ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನು-ಸುವ್ಯವಸ್ಥೆ ಕಾಪಾಡಲು ದಿನದ ೨೪ ಗಂಟೆಗಳ ಕಾಲ ಕರ್ತವ್ಯ ಸನ್ನದ್ಧರಾಗುವ ಆರಕ್ಷಕರು ಸಮಾಜದ ಸುರಕ್ಷತೆಯ ಬಹುಮುಖ್ಯ ಅಂಗ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರದ ಸಾಯಿ ಉದ್ಯಾನವನದ ಆವರಣದಲ್ಲಿ ಎ.ಆರ್.ಜೆ. ಗುರುಕುಲ ಅಂತಾರಾಷ್ಟ್ರೀಯ ಶಾಲೆಯ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಸಹಯೋಗದಲ್ಲಿ ದೇಶ ರಕ್ಷಕರಿಗೆ, ಆರಕ್ಷಕರಿಗೆ ಹಾಗೂ ಹಲವಾರು ಸೇವಾ ನಿರತರಿಗೆ ಗೌರವಿಸಲು ಆಯೋಜಿಸಿದ್ದ ಸೆಲ್ಯೂಟ್' ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರ ಭಾಷೆ ಕಠಿಣವಿರಬಹುದು, ಅಪರಾಧಿಕ ಚಟುವಟಿಕೆಗಳ ವಿರುದ್ಧ ಸೆಣಸಾಟದಲ್ಲಿ ಅಪರಾಧಿಗಳಿಗೆ ಕಠಿಣ ಭಾಷೆಯೇ ಪ್ರಯೋಗಿಸಬೇಕಾಗುತ್ತದೆ, ಆದರೆ ಪೊಲೀಸರು ಜನಸ್ನೇಹಿ. ಈಗ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಈಗ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ, ಪೊಲೀಸರ ಜವಾಬ್ದಾರಿಯೂ ಅಧಿಕವಾಗುತ್ತದೆ, ಗಡಿಯಾರ ನೋಡದೇ ಕೆಲಸ ಮಾಡುವ ಆರಕ್ಷಕರು, ವೀರಯೋಧರನ್ನು ನಾವು ಸದಾ ಗೌರವಿಸುವ ಕಾರ್ಯ ಮಾಡಬೇಕು, ಅವರನ್ನು ಗೌರವಿಸಲು ಅಪೂರ್ವವಾದಸೆಲ್ಯೂಟ್’ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಲಾಡಲಿ ಫೌಂಡೇಷನ್ ರಾಯಭಾರಿ ಕು.ಶಿಫಾ ಜಮಾದಾರ ಮಾತನಾಡಿ, ಸಮವಸ್ತ್ರ ಧರಿಸಿದ ಅಧಿಕಾರಿಗಳು ಪ್ರತಿಯೊಂದು ಅರ್ಥದಲ್ಲಿಯೂ ರಾಷ್ಟ್ರದ ರಕ್ಷಕರು ಸೈನಿಕರು ಗಡಿಯಲ್ಲಿ ಬಾಹ್ಯ ಬೆದರಿಕೆಗಳಿಂದ ನಮ್ಮ ದೇಶವನ್ನು ರಕ್ಷಿಸಿದರೆ ಆಂತರಿಕ ರಕ್ಷಣಾ ಪಡೆಗಳು ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಮೂಲಕ ರಾಷ್ಟ್ರವನ್ನು ಒಳಗಿನಿಂದ ರಕ್ಷಿಸುತ್ತಾರೆ ಎಂದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿದರು. ಹೆಚ್ಚುವರಿ ಪೋಲಿಸ್ ಅಧಿಕ್ಷಕ ರಾಮನಗೌಡ ಹಟ್ಟಿ, ಉಪಪೋಲಿಸ್ ವರಿಷ್ಟಾಧಿಕಾರಿ ಡಾ.ಬಸವರಾಜ ಯಲಗಾರ, ಶ್ರೀದೇವಿ ಕಾರಜೋಳ, ಶರಣು ಸಬರದ, ವರುಣ ಕುಲಕರ್ಣಿ, ಶಾರುಕ ತಹಶಿಲ್ದಾರ ಉಪಸ್ಥಿತರಿದ್ದರು.
ಎಆರ್ಜೆ ಫೌಂಡೇಷನ್ನ ಅಧ್ಯಕ್ಷರಾದ ಪಂ. ಸಂಜೀವಾಚಾರ್ಯ ಮಧಭಾವಿ ಆಶೀರ್ವಚನ ನೀಡಿದರು.
ಸಮಾಜದ ಸುರಕ್ಷತೆಗಾಗಿ ಅನುಪಮವಾಗಿ ತೊಡಗಿಸಿಕೊಂಡಿರುವ ಸುಮಾರು ೮೦ ಪೋಲಿಸ್ರಿಗೆ, ಸೈನಿಕರಿಗೆ, ಅಗ್ನಿಶಾಮಕ ಸಿಬ್ಬಂದಿ ಲೋಕಾಯುಕ್ತ ಪ್ರಾಮಾಣಿಕತೆ ಮೆರೆದ ಆಟೊ ಚಾಲಕರಿಗೆ ಸೇರಿದಂತೆ ವಿವಿಧ ರಕ್ಷಣಾ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ನಂತರ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದೇಶಭಕ್ತಿ ಕುರಿತು ಶಾಲಾ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ಹಾಗೂ ಸಿಂಧೂರ ಅಪರೇಷನ್ ನೃತ್ಯ ಮೂಲಕ ದೇಶದ ಪರಾಕ್ರಮವನ್ನು ಪ್ರದರ್ಶಿಸಿದರು.

