ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕದಲ್ಲಿ ಆಟೋ ನಿಲ್ದಾಣಕ್ಕಾಗಿ ಬೀದಿ ಬದಿ ಅಂಗಡಿಗಳ ತೆರವು ಮಾಡಲು ಮುಂದಾಗಿರುವುದಕ್ಕೆ ಬೀದಿ ಬದಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಂಗಡಿಗಳ ತೆರವು ಮಾಡಲು ಮುಂದಾದ್ರೆ ವಿಷ ಕುಡಿದು ಪ್ರಾಣ ಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೀದಿ ಬದಿ ಅಂಗಡಿಗಳನ್ನು ತೆರವು ಮಾಡದಂತೆ ಸೋಮವಾರ ಪುರಸಭೆ ಮುಖ್ಯಧಿಕಾರಿ ಸುರೇಶ್ ಅವ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದಿಬದಿ ವ್ಯಾಪಾರಿ ಮಹಾದೇವಮ್ಮ ಮಾತನಾಡಿ. ಕಳೆದ 25-30ವರ್ಷಗಳಿಂದ ಬಸ್ ನಿಲ್ದಾಣದ ಸಮೀಪದಲ್ಲೇ ಹೂ, ಹಣ್ಣು ಅಂಗಡಿ ಇಟ್ಟುಕೊಂಡು ಜೀವನ ಮಾಡಿಕೊಂಡು ಬರುತ್ತಿದ್ದೀವಿ. ಇದನ್ನೇ ನಂಬಿಕೊಂಡು ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಂಡಿದ್ದೀವಿ. ವ್ಯಾಪಾರದಲ್ಲಿ ಸಿಗುವ ಅಷ್ಟೋ ಇಷ್ಟೋ ಹಣದಿಂದಲೇ ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ಸರಿದೂಗಿಸಿಕೊಂಡು ಬರುತ್ತಿದ್ದೀವಿ. ಆದರೆ ಇದೀಗ ಏಕಾಏಕಿ, ಯಾವುದೇ ನೋಟೀಸ್ ನೀಡದೆ ದಬ್ಬಾಳಿಕೆ ಮಾಡಿ ಬೀದಿಬದಿ ಅಂಗಡಿಗಳ ತೆರವಿಗೆ ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಬೀದಿಬದಿ ಅಂಗಡಿಗಳ ತೆರವು ಮಾಡಬೇಕಾದ್ರೆ, ಪುರಸಭೆ ನೋಟೀಸ್ ಕೊಡಬೇಕು. ಆದರೆ ಪುರಸಭೆ ನೋಟೀಸ್ ಕೊಟ್ಟಿಲ್ಲ. ಅಂಗಡಿ ತೆರವು ಮಾಡುವಂತೆ ನಮಗೆ ಸೂಚನೆ ನೀಡಿಲ್ಲ. ಆದರೆ ಆಟೋ ಚಾಲಕರ ಸಂಘದ ಕೆಲ ಸದಸ್ಯರು ಅಂಗಡಿ ತೆರವು ಮಾಡುವಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ. ತೆರವಿಗೆ ಒತ್ತಾಯ ಮಾಡಿದ್ರೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದರು.
ಮೈಸೂರು ಗ್ರಾಮಾಂತರ ವಿಭಾಗದ ಬೀದಿಬದಿ ವ್ಯಾಪಾರಿಗಳ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಜಯರಾಮ ಮಾತನಾಡಿ, ಬೀದಿಬದಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ನಡೆಸುತ್ತಾ ಬರುತ್ತಿರುವ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಈ ಸಂಬಂಧ ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೂ ತಂದಿದ್ದೀವಿ. ಪುರಸಭೆ ಮುಖ್ಯಧಿಕಾರಿ ಕೂಡ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದರೂ ಅಂಗಡಿ ತೆರವು ಮಾಡಲು ಮುಂದಾದ್ರೆ ನಮ್ಮ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಉಮೇಶ್ ಹೆಚ್ ಮಟಕೆರೆ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹೀಗಾಗಿ ಅಂಗಡಿಗಳ ತೆರವು ಮಾಡುವ ಮುನ್ನ ವ್ಯಾಪಾರಿಗಳಿಗೆ ಬೇರೆಡೆ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಈಗಿರುವ ಸ್ಥಳದಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟೀ ಅಂಗಡಿ ರವಿ, ಹಣ್ಣಿನ ಅಂಗಡಿ ನಂಜಪ್ಪ, ಡಿಎಸ್ ಎಸ್ ಟೌನ್ ಅಧ್ಯಕ್ಷ ಉದಯ್ ಸಿದ್ದಪ್ಪಾಜಿ ರಸ್ತೆ, ಶ್ರೀಕಂಠ ಸೇರಿದಂತೆ ಬೀದಿಬದಿ ವ್ಯಾಪಾರಿಗಳು ಇದ್ದರು.

