ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಉತ್ತಮ ಮಳೆ, ಕೃಷಿ ಸಮೃದ್ಧಿ ಹಾಗೂ ಜನಜೀವನದ ಒಳಿತಿಗಾಗಿ ತಾಲೂಕಿನ ಮಟ್ಟಿಹಾಳ ಗ್ರಾಮಸ್ಥರು ಮಂಗಳವಾರ ಪಟ್ಟಣದ ಹತ್ತಿರದ ಕೃಷ್ಣಾ ನದಿ ತೀರದಲ್ಲಿ ಸಂಪ್ರದಾಯಬದ್ಧವಾಗಿ ಗಂಗಾ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಹಿಂದೂ ಸಂಪ್ರದಾಯದಲ್ಲಿ ಗಂಗಾಮಾತೆಯ ಆರಾಧನೆಗೆ ವಿಶೇಷ ಮಹತ್ವವಿದ್ದು, ಜಲಾಭಿಷೇಕದ ಮೂಲಕ ವರುಣ ದೇವರನ್ನು ಪ್ರಾರ್ಥಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಬಂದಿದೆ. ಗಂಗಾಜಲವು ಶಿವನಿಗೆ ಅತ್ಯಂತ ಪ್ರಿಯವಾದುದು ಎಂಬ ನಂಬಿಕೆಯಿಂದ ಗ್ರಾಮಸ್ಥರು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಮುಂಗಾರು ಆರಂಭವಾದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ಹೆಚ್ಚಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ತೀವ್ರಗೊಂಡಿದ್ದು, ಕೆರೆ-ಕಟ್ಟೆಗಳು ಬತ್ತುತ್ತಿರುವ ಪರಿಸ್ಥಿತಿಯಲ್ಲಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಮುತ್ತೈದೆಯರು ಕುಂಭದೊಂದಿಗೆ ಕೃಷ್ಣಾ ನದಿ ದಡಕ್ಕೆ ತೆರಳಿ ಗಂಗಾಮಾತೆಗೆ ಅಭಿಷೇಕ ನೆರವೇರಿಸಿದರು. ಅರಿಶಿನ, ಕುಂಕುಮ, ಹೂವು ಹಾಗೂ ನೈವೇದ್ಯವನ್ನು ಅರ್ಪಿಸಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲೆಂದು ಸಂಕಲ್ಪ ಮಾಡಿದರು.
ಪೂಜೆ ಬಳಿಕ ಗ್ರಾಮಸ್ಥರು ಹಾಗೂ ಮಹಿಳೆಯರು ಕೊಲ್ಹಾರದ ಕೃಷ್ಣಾ ನದಿ ದಡದಿಂದ ಹತ್ತಾರು ಕಿಲೋಮೀಟರ್ಗಳ ಪಾದಯಾತ್ರೆ ಮೂಲಕ ಮಟ್ಟಿಹಾಳ ಗ್ರಾಮಕ್ಕೆ ತೆರಳಿ ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿದ್ದು ಬಿರಾದಾರ, ಈರಪ್ಪ ಬಿರಾದಾರ, ಯಮನಪ್ಪ ಬಿರಾದಾರ, ಪರಸು ಗೋಳಗೊಂಡ, ಸಗಪ್ಪ ಅಂಗಡಗೇರಿ, ಸಿದ್ದು ರಾ. ಬಿರಾದಾರ, ಈರಣ್ಣ ಮನಗೂಳಿ, ಹಣಮಂತ ತೇಲಿ, ಪರಸು ಗು. ಗೋಳಗೊಂಡ, ಸಚಿನ್ ಬಿರಾದಾರ, ದುಂಡಪ್ಪ ಪೂಜಾರಿ, ಬೀರು ಪೂಜಾರಿ, ಸಂಗಪ್ಪ ಬಿರಾದಾರ, ಬಸು ಮಟ್ಟಿಹಾಳ ಹಾಗೂ ಹಣಮಂತ ಬಿರಾದಾರ ಸೇರಿದಂತೆ ಗ್ರಾಮಸ್ಥರು ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು.
“ಬರ ಪರಿಸ್ಥಿತಿ ಎದುರಾದರೆ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲೆಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ,”
– ಗೌಡಪ್ಪ ಬಿರಾದಾರ
ಮಟ್ಟಿಹಾಳ ಗ್ರಾಮದ ರೈತ

