ಹಾಸ್ಟೆಲ್ ಮೆಂಟರ್-ವಾರ್ಡನ್ಗಳಿಗೆ ಮಾರ್ಗದರ್ಶನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿರುವ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಪರೀಕ್ಷಾ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ವಸತಿ ನಿಲಯಗಳ ವಾರ್ಡನ್ಗಳು ಹಾಗೂ ಹಾಸ್ಟೆಲ್ ಮೆಂಟರ್ಗಳು ಮಕ್ಕಳಿಗೆ ಮುಕ್ತವಾದ ವಾತಾವರಣ ಕಲ್ಪಿಸಿ, ಮಕ್ಕಳೊಂದಿಗೆ ಬೆರೆತು, ಸಮಸ್ಯೆಗಳನ್ನು ಆಲಿಸಿ-ಚರ್ಚಿಸಿ, ಪರಿಹರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿಹಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಾಸ್ಟೇಲ್ ಮೆಂಟರ್ ಮತ್ತು ವಾರ್ಡನ್ ರವರಿಗೆ ವಸತಿ ನಿಲಯಗಳ ನಿರ್ವಹಣೆಯ ಕುರಿತು ಮಾರ್ಗದರ್ಶಿ ಸಭೆ ಹಾಗೂ ಜಿಲ್ಲಾ ಮಟ್ಟದ. ವಿದ್ಯಾರ್ಥಿಗಳ ಸುರಕ್ಷಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯಲು ತಮ್ಮ ಕುಟುಂಬದಿಂದ ದೂರವಾಗಿರುತ್ತಾರೆ. ವಾರಕ್ಕೊಮ್ಮೆಯಾದರೂ ಒಂದು ಅವರೊಂದಿಗೆ ಊಟ ಮಾಡುವ ಮೂಲಕ ಅವರೊಂದಿಗೆ ಬೆರೆತು, ಕುಟುಂಬದಿಂದ ದೂರವಿರುವ ಭಾವನೆ ಹೋಗಲಾಡಿಲು ಪ್ರಯತ್ನಿಸಬೇಕು. ವಸತಿ ನಿಲಯಗಳಲ್ಲಿ ಉತ್ತಮವಾದ ಮುಕ್ತ ವಾತಾವರಣ ನಿರ್ಮಿಸಬೇಕು. ಅವರೊಂದಿಗೆ ಚರ್ಚಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದಾಗ ಮಾತ್ರ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಆಸಕ್ತ ವಿಷಯಗಳ ಕುರಿತು ಮಕ್ಕಳಿಗೆ ಬೋಧನೆ ಮಾಡಬೇಕು. ವಿಚಾರಗಳು ತಮ್ಮಲ್ಲಿರುವ ಅನುಭವ ಜ್ಞಾನವನ್ನು ಹಂಚಿಕೊಳ್ಳಬೇಕು. ವಸತಿ ನಿಲಯಗಳಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲಿಯೇ ಪರಿಹರಿಸುವ ಮೂಲಕ ಮಕ್ಕಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ವಸತಿ ನಿಲಯಗಳಲ್ಲಿ ಅವಶ್ಯಕವಿರುವ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಬೇಕು. ಸಾಧಾರಣವಾಗಿ ಮಕ್ಕಳಲ್ಲಿ ಚರ್ಮರೋಗ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಂಬಂಧಿಸಿದ ಹಾಸ್ಟೆಲ್ ವಾರ್ಡನ್, ಮೆಂಟರ್ಗಳು ಅವಲೋಕಿಸಬೇಕು. ವಾರಕ್ಕೊಮ್ಮೆ ವೈದ್ಯರನ್ನು ಹಾಸ್ಟೇಲ್ಗೆ ಕರೆಸಿ ತಪಾಸಣೆ ನಡೆಸಬೇಕು. ವಿದ್ಯಾರ್ಥಿಗಳ ಬೆಳವಣಿಗೆ ಹಾಗೂ ಜೀವನ ಮಟ್ಟ ಸುಧಾರಿಸಲು ಪ್ರೇರೇಪಿಸಬೇಕು ಎಂದು ಅವರು ಹೇಳಿದರು.
ಡಿ.ಎ.ಮೂಲಿಮನಿ ಉಪನ್ಯಾಸ ನೀಡಿದರು. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದೀನ್ ಸೌದಾಗರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಡಾ.ನಾಗರಾಜ್, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಆಹಾರ ಸುರಕ್ಷತಾ ಅಧಿಕಾರಿ ಬಿರಾದಾರ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಸಮಾಜ ಕಲ್ಯಾಣ ಇಲಾಖೆ ಮಹೇಶ ಪೋತದಾರ, ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

“ವಸತಿ ನಿಲಯಗಳಲ್ಲಿರುವ ಮಕ್ಕಳೊಂದಿಗೆ ಸಂಬಂಧಿಸಿದ ಹಾಸ್ಟೆಲ್ ವಾರ್ಡನ್ಗಳು ಬೆರೆತು, ಮುಕ್ತವಾಗಿ ಮಾತನಾಡಿ, ವಿಷಯಗಳನ್ನು ಹಂಚಿಕೊಂಡಾಗ ಅವರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅವರಲ್ಲಿನ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ಕಲ್ಪಿಸಲು ಮುಂದಾಗಬೇಕು. ಮಕ್ಕಳಿಗೆ ಓದಿನ ವಾತಾವರಣ ಕಲ್ಪಿಸಬೇಕು. ಸರ್ಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು, ಶೈಕ್ಷಣಿಕ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದೆ. ಇದರ ಸದ್ವಿನಿಯೋಗ ಪಡಿಸಿಕೊಂಡು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು.”
– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ

“ಕುಟುಂಬದಿಂದ ದೂರ ಬಂದು, ಹಾಸ್ಟೆಲ್ನಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಂದಿರುವ ಮಕ್ಕಳ ಪೋಷಕರಾಗಿ ಹಾಸ್ಟೆಲ್ ವಾರ್ಡನ್ಗಳು ಕಾರ್ಯನಿರ್ವಹಿಸಬೇಕು.”
– ರಿಷಿ ಆನಂದ
ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ