ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮಪದವು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲಸಂಗಿ ಗೆಳೆಯರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಉಜಿರೆಯ ಎಸ್ಡಿಎಂ ಕಾಲೇಜಿನ ಪ್ರೊ: ರಾಜಶೇಖರ ಹಳೆಮನೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಲಸಂಗಿ ಗೆಳೆಯರ ಸಾಹಿತ್ಯಿಕ ಚಟುವಟಿಕೆಗಳು ಸದಾ ಸ್ಮರಣೀಯ. ಅವರು ಆ ಕಾಲದಲ್ಲಿ ಜಾನಪದ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದರು. ಸಾಂಸ್ಕೃತಿಕ ವಿನಿಮಯದ ನಿಜವಾದ ಅರ್ಥ ಈ ಕಾರ್ಯಕ್ರಮದ ಮೂಲಕ ಈಡೇರಿದೆ. ಮಧುರಚೆನ್ನರ ಸಾಹಿತ್ಯಿಕ ಆಶಯಗಳು ವರ್ತಮಾನವನ್ನು ಬಹಳ ಪ್ರಭಾವಿಸುತ್ತಿವೆ. ಅವರ ಕೃತಿಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಶಂಕರ ಬೈಚಬಾಳ ಹಲಸಂಗಿ ಗೆಳೆಯರ ಹಾಡು ಪಾಡು ಕುರಿತು ಉಪನ್ಯಾಸ ನೀಡಿ, ನುಡಿ ಪ್ರಜ್ಞೆಯ ಸಾರ್ಥಕ ರೂಪಕವಾಗಿ ಹಲಸಂಗಿ ಗೆಳೆಯರ ಜಾನಪದೀಯ ಕೃತಿಗಳು ಮೂಡಿ ಬಂದಿವೆ. ಸಾಂಸ್ಕೃತಿಕ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅವು ತೆರೆದಿಟ್ಟಿವೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ: ಜಯರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ರಮೇಶ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ವಿಶಾಲ ಪಿಂಟೋ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಲೋಹಿತ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪುಟ್ಟಲಕ್ಷಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಭಿಜೀತ ನೀಲಕಂಠೇಶ್ವರ ಕಲಾ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಕುವೆಂಪು ಅವರ ರಾಮಾಯಣ ದರ್ಶನಂ ಕಾವ್ಯದ ರೂಪಕ ಕಲಾ ಪ್ರದರ್ಶನ ಜರುಗಿತು.
