ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಬಲೇಶ್ವರದಲ್ಲಿ ಬಯಲಾಟ ಕಲಾವಿದರ ಸಮೀಕ್ಷೇಯನ್ನು ಇತ್ತೀಚಿಗೆ ನಡೆಸಲಾಯಿತು. ಪಟ್ಟಣದ ಹನುಮಾನ ದೇವಸ್ಥಾನದ ಆವರಣದಲ್ಲಿ ತಾಲೂಕಿನ ಹಲವಾರು ಜನ ಕಲಾವಿದರು ಪಾಲ್ಗೊಂಡು ತಂತಮ್ಮ ಮಾಹಿತಿಯನ್ನು ಹಂಚಿಕೊಂಡು ದಾಖಲಿಸಿದರು.
ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ. ಆರ್. ದುರ್ಗಾದಾಸ ಅವರ ಸೂಚನೆಯ ಮೇರೆಗೆ ವಿಜಯಪುರ ಜಿಲ್ಲೆಯಲ್ಲಿ ಕಲಾವಿದರ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಸಮೀಕ್ಷಕಿ, ನಿವೃತ್ತ ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಮೀನಾಕ್ಷಿ ಪಾಟೀಲ (ಕಲ್ಯಾಣಿ) ಹೇಳಿದರು.
ಬಯಲಾಟ ಆಸಕ್ತರಲ್ಲಿ ಹಲವಾರು ಜನ ಡಾಕ್ಟರೇಟ್ ಪದವಿ ಪಡೆದವರಾಗಿದ್ದಾರೆ. ಗ್ರಾಮೀಣ ಜನತೆ ತಮ್ಮ ನಿತ್ಯದ ಕೃಷಿ ಕಾಯಕದೊಂದಿಗೆ ಈಗಲೂ ಈ ಕಲೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿ ಎಂದರು. ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಇಂಥ ಅಪರೂಪದ ಮೂಲ ಕಲೆಗಳು ಮರೆಯಾಗುತ್ತಿರುವುದನ್ನು ಮನಗಂಡು, ಮತ್ತೆ ಅದನ್ನು ವರ್ತಮಾನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕಲೆಯನ್ನು ಜೀವಂತವಾಗಿರಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಬಬಲೇಶ್ವರ ತಾಲೂಕಿನ ಬಯಲಾಟ ತಜ್ಞರು ಭಾಗಿಯಾಗಿ ಹಂಚಿಕೊಂಡ ಮಾಹಿತಿಯನ್ನು ದಾಖಲಿಸಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಕಲಾವಿದರ ಜೀವಿತ ಪ್ರಮಾಣ ಪತ್ರವನ್ನು ವರ್ಷಕ್ಕೆ ಎರಡು ಬಾರಿ ನೀಡಬೇಕೆನ್ನುವ ಅಕಾಡೆಮಿಯ ಆದೇಶವನ್ನು ರದ್ದುಪಡಿಸಿ ಮೊದಲಿನಂತೆ ವರ್ಷಕ್ಕೆ ಒಮ್ಮೆ ಪ್ರಮಾಣ ಪತ್ರ ಪಡೆಯಲು ಆಗ್ರಹಿಸಲಾಯಿತು. ನಿರಂತರ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಹಲವಾರು ಬಡ ಕಲಾವಿದರನ್ನು ಆರ್ಥಿಕವಾಗಿಯೂ ಮೇಲೆತ್ತುವ, ಮಾಶಾಸನವೂ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿವ ಕೆಲಸ ಮಾಡಬೇಕೆಂದು ಅಕಾಡೆಮಿಯ ಅಧ್ಯಕ್ಷರಲ್ಲಿ ಒಕ್ಕೊರಲಿನ ವಿನಂತಿಯನ್ನು ಮಾಡಿಕೊಳ್ಳಲಾಯಿತು.