ಅಖಿಲ ಭಾರತ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭವಗೋಷ್ಠಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಭಾರತೀಯ ಸಾಂಸ್ಕೃತಿಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ ಎಂದು ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣದಲ್ಲಿ ಸರ್ವಕಾಲಿಕ ಮೌಲ್ಯಗಳು, ಜನಪರ ನಿಲವುಗಳು, ಪೂರ್ಣಪ್ರಜ್ಞೆ ವಾಸ್ತವತೆಯ ಪ್ರತಿರೂಪ ಮೌಲ್ಯಗಳ ವಿವಿಧ ಸಂಸ್ಕೃತಿಗಳ ಸಮನ್ವಯತೆ ತಿಳುವಳಿಕೆಯ ವಿಶ್ವಕೋಶವಿದೆ. ರಾಮಾಯಣದ ತತ್ವ ಆದರ್ಶಗಳನ್ನು ಅದರಂತೆ ಮೂಲ ಅಂಶಗಳು ಬೆಳಕಿಗೆ ಬರಬೇಕಾಗಿದೆ. ಮೂಲಕಾವ್ಯದ ಪಾತ್ರಗಳ ಮೂಲಕ ಜವಾಬ್ದಾರಿ ಮತ್ತು ಕರ್ತವ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಮಹಾಸಭೆಯ ಕೋಶಾಧ್ಯಕ್ಷ ಮ.ಗು. ಯಾದವಾಡ ಮಾತನಾಡಿ, ಇತಿಹಾಸವನ್ನು ತಿಳಿದುಕೊಂಡು ಸಮಾಜದ ಜನರನ್ನು ಜಾಗೃತಿ ಮಾಡಬೇಕು. ರಾಷ್ಟ್ರೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡುತ್ತ, ಭಾರತದ ಭವ್ಯ ಪರಂಪರೆಯಲ್ಲಿ ರಚಿತವಾದ ಮೂಲ ರಾಮಾಯಣ ಜ್ಞಾನವನ್ನು ಕುರಿತಾಗಿದೆ. ಮಹರ್ಷಿ ವಾಲ್ಮೀಕಿ ಸಂಸ್ಕೃತವನ್ನು ಕಲಿತು ರಾಮಾಯಣ ರಚಿಸಿದ್ದಾರೆ. ಶ್ರೇಷ್ಠತೆ ಮೌಲ್ಯಗಳನ್ನು ಹೊಂದಿರುವ ರಾಮನ ಜೀವನ ಕುರಿತಾಗಿ ಪರಿಚಯಿಸುವಲ್ಲಿ ಸರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ಸನ್ಮಾರ್ಗಕ್ಕೆ ಒಯ್ಯುವ ದಾರಿದೀಪವಾಗಿವೆ. ೨೪ ಸಾವಿರ ಶ್ಲೋಕಗಳನ್ನು ಹೊಂದಿದ ಅವೆಲ್ಲವೂ ಮಾನವ ಕುಲದ ಸೈದ್ದಾಂತಿಕ ವಿಚಾರಧಾರೆಗಳನ್ನು ಜ್ಞಾನದ ಚಿಂತನೆಯನ್ನು ತಿಳಿಸಿಕೊಡುತ್ತದೆ. ಅವುಗಳನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶರಣೆ ಅಕ್ಕಮಹಾದೇವಿ ಬುರ್ಲಿ, ಬಿ.ಆರ್. ಬನಸೋಡೆ ವಚನಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಡಾ. ವಿ.ಡಿ. ಐಹೊಳ್ಳಿ, ಮಹಾದೇವ ಹಾಲಳ್ಳಿ, ಎಸ್.ಎಸ್. ಪಾಟೀಲ, ಅಪ್ಪಾಸಾಹೇಬ ಕೋರಿ, ಜಂಬುನಾಥ ಕಂಚ್ಯಾಣಿ, ಈರಣ್ಣ ತೊಂಡಿಕಟ್ಟಿ, ಸುಭಾಸ ಯಾದವಾಡ, ಜಗದೀಶ ಮೋಟಗಿ, ಮಲ್ಲಿಕಾರ್ಜುನ ಅಮರಣ್ಣವರ ಉಪಸ್ಥಿತರಿದ್ದರು.
ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಉಪಾಧ್ಯಕ್ಷ ಸಹದೇವ ನಾಡಗೌಡರ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು. ಶರಣರು, ಶರಣೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

