ಜಮಖಂಡಿಯಲ್ಲಿ ಕೌಮಿ ಏಕತಾ ಸಮ್ಮೇಳನ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ದಲಿತರ ಮುಸಲ್ಮಾನರು ಸಮಸ್ಯೆಗಳನ್ನು ಒಂದೆಯಾಗಿವೆ, ಸಮಸ್ಯೆಗಳ ಬಗ್ಗೆ ಚಿಂತನೆಗಳು ನಡೆಯಬೇಕಿದೆ, ಒಗ್ಗಟ್ಟಿನಿಂದ ಹೋರಾಟಮಾಡಬೇಕು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಅಬುಬಕರ ದರ್ಗಾ ಮೈದಾನದಲ್ಲಿ ನಡೆದ ಶಹೀದ ಹಜರತ ಟಿಪು ಸುಲ್ತಾನ ಜಯಂತ್ಯೋತ್ಸವ ಸಮೀತಿ ಹಮ್ಮಿಕೊಂಡಿದ್ದ ಕೌಮಿ ಏಕತಾ(ಸರ್ವಧರ್ಮ ಸಮ್ಮೇಳನ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 12 ವರ್ಷಗಳಿಂದ ಭಾರತ ಬದಲಾಗಿದೆ. ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತಿವೆ, ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕು, ಶಿಕ್ಷಣ ಇಲ್ಲದೇ ಬದುಕು ಸಾಗಿಸುವ ಕಾಲ ಇಲ್ಲ ಶಿಕ್ಷಣಕ್ಕೆ ಬಹಳ ಮಹತ್ವವಿದೆ, ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.
ಟಿಪು ಸುಲ್ತಾನರ ಆಡಳಿತ, ಜಾರಿಗೆ ತಂದ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ, ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡಿದ ಅವರ ದೇಶಭಕ್ತಿಯ ಕುರಿತು ಎಲ್ಲರಿಗೂ ಮಾಹಿತಿ ನೀಡುವ ಕೆಲಸವಾಗಬೇಕು. ಇತಿಹಾಸವನ್ನು ತಿಳಿದುಕೊಳ್ಳಬೇಕು ಅದಕ್ಕಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಸರ್ಕಾರದಿಂದ ಮುಸಲ್ಮಾನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಸ್ವಾರ್ಥಕ್ಕಾಗಿ ದೇಶದ ಇತಿಹಾಸವನ್ನು ತಿರುಚುವ ಕೆಲಸ ಗಾನಡೆಯುತ್ತಿದೆ. ದೇಶವನ್ನು ಗಟ್ಟಿಯಾಗಿ ಕಟ್ಟಲು ಶ್ರಮಿಸಿದ ಟಿಪು ಸುಲ್ತಾನರ ಇತಿಹಾಸವನ್ನು ತಿರುಚುವ ಕೆಲಸ ನಡೆದಿದೆ, ಅಂಬೇಡ್ಕರ ನೀಡಿದ ಮತದಾನದ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು, ಶೇ.75ರಷ್ಟಿರುವ ದಲಿತರು, ಮುಸ್ಲಿಂರು ಅಧಿಕಾರ ನಡೆಸುವಂತಾಬೇಕು, ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು, ಕೆಟ್ಟ ಪ್ರವೃತ್ತಿಯನ್ನು ಬಿಟ್ಟು ಒಗ್ಗಟ್ಟಿನಿಂದ ಬಸವತತ್ವಗಳ ಆಚರಣೆಗೆ ತರುವ ಮೂಲಕ ಎಲ್ಲರೂ ಸಮಾನರಾಗಿ ಬದುಕು ನಡೆಸಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನರೇಗಾ ಯೋಜನೆಯಲ್ಲಿದ್ದ ಮಹತ್ಮಾಗಾಂಧಿ ಹೆಸರನ್ನು ತೆಗೆಯುವ ಕೆಲಸ ಮಾಡಿದ್ದಾರೆ ಆದರೆ ದೇಶದ ಜನರ ಮನಸ್ಸಿನಲ್ಲಿರುವ ಅವರ ಚಿಂತನೆಗಳನ್ನು ತೆಗೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ದೇಶವನ್ನು ಸರ್ವಜನಾಂಗದ ಶಾಂತಿಯ ತೊಟ ಮಾಡಲು ಶ್ರಮಿಸುತ್ತಿದೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.
ಹಾವೇರಿಯ ಅಲ್ಲಮಪ್ರಭು ಅಹಿಂದ ಪೀಠದ ಮಹೇಶ್ವರಾನಂದ ಶ್ರೀ ಮಾತನಾಡಿ, ದಲಿತರು, ಓಬಿಸಿಗಳು, ಮುಸ್ಲಿಂಮರು ಸೇರಿ ಶೇ.97 ಜನರಿದ್ದರೂ ಅಧಿಕಾರ ನಮ್ಮಬಳಿ ಇಲ್ಲವಾಗಿದೆ. ಅತ್ಯಂತ ಕಡಿಮೆ ಜನ ಸಂಖ್ಯೆಯ ಜನರು ನಮ್ಮನ್ನು ಆಳುತ್ತಿದ್ದಾರೆ. ಎಲ್ಲ ಹಿಂದುಳಿದ ಸಮಾಜಗಳು ಒಗ್ಗಟ್ಟಾಗಬೇಕು, ದೇಶವನ್ನು ಹಾಳು ಮಾಡಲು ಹೊರಟಿರುವ ಅಧಿಕಾರದಲ್ಲಿರುವರ ವಿರುದ್ಧ ಒಗ್ಗಟ್ಟಾಗಬೇಕು, ಅವರನ್ನು ಯಹೂದಿಗಳು ಎಂದು ಸಂಭೋಧಿಸುತ್ತೇನೆ ಎಂದರು.
ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂಕಮರ ಚತುರ್ವೇದಿ, ಉತ್ತರಪ್ರದೇಶದ ಹಜರತ ಪೀರ ಸೈಯದ ಕಾಸಿಂ ಅಶ್ರಫ, ಬಾಗಲಕೊಟೆಯ ಹಜರತ ಮೌಲಾನಾ ಮೊಹಸೀನಅಹಮದ್, ಕಾರಿ ಸಮಿಉಲ್ಲಾ ಖಾದ್ರಿ, ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲತೀಫ ಖಾನ ಪಠಾಣ ಮಾತನಾಡಿದರು.
ಓಲೆಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು, ಸಮಿತಿಯ ಅಧ್ಯಕ್ಷ ನಜೀರ ಕಂಗನೊಳ್ಳಿ, ಉಪಾಧ್ಯಕ್ಷ ತೌಫಿಕ್ ಪಾರ್ಥನಳ್ಳಿ, ಸಮೀರ ಕಂಗನೊಳ್ಳಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ರಾಜು ಗಸ್ತಿ, ರಿಯಾಜ ಅವಟಿ, ರಫಿಕ್ ಬಾರಿಗಡ್ಡಿ, ಅನ್ವರ ಮೋಮಿನ, ರವಿ ಯಡಹಳ್ಳಿ, ವರ್ದಮಾನ ನ್ಯಾಮಗೌಡ, ದಾನೇಶ ಘಾಟಗೆ, ಅಲ್ತಾಫ ಸಗರ, ಅಬ್ದುಲ್ಸಾಬ ಜಮಾದಾರ, ಯಾಸೀನ ಲೋದಿ, ಅಬುಬಕರ ಕುಡಚಿ, ಇದ್ದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು, ಮಲ್ಲಿಕಾರ್ಜುನ ಮಠ ವಂದಿಸಿದರು.

