ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ ವಿಶ್ವ ಶಾಂತಿಯ ಸಂದೇಶ ಸಾರಿದ ವಿಜಯಪುರದ ಹೆಮ್ಮೆಯ ಕುಮಾರಿ ಶಿಫಾ ಜಮಾದಾರ ಅವರಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ಆನಂದ, ವಿಜಯಪುರದಲ್ಲಿ ಅನೇಕ ದಿನಗಳಿಂದಲೂ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಹೆಸರು ಮಾಡಿದ್ದ ಶಿಫಾ ಅವರು ಯುವತಿಯರ ಆರೋಗ್ಯ, ಸ್ವಚ್ಚತೆ ಜಾಗೃತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು, ಈಗ ರಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಶಾಂತಿಯ ವಿಷಯವಾಗಿ, ಭಾರತೀಯ ಸಂಸ್ಕೃತಿಯ ಬೆಳಕಿನಲ್ಲಿ ವಿಶ್ವಶಾಂತಿಯ ಸಂದೇಶವನ್ನು ನೀಡುವ ಮೂಲಕ ವಿಜಯಪುರದ ಕೀರ್ತಿ ಹೆಚ್ಚಿಸಿರುವುದು ಸಂತೋಷ ತರಿಸಿದೆ ಎಂದರು.
ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಎ-ಐ ತಂತ್ರಜ್ಞಾನ ಆಧಾರಿತ ಶೌಚಾಲಯ ನಿರ್ಮಾಣ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಮಾಡುವ ಮೂಲಕ ಶಿಫಾ ಜಮಾದಾಯ ಉದಯೋನ್ಮುಖ ಸಮಾಜ ಸೇವಕಿಯಾಗಿ ಮುನ್ನಡೆಯುತ್ತಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ವಿಜಯಪುರ ಯುವತಿ ರಷ್ಯಾ ಶೃಂಗ ಸಭೆಯಲ್ಲಿ ಭಾಗವಹಿಸಿ ತಮ್ಮ ವಿಚಾರ ಮಂಡನೆ ಮಾಡಿರುವುದು, ಅದರಲ್ಲೂ ಭಾರತೀಯ ಸಂಸ್ಕೃತಿಯ ಧ್ಯೇಯೋದ್ದೇಶಗಳನ್ನು ಸಾರಿರುವುದು ಸಂತೋಷ ತರಿಸಿದೆ, ಇಡೀ ಜಿಲ್ಲೆ ಹೆಮ್ಮೆ ಪಡುವ ಸಾಧನೆ ಇದಾಗಿದೆ ಎಂದು ಹುರಿದುಂಬಿಸಿದರು.
ಸನ್ಮಾನ ಸ್ವೀಕರಿಸಿದ ಕು.ಶಿಫಾ ಜಮಾದಾರ ಕೃತಜ್ಞತೆ ಸಲ್ಲಿಸಿದರು.