ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಸಮಾಲೋಚನಾ ಸಭೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಶತಮಾನದ ಇತಿಹಾಸ ಹೊಂದಿರುವ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಶೇರುದಾರರು, ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಫೆನಲ್ ಆಯ್ಕೆ ಮಾಡುವಂತೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.
ಪಟ್ಟಣದ ಬಸವ ಭವನದಲ್ಲಿ ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆ ಆಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದಿರುವ ಹಾಲಿ ಆಡಳಿತ ಮಂಡಳಿ ತಂಡವನ್ನೇ ಆಯ್ಕೆ ಮಾಡುವಂತೆ ಕೋರಿದರು.
ಲಾಭದಲ್ಲಿರುವ ಸದರಿ ಬ್ಯಾಂಕಿಗೆ ಚುನಾವಣೆ ವೆಚ್ಚ ತಪ್ಪಿಸಲು ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ದುರ್ದೈವದಿಂದ ಚುನಾವಣೆ ಎದುರಾಗಿದೆ. ಹೀಗಾಗಿ ಹಾಲಿ ಫೆನಲ್ ಗೆಲ್ಲಿಸುವ ಮೂಲಕ ಸಹಕಾರಿ ರಂಗದ ಸಿದ್ದೇಶ್ವರ ಬ್ಯಾಂಕ್ ಹಿರಿಮೆ ಹೆಚ್ಚಿಸಿ ಎಂದು ಮನವಿ ಮಾಡಿದರು.
ಡಾ.ಫ.ಗು. ಹಳಕಟ್ಟಿ ಅವರಂತಹ ಮಹನೀಯರ ದೂರದೃಷ್ಟಿಯಿಂದ ಸ್ಥಾಪನೆಯಾಗಿರುವ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಒಂದು ಕಾಲದಲ್ಲಿ ಅತ್ಯಂತ ಉತ್ತುಂಗದಲ್ಲಿತ್ತು. ಆದರೆ ಮಧ್ಯದಲ್ಲಿ ಆಡಳಿತ ವೈಫಲ್ಯದಿಂದಾಗಿ ಹಾನಿಗೆ ಈಡಾಗಿತ್ತು. ಆದರೆ ಹಾಲಿ ಆಡಳಿತ ಮಂಡಳಿ ಕಳೆದ ಮೂರು ಅವಧಿಗೆ ಸಮರ್ಥ ಆಡಳಿತದಿಂದ ಹಾನಿಯಿಂದ ಮುಕ್ತವಾಗಿ ಲಾಭದಲ್ಲಿ ಸಾಗುತ್ತಿದ್ದು, ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲು ಹಾಲಿ ತಂಡವನ್ನೇ ಆಯ್ಕೆ ಮಾಡಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಹಕಾರಿ ರಂಗದ ಪ್ರಮುಖರಾದ ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಿ.ಎಸ್. ಪಾಟೀಲ ಯಾಳಗಿ, ಐ.ಸಿ.ಪಟ್ಟಣಶೆಟ್ಟಿ, ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ, ಅನಿಲ ದುಂಬಾಳೆ, ಸತೀಶ ಓಸ್ತವಾಲ, ಸುರೇಶ ಹಾರಿವಾಳ, ತಾನಾಜಿ ನಾಗರಾಳ, ಪ್ರೇಮು ಮ್ಯಾಗೇರಿ, ಬಾಲಚಂದ್ರ ಮುಂಜಾನೆ, ಅಣ್ಣುಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಲಿ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಸ್ಪರ್ಧಾಕಣದಲ್ಲಿರುವ ವಿಜಯಕುಮಾರ ಇಜೇರಿ, ಐ.ಎಂ.ಪಟ್ಟಣಶೆಟ್ಟಿ, ವೈಜನಾಥ ಕರ್ಪೂರಮಠ, ಹರ್ಷಗೌಡ ಪಾಟೀಲ, ಡಾ.ಸಂಜೀವ ಪಾಟೀಲ ಮುಳವಾಡ, ಗುರು ಗಚ್ಚಿನಮಠ, ಬೋರಮ್ಮ ಗೊಬ್ಬೂರ, ಸೌಭಾಗ್ಯ ಭೋಗಶೆಟ್ಟಿ, ಕರುಣಾ ಅವರಂಗಾಬಾದ್, ಸುರೇಶ ಗಚ್ಚಿನಕಟ್ಟಿ, ರಮೇಶ ಬಿದನೂರು, ಪ್ರಕಾಶ ಬಗಲಿ, ಗುರುರಾಜ ಗಂಗನಹಳ್ಳಿ, ರಾಜು ಕತ್ತಿ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ಸಾಯಬಣ್ಣ ಭೋವಿ, ಅಮೋಘಸಿದ್ಧ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.
ರವಿ ರಾಠೋಡ ಸ್ವಾಗತಿಸಿದರು. ಸಂಗಮೇಶ ಓಲೇಕಾರ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು.

