ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಾನಪದ ಸಾಹಿತ್ಯದ ಮಾಲಿಕರು ಗ್ರಾಮೀಣರು. ಸಮುದಾಯ ಅಂಕು ಡೊಂಕುಗಳನ್ನು ತಿದ್ದುವ ಸಾಮರ್ಥ್ಯ ಜಾನಪದ ಸಾಹಿತ್ಯಕ್ಕೆ ಇದೆ. ಸರಳ ಭಾಷೆಯಿಂದ ಜನಪದ ಸಾಹಿತ್ಯ ಕೂಡಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಸ್ವಾಮೀಜಿಯವರ 92 ನೇ ಜಾತ್ರಾಮಹೋತ್ಸವದಂಗವಾಗಿ ವಚನ ಶಿಲಾಶಾಸನ ಮಂಟಪ ಆವರಣದಲ್ಲಿ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಜಾನಪದ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮೆಲ್ಲರ ಹಿರಿಯರು ಜಾನಪದ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಪಾದಿಸಿ ಅದರಂತೆ ನಡೆದು ಸುಂದರ ಸೌಹಾರ್ದತೆಯ ಮೂಲಕ ಜೀವನ ಕಟ್ಟಿಕೊಂಡು ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ. ಗ್ರಾಮೀಣರು ಜಾನಪದ ಸಾಹಿತ್ಯ ಬೆಳೆಸಿ ಉಳಿಸಿದವರು. ಮೌಖಿಕ ಪರಂಪರೆಯಿಂದ ಬೆಳೆದುಬಂದ ಜನಸಾಮಾನ್ಯರ ಸಾಹಿತ್ಯವಾಗಿದೆ. ಜನಪದ ಗೀತೆಗಳು. ಕಥೆಗಳು. ಗಾದೆಗಳು. ಒಗಟುಗಳು ಪ್ರಖ್ಯಾತಗೊಂಡಿವೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಜನಪದರ ಆಸ್ತಿ ಎಂದರು.
ಸಾಹಿತಿ ಹಾಗೂ ಶಿಕ್ಷಕ ಅಶೋಕ ಹಂಚಲಿ ಅವರು ಜಾನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಕುರಿತು ಮಾತನಾಡಿ, ಜಾನಪದ ಸಾಹಿತ್ಯ ಸಮಾಜದ ಜೀವನಾಡಿ. ಜಾನಪದ ಹಾಡು ಮತ್ತು ಕಥೆಗಳು ಸಾಂಸ್ಕೃತಿಕ ಪರಂಪರೆಯ ಹಾಗೂ ನೈತಿಕ ಮೌಲ್ಯಗಳು ಹಾಗೂ ಬದುಕಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾಧ್ಯಮವಾಗಿದೆ. ಅನೇಕ ಜಾನಪದ ಹಾಡುಗಳನ್ನು ಹಾಡಿ ರೈತರ ಪ್ರಾಮಾಣಿಕ ಜೀವನದ ಮೇಲೆ ಬೆಳಕನ್ನು ಚೆಲ್ಲಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹಾರಿವಾಳ, ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ದೇವೇಂದ್ರ ಗೋನಾಳ, ಜಾನಪದ ಚಿಂತಕ ಬಸವರಾಜ ಸಾರವಾಡ ಜಾನಪದ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಬಾಬುರಾವ ಮಹಾರಾಜರು, ನಿಂಗಪ್ಪ ಬೊಮ್ಮನಹಳ್ಳಿ, ಈರಣ್ಣ ಬೆಕಿನಾಳ, ಸಿ,ಬಿ.ಬಿರಾದಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಎಲ್.ಎಲ್.ಓಂಕಾರ, ಕಾಶೀನಾಥ ಅವಟಿ, ವಿಜಯಲಕ್ಷ್ಮೀ ಹಳಕಟ್ಟಿ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮದ ರೈತರ ಹಂತಿ ಪದ ಹಾಡಿ ರಂಜಿಸಿದರು. ಶಶಿಕಲಾ ನಾಯ್ಕೋಡಿ ಜಾನಪದ ಗೀತಗಾಯನ ಮಾಡಿದರು. ರೇಖಾ ಕುಂಬಾರ ಪ್ರಾಥಿ೯ಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕ ಅಧ್ಯಕ್ಷ ಶಿವಾನಂದ ಡೋಣೂರ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ರೂಪಾ ರಜಪೂತ ವಂದಿಸಿದರು.

