ಯಾರೇಜ್(ಡ್ಯಾಂ) ಮೇಲಿನ ದಾರಿಯಿಂದ ಬೈಕ್ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪರವಾನಗಿಗಾಗಿ ಮನವಿ ಸಲ್ಲಿಸಿದ್ದೇವೆ.”
– ಅರುಣಕುಮಾರ ವಡಗೇರಿ
ಎಇಇ, ಲೋಕೋಪಯೋಗಿ ಇಲಾಖೆ.
“ಆಲಮೇಲ ತಾಲೂಕಿನ ದೇವಣ್ಗಾಂವ್ ಗ್ರಾಮದ ಹತ್ತಿರ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ “ದೇವಣಗಾಂವ ಸೇತುವೆ” ಯನ್ನು ರಿಪೇರಿ ಮಾಡಲು ಚಾಲನೆ ದೊರೆತಿದ್ದು ಸ್ವಾಗತಾರ್ಹವಾಗಿದೆ, ಆದರೆ ದೇವಣಗಾಂವ ದಿಂದ ಅಫಜಲಪುರ ಪಟ್ಟಣಕ್ಕೆ ತೆರಳಲು ನಿತ್ಯ ಸಾವಿರಾರು ಸಂಖ್ಯೆಯ ಜನರು ಓಡಾಡುವದರಿಂದ ನೌಕರಸ್ಥರು, ವ್ಯಾಪಾರಸ್ಥರು, ರೈತರು, ಶಾಲಾ ವಿದ್ಯಾರ್ಥಿಗಳು, ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸೇತುವೆ ಕೆಳಭಾಗದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿ, ಸಂಚಾರಕ್ಕೆ ಅನುವು ಮಾಡಿಕೊಡಬೇಕು.”
– ದತ್ತಾತ್ರೆಯ ಸೊನ್ನ & ಮಹೇಶ ಎಲಜಿ
ಗ್ರಾಮಸ್ಥರು, ದೇವಣಗಾಂವ

