ಲೇಖನ
– ಅವಿನಾಶ ಸೆರೆಮನಿ
ಉಪನ್ಯಾಸಕರು
ಬೈಲಹೊಂಗಲ
ಜಿಲ್ಲೆ: ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ಸ್ವಾರ್ಥ ಎಂದರೆ ತನ್ನ ಸ್ವಂತಿಕೆಗೆ ಪ್ರಾಮುಖ್ಯತೆ ನೀಡುವುದು, ಇತರರನ್ನು ತಿರಸ್ಕರಿಸುವುದು. ಸರಳ ಪದದಲ್ಲಿ ಸ್ವಾರ್ಥ ಎಂದರೆ ಸ್ವ ಹಿತಾಸಕ್ತಿ.
ಇದು ಮನುಜನೊಳಗೆ ಅಹಂ ಭಾವನೆ ಹುಟ್ಟು ಹಾಕುವುದಲ್ಲದೆ ತಾನೇ ಶ್ರೇಷ್ಠ ಎಂಬ ಅಸಡ್ಡೆಗೆ ಕಾರಣವಾಗುತ್ತದೆ. ಸಂಬಂಧಗಳನ್ನು ಕಳಚಿ ಒಂಟಿತನಕ್ಕೆ ದೂಡುತ್ತದೆ. ತನ್ನ ಸ್ವ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತ ತನ್ನದೆಯಾದ ಲೋಕದಲ್ಲಿ ಮುಳುಗಿ ಸ್ವ ಪ್ರತಿಷ್ಠೆಗಾಗಿ ಹಂಬಲಿಸುತ್ತ ಇತರರನ್ನು ಕೀಳಾಗಿ ನೋಡಲು ಆರಂಭಿಸುತ್ತಾನೆ. ತನ್ನನ್ನೇ ತಾನು ಪ್ರೀತಿಸುತ್ತ, ಕಾಳಜಿ ವಹಿಸುತ್ತ, ಸ್ವ ಲಾಭದತ್ತ ಒಲವು ತೋರುವುದು. ಸ್ವಯಂ ಪ್ರೀತಿ ಮತ್ತು ಪರಾನುಭೂತಿಯನ್ನು ಬೆಳೆಸಿಕೊಳ್ಳಬೇಕು

ಸ್ವಾರ್ಥ ಇರಲೇಬಾರದಂತಲ್ಲ ಕೆಲವು ಸಂದಿಗ್ನ ಮತ್ತು ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾರ್ಥವು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ. ಆಯಾ ಸನ್ನಿವೇಶದಲ್ಲಿ ಸ್ವಾರ್ಥವನ್ನು ಅವಲಂಬಿಸಲೇಬೇಕಾಗುತ್ತದೆ. ಇಲ್ಲದಿರೆ ಜೀವಕ್ಕೆ ಕುತ್ತು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉದಾಹರಣೆ ಅನಾರೋಗ್ಯದ ಸಂದರ್ಭದಲ್ಲಿ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಲೇಬೇಕು. ಇದು ಅನಿವಾರ್ಯ, ನಾವೇ ನಮ್ಮ ಆರೋಗ್ಯದ ರಕ್ಷಕರು ಹೊರತು ಇತರರಲ್ಲ.
ಸ್ವಾರ್ಥದ ಪ್ರಯೋಜನಗಳು
- ನಾವು ಅಂದುಕೊಂಡ ಗುರಿಯನ್ನು ಸಾಧಿಸಲು ಬಹುಮುಖ್ಯ.
- ಮನುಜನ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.
- ಕೆಲವೊಮ್ಮೆ ಆರೋಗ್ಯಕರ ಸಂಬಂಧಗಳು ಬೆಸೆಯಲು ಕಾರಣವಾಗಬಹುದು.
- ಸಂದರ್ಭ ಸನ್ನಿವೇಶಗಳನ್ನು ನಿಭಾಯಿಸಲು ನೇರವಾಗಬಹುದು.
- ಬದುಕಿನಲ್ಲಿ ಸಾಧನೆಯ ಶಿಖರವನ್ನು ತಲುಪಲು ಪ್ರೇರಕವಾಗಬಹುದು.
- ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತವಾಗುತ್ತದೆ.
- ಸ್ವಯಂ ಬೆಳವಣಿಗೆಗೆ ಸಹಾಯವಾಗುತ್ತದೆ.
ಸ್ವಾರ್ಥದ ಅನಾನುಕೂಲಗಳು - ಸಂಬಂಧಗಳಲ್ಲಿ ಬಿರುಕು ಮೂಡಿಸಿ ಬಾಂಧವ್ಯ ಕಳಚುತ್ತದೆ.
- ಮನುಜನ ಏಕಾಂಗಿತನಕ್ಕೆ ಕಾರಣವಾಗುತ್ತದೆ.
- ಸಂತೋಷವನ್ನು ಕಬಳಿಸಿ ದುಃಖದ ಸಾಗರದಲ್ಲಿ ತೇಲಿಸಬಹುದು
- ಜೀವನದ ಏಳಿಗೆಗೆ ಮಾರಕವಾಗಬಹುದು
- ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಶೂನ್ಯ ಭಾವವು ಆವರಿಸುತ್ತದೆ.
- ನಾನೇ ಎಲ್ಲರಿಗಿಂತ ಶ್ರೇಷ್ಠ ಇತರರೂ ಕನಿಷ್ಠ ಎಂಬ ಅಹಂಕಾರ ದ್ವಿಗುಣಗೊಳ್ಳಬಹುದು.
- ಸಮಾಜದಲ್ಲಿ ಯಾರು ಗೌರವ ಕೊಡದೆ ನಿರ್ಲಕ್ಷಿಸಬಹುದು.
ಹೀಗೆ ಸ್ವಾರ್ಥವು ಮಿತಿಯಲ್ಲಿರಬೇಕು ಆದರೆ ಅತಿಯಾದರೆ ಮುಳುವಾಗುವುದು ನಿಶ್ಚಿತ. ಇದು ಮಾನವನ ಸಹಜ ಪ್ರಕ್ರಿಯೆ. ಹಾಗಂತ ಗಡಿಯನ್ನು ಮೀರಬಾರದು. ಸಕಾರಾತ್ಮಕ ನಕಾರಾತ್ಮಕ ಪ್ರಭಾವ ಬೀರುವುದರಿಂದ ಸಮತೋಲಿತವಾಗಿ ನಿಯಂತ್ರಿಸುವುದು ಮನುಜನ ಮೇಲೆ ನಿರ್ಧರಿತವಾಗುತ್ತದೆ. ಒಟ್ಟಾರೆಯಾಗಿ ಸ್ವಾರ್ಥವು ಜೀವಕ್ಕೆ ಕುತ್ತಾಗದಿರಲಿ, ಜೀವನಕ್ಕೆ ಮಾರಕವಾಗದಿರಲಿ, ಆದರೆ ಸ್ಥಿಮಿತತೆಯಲ್ಲಿರಲಿ. ಸುಂದರ ಬದುಕಿಗೆ ಬೆಳಕಾಗಲಿ ಹೊರತು ಕತ್ತಲೆಗೆ ದಾರಿ ತೋರದಿರಲಿ..


