ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಇ-ಕೆವೈಸಿ ಮಾಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ ತಿಳಿಸಿದರು.
ತಾಲ್ಲೂಕಿನ ಚಿಕ್ಕರೂಗಿ ಗ್ರಾಮಪಂಚಾಯಿತಿಯಲ್ಲಿ ಶನಿವಾರ ಇ-ಕೆವೈಸಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲ್ಲೂಕಿನ ಒಟ್ಟು ೧೪ ಗ್ರಾಮ ಪಂಚಾಯಿತಿಗಳ ಪೈಕಿ ೧೬೯೯೫ ಸಕ್ರಿಯ ಉದ್ಯೋಗ ಕಾರ್ಡ್ಗಳಿದ್ದು. ಅದರಲ್ಲಿ ಈಗಾಗಲೇ ೨೮೦೮ ಇ-ಕೆವೈಸಿ ಮಾಡಲಾಗಿದೆ. ಹೆಚ್ಚಾಗಿ ಮಣೂರು ೨೩೮೭, ಜಾಲವಾದ ೧೮೭೯, ಹುಣಿಶ್ಯಾಳ ೧೭೦೮ ಉದ್ಯೋಗ ಕಾರ್ಡ್ ಗಳಿದ್ದು ಬಾಕಿ ಉಳಿದ ಎಲ್ಲಾ ಉದ್ಯೋಗ ಕಾರ್ಡ್ಗಳನ್ನು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ರವರು ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಈ ತಿಂಗಳು ಪೂರ್ಣಗೊಳಿಸಬೇಕು ಎಂದರು.
ಗ್ರಾಮೀಣ ಉದ್ಯೋಗಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೋಂದಾಯಿತ ಕೂಲಿಕಾರರ ಕಾರ್ಡ್ಗಳನ್ನು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ ಎಂದರು.
ಐಇಸಿ ಸಂಯೋಜಕ ಸಿದ್ದು ಕಾಂಬಳೆ ಗ್ರಾಮದ ಸಂತೆಯಲ್ಲಿ ೧೦೦ಕ್ಕೂ ಹೆಚ್ಚು ಕೂಲಿಕಾರರ ಇ-ಕೆವೈಸಿ ಮಾಡಿದರು.
ಪಿಡಿಓ ಶಿವಾನಂದ ಮೂಲಿಮನಿ, ಸಂದೀಪ ಚವ್ಹಾಣ, ಬಾಬು ಖೋಜಗಾರ, ಶಿವಶಂಕರ ಹಡಪದ ಸಹಿತ ಗ್ರಾಮಸ್ಥರು ಇದ್ದರು.

