ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದ್ದರೇ ಅದಕ್ಕೆ ಕಾರಣ ಸಂವಿಧಾನ ಎಂದು ಅಭಿಮಾನದಿಂದ ಹೇಳಬಹುದಾಗಿದೆ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಜರುಗಿದ ಸಂವಿಧಾನ ಜಾಗೃತಿ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಿಧಾನಕ್ಕೆ ಚ್ಯುತಿ ತರುವಂತ ಕಾರ್ಯವನ್ನು ನಾಗರಿಕ ಸಮಾಜ ಯಾವುದೇ ಕಾರಣಕ್ಕೂ ಎಂದಿಗೂ ಒಪ್ಪುವದಿಲ್ಲ. ಆದ್ದರಿಂದ ಸಂವಿಧಾನವನ್ನು ಎಲ್ಲರೂ ಅರಿಯುವುದು ಅಗತ್ಯವಾಗಿದೆ ಎಂದರು.
ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನ ಪೀಠಿಕೆಯನ್ನು ಅರಿತಾಗ ಮಾತ್ರ ಸಾಮಾಜಿಕ ನ್ಯಾಯದ ಮಹತ್ವ ತಿಳಿಯಬಹುದಾಗಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಇಂಥ ಜಾಗೃತಿ ಸಮಾವೇಶಗಳು ಅಗತ್ಯವಾಗಿವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ದೇಶದ ಸಂವಿಧಾನವನ್ನು ಅರಿತುಕೊಂಡಾಗ ಮಾತ್ರ ನಾವು ಪ್ರಜಾಪ್ರಭುತ್ವದಲ್ಲಿ ಯಶಸ್ವಿಯಾಗಲು ಸಾಧ್ಯ. ದೇಶದಲ್ಲಿ ಸಮಾನವಾಗಿ ಎಲ್ಲರೂ ಬಾಳುವಂತಾಗಬೇಕು ಆಗ ಮಾತ್ರ ಸಂವಿಧಾನ ರಚನೆಯ ಮುಖ್ಯ ಉದ್ದೇಶ ಇಡೇರಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ, ಅಸಮಾನತೆ ಎಂಬ ಜಿಡ್ಡು ಗಟ್ಟಿದ ವ್ಯವಸ್ಥೆಯನ್ನು ವಿರೋಧಿಸುವ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಮಾಡಿದ ಕಾರ್ಯವನ್ನು ನಾವು ಅರಿಯಬೇಕಾಗಿದೆ. ಸಂವಿಧಾನವನ್ನು ಸನಾತನವಾದಿಗಳು ಹಿಮ್ಮೆಟ್ಟಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಇದನ್ನು ಅರಿತು ಜಾಗೃತಿ ಮೂಡಿಸುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯಡಿಯಾಪೂರ ಮಾತನಾಡಿದರು.
ಡಿಎಸ್ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಪ್ರಸ್ತಾವಿಕ ಮಾತನಾಡಿ, ಸಂವಿಧಾನದ ಮೂಲ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಜರುಗಿತು. ನಂತರ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ನೂತನ ಸಂಚಾಲಕ ಸಿದ್ಧಾರ್ಥ ರೂಗಿ ಸೇರಿದಂತೆ ಪದಾಧಿಕಾರಿಗಳ ಪದಗ್ರಹಣ ಜರುಗಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಸಂಗಮೇಶ ಛಾಯಾಗೋಳ, ಬಶೀರ್ ಅಹ್ಮದ್ ಬೇಪಾತಿ, ಸಿ.ಕೆ.ಕುದರಿ, ಕೆ.ಆರ್.ಕೊಕಟನೂರ, ಕಾಶೀನಾಥ ತಳಕೇರಿ, ಅರುಣ ಕೋರವಾರ, ಜಾನು ಗುಡಿಮನಿ, ಶರಣು ನಾಟೀಕಾರ, ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ತಾಲ್ಲೂಕು ಪದಾಧಿಕಾರಿಗಳು ಇದ್ದರು.

