ವಿಜಯಪುರದಲ್ಲಿ ನಡೆದ ಕಾನಿಪ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು ಕೂಡಾ ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೀಟು ತೆಗೆದುಕೊಳ್ಳಲು ಪರದಾಡುವ ಬಡ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ಹಂಬಲಿಸುವ ಬಡ ರೋಗಿಗಳು ಹೀಗೆ ಎಲ್ಲ ವಿಷಯಗಳನ್ನು ಮಾನವೀಯ ಅಂತ:ಕರಣದೊಂದಿಗೆ ಆ ಸುದ್ದಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಗಳಿಂದಾಗಿ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸೀಟು ದೊರಕಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದೆ ಎಂದರು.
ಆಧುನಿಕ ಮಾಧ್ಯಮಗಳಿಂದ ಪತ್ರಿಕೆಗಳು ಅಸ್ತಿತ್ವವೇ ಕಳೆದುಕೊಳ್ಳಲಿವೆ ಎಂದು ಅನೇಕರು ಭಾವಿಸಿದ್ದರು, ಪರಿಸ್ಥಿತಿ ಸಹ ಅದೇ ರೀತಿ ಭಾಸವಾಗುವಂತೆ ಮಾಡಿದ್ದರು, ಆದರೆ ಇಂದಿಗೂ ಪತ್ರಿಕೆ ಓದಿದರೆ ಸಮಾಧಾನ, ಹೀಗಾಗಿ ಪತ್ರಿಕೆಗಳು ಇಂದಿಗೂ ಬಹುಮುಖ್ಯ ಪಾತ್ರ ವಹಿಸಿವೆ ಎಂದರು.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ಗಳು ಅಂದಿನ ಅನುಭವ ಮಂಟಪದ ಸ್ವರೂಪಗಳು, ಚುನಾವಣೆಯಿಂದ ಆಯ್ಕೆಯಾಗಲು ಸಾಧ್ಯವಾಗದ ಸಣ್ಣ ಸಮುದಾಯಗಳಿಗೆ, ಕ್ರೀಡೆ, ಪತ್ರಿಕೋದ್ಯಮ, ಸಾಹಿತ್ಯ, ಸಂಗೀತದಲ್ಲಿ ದಿಗ್ಗಜರು ಆಡಳಿತಕ್ಕೆ ಮಾರ್ಗದರ್ಶನ ನೀಡಲು ರಾಜ್ಯಸಭೆ, ವಿಧಾನ ಪರಿಷತ್ ಅಸ್ತಿತ್ವದಲ್ಲಿವೆ, ಆದರೆ ಈಗ ಅವುಗಳು ಸಹ ರಿಯಲ್ ಎಸ್ಟೇಟ್ ಉದ್ಯಮಿದಾರರ ತಾಣವಾಗುತ್ತಿರುವುದು ನೋವಿನ ಸಂಗತಿ ಎಂದರು.
ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ, ಮೊಹರೆ ಹನುಮಂತರಾಯರಂತಹ ಅನೇಕ ಧೀಮಂತ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಬೆಳಗಿದ್ದಾರೆ ಎಂದರು.
ಕಾನಿಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತ ಬಾಂಧವರು ನನ್ನ ಹೆಗಲಿಗೆ ಏರಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಕರ್ತರ ಧ್ವನಿಯಾಗಿ ಕಾರ್ಯ ಮಾಡುವೆ, ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದರು.
ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಅವರು ಎಲ್ಲ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಮೊಹ್ಮದ್ ಸಮೀರ್ ಇನಾಮದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಸದ್ದಾಂ ಹುಸೇನ ಜಮಾದಾರ, ವಿನೋದ ಸಾರವಾಡ, ಕೋಶಾಧ್ಯಕ್ಷ ರಾಹುಲ್ ಆಪ್ಟೆ, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ಇರ್ಫಾನ್ ಶೇಖ್, ಚಿದಂಬರ (ಪುಟ್ಟು) ಕುಲಕರ್ಣಿ, ಗುರು ಗದ್ದನಕೇರಿ, ಗೋಪಾಲ ಕನಿಮಣಿ, ಶಂಕರ ಜಲ್ಲಿ, ಕಲ್ಲಪ್ಪ ಶಿವಶರಣ, ಸುಧೀಂದ್ರ ಕುಲಕರ್ಣಿ, ಪ್ರಭು ಕುಮಟಗಿ, ಶ್ರೀನಿವಾಸ ಸೂರಗೊಂಡ, ಪವನ ಕುಲಕರ್ಣಿ, ಸಂಜು ಕೋಳಿ, ಯಲಗೊಂಡ ಬೇವನೂರ, ಶಿವಾನಂದ ಶಿವಶರಣ, ಸುರೇಶ ತೇರದಾಳ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಅಖಂಡಪ್ಪಗೋಳ ವೇದಿಕೆ ಮೇಲಿದ್ದರು.
ಈ ವೇಳೆ ಎಲ್ಲ ತಾಲೂಕಾ ಘಟಕದ ಪದಾಧಿಕಾರಿಗಳಿಗೆ ಹೃದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು.
ಇದೇ ವೇಳೆ ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರು ರಚಿಸಿದ `ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಸೂಕ್ತಿಗಳು’ ಪುಸ್ತಕ ಲೋಕಾರ್ಪಣೆಗೊಂಡಿತು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ನಿರೂಪಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ ವಂದಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಜುಳಾ ಹಿಪ್ಪರಗಿ ಮತ್ತು ಗಾಯಕ ಪರಶುರಾಮ ಬಿಜಾಪೂರ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಜಿಲ್ಲೆಯ ಹಿರಿಯ ಪತ್ರಕರ್ತರು, ವಿವಿಧ ಪದಾಧಿಕಾರಿಗಳು, ಕಾನಿಪ ತಾಲೂಕಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೦ ಲಕ್ಷ ರೂ. ಅನುದಾನ
ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪತ್ರಕರ್ತರ ಭವನಕ್ಕೆ ಪೂರಕ ಸೌಲಭ್ಯ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ೧೦ ಲಕ್ಷ ರೂ. ಅನುದಾನ ಒದಗಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ವಾಗ್ದಾನ ಮಾಡಿದರು.

ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿ ನೈಜ ಪತ್ರಕರ್ತರು :ತಗಡೂರ
ನೈಜ ಪತ್ರಕರ್ತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ತಾವೇ ಹೋರಾಟ ಮಾಡುವ ಅವಶ್ಯಕತೆ ಇದೆ, ಇಂದಿನ ಬ್ಲಾಕ್ಮೇಲ್ ಮಾಡುವ ಕೆಲವು ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಮಧ್ಯೆ ನೈಜತೆ, ನಿಖರತೆಯ ಜವಾಬ್ದಾರಿ ನಿಭಾಯಿಸುವತ್ತ ಮುನ್ನಡೆಯಬೇಕಿದೆ ಎಂದು ಕಾನಿಪ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ನುಡಿದರು.
ಸದುದ್ದೇಶದಿಂದ ಪತ್ರಿಕೋದ್ಯಮಕ್ಕೆ ಧುಮುಕುವ ಎಲ್ಲರಿಗೂ ಬೆನ್ನುತಟ್ಟಿ ಪ್ರೋತ್ಸಾಹಿಸೋಣ, ಬ್ಲಾಕ್ ಮೇಲ್ ಅನುಸರಿಸಿ ಪತ್ರಿಕೋದ್ಯಮದ ಪವಿತ್ರ ವೃತ್ತಿಗೆ ಮಸಿ ಬಳಿಯುವವರ ವಿರುದ್ಧ ಧ್ವನಿ ಎತ್ತೋಣ, ಇಂದು ಕಳೆದು ಹೋಗಿರುವ ಪತ್ರಿಕೋದ್ಯಮದ ಘನತೆ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕಂಕಣ ಬದ್ದರಾಗೋಣ ಎಂದರು.
ಬ್ರೇಕಿಂಗ್ ನ್ಯೂಸ್ ಧಾವಂತದಿಂದ ಅನೇಕರ ಮನಸ್ಸುಗಳಿಗೆ ಬ್ರೇಕ್ ಆಗಿದ್ದುಂಟು, ಅನೇಕರಿಗೆ ಘಾಸಿಉಂಟಾಗಿದ್ದುಂಟು. ನಮ್ಮ ಸುದ್ದಿಗಳಿಂದ ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಹುದು ಎಂಬ ಪ್ರಜ್ಷೆ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ಶಿವಾನಂದ ತಗಡೂರ ಸಲಹೆ ನೀಡಿದರು.

ಸಚಿವ ಎಂ.ಬಿ.ಪಾಟೀಲರಿಗೆ “ಉದಯರಶ್ಮಿ” ಸಂಪಾದಕರಿಂದ ಸನ್ಮಾನ
ಕಾರ್ಯಕ್ರಮದಲ್ಲಿ ಕಾನಿಪ ಸಂಘದ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರನ್ನು ಕಾನಿಪ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅಶೋಕ ಯಡಹಳ್ಳಿ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಹಾಗೂ “ಉದಯರಶ್ಮಿ” ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಜಂಟಿಯಾಗಿ ಗೌರವಿಸಿ ಸನ್ಮಾನಿಸಿದರು.

