ಲೇಖನ- ವೀಣಾ ಹೇಮಂತ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಭಾರತ ದೇಶವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಹೆಜ್ಜೆ ಹೆಜ್ಜೆಗೂ ವಿವಿಧ ವೇಷ ಭೂಷಣ ಭಾಷೆ ಮತ್ತು ಸಂಸ್ಕೃತಿಗಳನ್ನು ಒಡಗೂಡಿಸಿಕೊಂಡಿರುವ ನಮ್ಮ ದೇಶದಲ್ಲಿ ಎಲ್ಲರೂ ಸಾರ್ವತ್ರಿಕವಾಗಿ ಆಚರಿಸುವ, ಆನಂದಿಸುವ ಹಬ್ಬ ದೀಪಾವಳಿ. ದೀಪಾವಳಿ ಎಂಬ ಹೆಸರನ್ನು ಕೇಳಿದ ಕೂಡಲೇ ಕಣ್ಣ ಮುಂದೆ ಕತ್ತಲನ್ನು ದೂರ ಮಾಡುವ ಬೆಳಕನ್ನು ಸೂಸುವ ಸಾಲು ಹಣತೆಗಳ ಸಾಲು ನರ್ತನಗೈಯುತ್ತದೆ.
ದೀಪಾವಳಿ ಹಬ್ಬ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ, ಇದು ಸಾಲು ಸಾಲು ಹಬ್ಬಗಳ ಆಚರಣೆಯ ಹಬ್ಬ. ಸುಮಾರು ಐದು ದಿನಗಳ ಕಾಲ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬ ಜಗತ್ತಿನಾದ್ಯಂತ ತನ್ನ ಬೆಳಕನ್ನು ಪಸರಿಸುತ್ತದೆ.
ಪೌರಾಣಿಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಹೊಂದಿರುವ ದೀಪಾವಳಿ ಹಬ್ಬ ನಮ್ಮ ದೇಶದ ಪ್ರಮುಖ ರಾಷ್ಟ್ರೀಯ ಹಬ್ಬವಾಗಿ ಪರಿಗಣಿಸಲ್ಪಟ್ಟಿದೆ.
ರಾಮನು ಸ್ವರ್ಣಲಂಕೆಯಲ್ಲಿ ರಾಕ್ಷಸೇಂದ್ರ ರಾವಣನನ್ನು ಕೊಂದು, ಆತನ ಸಹೋದರ ವಿಭೀಷಣನಿಗೆ ಪಟ್ಟ ಕಟ್ಟಿ, ಅಯೋಧ್ಯೆಯೆಡೆಗೆ ಪ್ರಯಾಣ ಬೆಳೆಸಿದ. ಕಾರ್ತಿಕದ ಆ ಕತ್ತಲಿನಲ್ಲಿ ರಾಮನ ಸ್ವಾಗತಕ್ಕಾಗಿ ಇಡೀ ಅಯೋಧ್ಯಾ ರಾಜ್ಯವೇ ದೀಪವನ್ನು ಹಚ್ಚಿ ಸ್ವಾಗತ ಕೋರಿತು. ಅದರ ಸವಿ ನೆನಪಿನ ದಿನವೇ ದೀಪಾವಳಿ. ದೀಪಾವಳಿ ಹಬ್ಬವು ದುಷ್ಟದಮನ ಮತ್ತು ಶಿಷ್ಟರಕ್ಷಣೆಯ ಪ್ರತೀಕವಾಗಿ ಆಚರಿಸಲ್ಪಡುವ ಹಬ್ಬ.
ದೀಪಗಳ ಹಬ್ಬ ದೀಪಾವಳಿ

ಅಜ್ಞಾನವನ್ನು ಕಳೆಯುವ ಜ್ಞಾನ ಜ್ಯೋತಿ ಬೆಳಗಿಸುವ ಹಬ್ಬ ದೀಪಾವಳಿ. ತಮಸೋಮ ಜ್ಯೋತಿರ್ಗಮಯ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ.
ಹಿಂದುಗಳು, ಸಿಕ್ಕರು ಮತ್ತು ಜೈನರು ಈ ಹಬ್ಬವನ್ನು ಆಚರಿಸುತ್ತಾರೆ. ಜಾಗತೀಕರಣದ ಈ ಘಳಿಗೆಯಲ್ಲಿ ಇಡೀ ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಮತ್ತು ಮರುದಿನ ಬಲಿಪಾಡ್ಯಮಿಯಂದು ಸರಸ್ವತಿ ಪೂಜೆಯ ಮೂಲಕ ಸಾಂಕೇತಿಕವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
ಗ್ರಾಮೀಣ ಭಾಗದಲ್ಲಂತೂ ದೀಪಾವಳಿ ಹಬ್ಬದ ಸಡಗರ ಇನ್ನೂ ಹೆಚ್ಚು. ದಸರೆಯ ನಂತರ ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಹಚ್ಚಿಸಿ ಮನೆಯನ್ನು ಸಿಂಗರಿಸುತ್ತಾರೆ. ಬಗೆ ಬಗೆಯ ದೀಪದ ಸರಗಳನ್ನು ತಂದು ಮನೆಯನ್ನು ಅಲಂಕರಿಸುತ್ತಾರೆ. ಮನೆ ಮಂದಿಗೆಲ್ಲಾ ಹಬ್ಬದ ಬಟ್ಟೆ, ಸ್ವಲ್ಪ ಅನುಕೂಲ ಹೆಚ್ಚೇ ಇದ್ದರೆ ಚಿನ್ನದ ಒಡವೆ, ವಾಹನ ಮತ್ತು ಗೃಹೋಪಯೋಗಿ ಸಾಮಾನುಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುತ್ತಾರೆ.
ಅಮಾವಾಸ್ಯೆಗೆ ಎರಡು ದಿನ ಮುಂಚೆ ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ಈ ತ್ರಯೋದಶಿಯ ದಿನವನ್ನು ಉತ್ತರ ಭಾರತದಲ್ಲಿ ಧನತೆರೇಸ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಈ ದಿನದಂದು ಏನನ್ನೇ ಖರೀದಿಸಿದರೂ ಅದು ಅಕ್ಷಯವಾಗುತ್ತದೆ ಎಂಬ ಬಲವಾದ ನಂಬಿಕೆ.
ಇನ್ನು ಅಮಾವಾಸ್ಯೆಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸಿ, ಆರಾಧಿಸುವ ದಿನ. ಆ ದಿನ ಪೂರ್ವಾಹ್ನದ ವೇಳೆ ಪೂಜೆಯ ನಿಯಮವಿರುವವರು ತಮ್ಮ ತಮ್ಮ ಮನೆಗಳಲ್ಲಿ ನಿಶ್ಚಿತವಾದ ಜಾಗಗಳಲ್ಲಿ ಮಹಾಲಕ್ಷ್ಮಿಯ ವಿಗ್ರಹವನ್ನು ಫೋಟೋವನ್ನು ಇಟ್ಟು ಅದರ ಮುಂದೆ ಶಾಸ್ತ್ರೋಕ್ತವಾಗಿ ಕಳಶ ಸ್ಥಾಪನೆ ಮಾಡಿ ಗಣಪತಿ ಪೂಜೆ, ಸಂಕಲ್ಪ, ಮಹಾಲಕ್ಷ್ಮಿ ಪೂಜೆ ಮಾಡಿ ಹೋಳಿಗೆ ಪಾಯಸಗಳ (ಗೋಧಿ ಹುಗ್ಗಿಯ), ಕೋಸಂಬರಿ, ಬದನೆಕಾಯಿ ಇಲ್ಲವೇ ಹೀರೇಕಾಯಿ ಪಲ್ಯ ಅನ್ನ ತುಪ್ಪ ಸಾರು ಹೀಗೆ ಹಲವಾರು ಭಕ್ಷಗಳ ನೈವೇದ್ಯವನ್ನು ಅರ್ಪಿಸುತ್ತಾರೆ. ಜೀವನ ಚೆನ್ನಾಗಿ ಸುಖಮಯವಾಗಿ ಸಮೃದ್ಧಿಯಿಂದ ಸಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡು, ಮಹಾ ಮಂಗಳಾರತಿ ಮಾಡಿ, ಕಾಯಿ ಒಡೆದು ನೈವೇದ್ಯ ಮಾಡುತ್ತಾರೆ. ನಂತರ ತಮ್ಮ ನೆಂಟರಿಷ್ಟರೊಂದಿಗೆ ಹಬ್ಬದ ಊಟ ಸವಿಯುತ್ತಾರೆ.
ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ರಾತ್ರಿಯ ಸಮಯದಲ್ಲಿ ಮಾಡುತ್ತಾರೆ. ಇಡೀ ಊರು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕೃತವಾಗಿ, ಮಣ್ಣಿನ ಹಣತೆಯ ಸಾಲಾಗಿಟ್ಟ ದೀಪಗಳ ಜಗಮಗಿಸುವ ಕಾಂತಿ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಪ್ರತಿ ಅಂಗಡಿಯಲ್ಲಿಯೂ ಪೂಜೆಯ ನಂತರ ಮಂಡಕ್ಕಿ ಡಾಣಿ ಕೊಬ್ಬರಿಯ ಚೂರು ಮತ್ತು ಸಿಹಿಯನ್ನು ಹಂಚುತ್ತಾರೆ. ಮನೆಗಳಲ್ಲಿ ಪೂಜೆ ಮುಗಿಸಿದ ಜನ ತಮಗೆ ಆಹ್ವಾನವಿತ್ತ ಅಂಗಡಿ, ಮುಂಗಟ್ಟುಗಳ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ದೇವರಿಗೆ ನಮಸ್ಕರಿಸಿ ತಾಂಬೂಲ ಪಡೆಯುತ್ತಾರೆ. ಇನ್ನು ಕೆಲವರು ತಮ್ಮ ಮನೆಯ ಎಲ್ಲಾ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸುತ್ತಾರೆ. ಮನೆಗಳು ಅಂಗಡಿಗಳು ಸರ್ವಾಲಂಕೃತವಾಗಿ ಸಜ್ಜಾಗಿರುತ್ತವಷ್ಟೇ. ಪೂಜೆಯ ನಂತರ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ
ಈ ದಿನವೇ ನರಕಾಸುರನ ಸಂಹಾರವಾದ ದಿನ. ನರಕಾಸುರನ ಸಂಹಾರ ಮಾಡಿದ ಜ್ಞಾಪಕಾರ್ಥವಾಗಿ ಮನೆಯ ಸುತ್ತಲೂ,ದೀಪಗಳನ್ನು ಹೊತ್ತಿಸಿಟ್ಟು ಪಟಾಕಿ ಹಚ್ಚಿ ಬಗೆ ಬಗೆಯ ಹೂಬಾಣಗಳನ್ನು ಬಿಟ್ಟು ರಂಗುರಂಗಿನ ದೀಪಾವಳಿಯನ್ನು ಆಚರಿಸುತ್ತಾರೆ.
ನಾಲ್ಕನೆಯ ದಿನವೇ ಪಾಡ್ಯ. ಇದನ್ನು ಬಲಿಪಾಡ್ಯಮಿ ಎಂದು ಕೂಡ ಕರೆಯುತ್ತಾರೆ. ವಿಷ್ಣುವು ಬಲಿ ಚಕ್ರವರ್ತಿಗೆ ನೀಡಿದ ವರದ ಪ್ರಕಾರ ಈ ದಿನ ಬಲಿಯ ದಾನ ಗುಣವನ್ನು ನೆನೆಸುವ ನಿಟ್ಟಿನಲ್ಲಿ ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ.
ಪಾಡ್ಯದ ಈ ದಿನದಂದು ಮುಂಜಾನೆಯೇ ಮನೆಯ ಎಲ್ಲರೂ ಎಣ್ಣೆ(ಎಣ್ಣೆ ಮಜ್ಜನ)ಮತ್ತು ಬಿಸಿ ನೀರಿನ ಅಭ್ಯಂಗ ಸ್ನಾನ ಮಾಡುತ್ತಾರೆ. ಮನೆಯ ಎಲ್ಲಾ ಪುರುಷ ಸದಸ್ಯರಿಗೂ ಮನೆಯ ಪುಟ್ಟ ಹೆಣ್ಣುಮಕ್ಕಳಿಂದ ಹಿರಿಯ ಹೆಂಗಸರವರೆಗೂ ಸೇರಿ ತಿಲಕವಿಟ್ಟು ಕಂಕಣ ಕಟ್ಟಿ ಅಕ್ಷತೆ ಹಾಕಿ ಆರತಿ ಮಾಡಿ ಹಾರೈಸುತ್ತಾರೆ. ಹೀಗೆ ಹಾರೈಸುವ ಹೆಣ್ಣು ಮಕ್ಕಳಿಗೆ ಆರತಿಯ ತಟ್ಟೆಯಲ್ಲಿ ತಮ್ಮ ಶಕ್ತ್ಯಾನುಸಾರ ಹಣ, ಚಿನ್ನ, ಬಟ್ಟೆಗಳ ಉಡುಗೊರೆ ದೊರೆಯುತ್ತದೆ. ಶಾವಿಗೆ ಪಾಯಸ ಈ ದಿನದ ಮುಖ್ಯ ಆಹಾರ. ಶಾವಿಗೆ ಸಂಘಟನೆಯ ಪ್ರಾಮುಖ್ಯತೆಯನ್ನು ಸಾರುವ ಆಹಾರ. ಶಾವಿಗೆಯಂತೆ ನಾವೆಲ್ಲರೂ ಕೌಟುಂಬಿಕವಾಗಿ ತಳುಕು ಹಾಕಿಕೊಂಡಿರಬೇಕು ಎಂಬ ಸಂದೇಶವನ್ನು ಆಹಾರದ ಮೂಲಕ ನಾವು ಪಡೆಯುತ್ತೇವೆ.
ಮುಖ್ಯವಾಗಿ ದೀಪಾವಳಿ ಹಬ್ಬದ ಉದ್ದೇಶ ಸತ್ಯಮೇವ ಜಯತೆ ಎಂಬ ಸಂದೇಶವನ್ನು ನೀಡುವುದು.ಸತ್ಯವು ಯಾವಾಗಲೂ ಗೆಲ್ಲುತ್ತದೆ ಎಂದು ಸಾರುವ ಎಲ್ಲ ಪೌರಾಣಿಕ, ಐತಿಹಾಸಿಕ ಘಟನೆಗಳನ್ನು ನೆನಪಿಸಿಕೊಂಡು, ಮನುಷ್ಯ ದೈಹಿಕವಾಗಿ ಸಾಮಾಜಿಕವಾಗಿ ಭಾವನಾತ್ಮಕವಾಗಿ ಎಷ್ಟೇ ಜರ್ಜರಿತನಾಗಿದ್ದರು ತನಗೂ ಒಂದು ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ಆಶಿಸುವ, ಭರವಸೆ ಮತ್ತು ವಿಶ್ವಾಸ ಹುಟ್ಟಿಸುವ, ಸಂಬಂಧಗಳಲ್ಲಿ ಆತ್ಮೀಯತೆಯನ್ನು ಹೆಚ್ಚಿಸುವ ಹಬ್ಬ ದೀಪಾವಳಿ.
ಎಲ್ಲರಿಗೂ ಈ ದೀಪಾವಳಿ ಹಬ್ಬವೂ ಮಂಗಳಕರವಾಗಿರಲಿ ಎಂಬ ಆಶಯದೊಂದಿಗೆ..


