ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಸರಕಾರಿ ಗೋಮಾಳ ಖಾಸಗೀ ವ್ಯಕ್ತಿಗಳ ಹೆಸರಿಗೆ ಪರಭಾರೆಯಾಗಿದ್ದನ್ನು ವಿರೋಧಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪ್ರಯುಕ್ತ ೧೯.೨೩ ಎಕರೆ ಜಮೀನು ಸರಕಾರಕ್ಕೆ ಮರಳಿದೆ.
ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೆ ನಂ. ೫೯/೧ ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರಕಾರ ಜಾನುವಾರುಗಳನ್ನು ಮೇಯಿಸಲು (ಗೋಮಾಳ) ಮೀಸಲಿರಿಸಿತ್ತು ಅದಕ್ಕೆ ಧಾಖಲೆಗಳಲ್ಲಿ ಗುರುಚರಣ (ಸರಕಾರಿ ಜಮೀನು) ಎಂದು ನೊಂದನಿಯಾಗಿರುತ್ತದೆ ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗೆಗಳಿಗೆ ಗುರುಚರಣ ಎಂದೇ ದಾಖಲಾಗಿರುತ್ತವೆ ಇದನ್ನೇ ದುರುಪಯೋಗ ಪಡೆದುಕೊಂಡ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಎನ್ನುವ ವ್ಯಕ್ತಿ ದಿನಾಂಕ ೧೪-೮-೨೦೨೫ರಂದು ಶಿವಮೊಗ್ಗದ ಉಪನೊಂದನಾಧಿಕಾರಿ ಕಛೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತ್ಯಾರ ಪತ್ರ (ಜಿಪಿಎ) ಮಾಡಿಕೊಂಡಿದ್ದಾರೆ, ನಂತರ ದಿನಾಂಕ ೨೬-೮-೨೦೨೫ರಂದು ಒಟ್ಟು ಮುಕ್ತ್ಯಾರ ಪತ್ರದನ್ವಯ ಮುಧೋಳ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಮುಧೋಳ ತಾಲೂಕಿನ ಮುಗಳಖೋಡದ ಶ್ರೀಶೈಲ ದುಂಡಪ್ಪ ಪಶ್ಚಾಪೂರರವರ ಹೆಸರಿಗೆ ಖರೀದಿ ನೊಂದನಿ ಮಾಡಿಕೊಟ್ಟಿದ್ದು ಈ ಸರಕಾರಿ ಜಮೀನು ಕಬಳಿಸುತ್ತಿರುವ ಭೂಗಳ್ಳರನ್ನು ಹಾಗೂ ಪ್ರಕರಣದಲ್ಲಿ ಭಾಗಿಯಾದ ಉಪ ನೊಂದಣಾಧಿಕಾರಿಗಳನ್ನು, ದಸ್ತು ಬರಹಗಾರ, ಹಾಗೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಹಾಯ, ಸಹಕಾರ ನೀಡಿದ ಪ್ರತಿಯೊಬ್ಬರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಧ್ಧಾರ್ಥ ಗೊಯಲ್ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಈ ಕುರಿತು “ಉದಯರಶ್ಮಿ” ವಿಶೇಷ ವರದಿ ಪ್ರಕಟಿಸಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಜಮೀನು ಪರಭಾರೆ ಮಾಡಿಕೊಂಡಿದ್ದ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಹಾಗೂ ಶ್ರೀಶೈಲ ದುಂಡಪ್ಪ ಪಶ್ಚಾಪೂರರವರು ಮಾಡಿಕೊಂಡಿದ್ದ ಎಲ್ಲಾ ವ್ಯವಹಾರಗಳನ್ನು ರದ್ದುಪಡಿಸಿ ಅವರ ಮೇಲೆ ಪ್ರಕರಣ ದಾಖಲಿಸಿ, ಸದರೀ ಸರಕಾರಿ ಜಮೀನನ್ನು ಮರಳಿ ಸರಕಾರದ ಹೆಸರಿಗೆ ನೊಂದಾಯಿಸಲಾಗಿದ್ದು ಪರೀಷ್ಕೃತ ಪಹಣಿಪತ್ರ ಇಂದು ಸಾರ್ವಜನಿಕಗೊಳಿಸಲಾಗಿದೆ.
ಸಕಾಲಿಕ ಮನವಿಗೆ ಸ್ಪಂದಿಸಿ ಗ್ರಾಮಸ್ಥರಿಗೆ ಜಮೀನು ಮರಳಿ ಸಿಗುವಂತೆ ಕ್ರಮ ವಹಿಸಿದ ಸಚಿವರಿಗೆ, ಸಂಸದರಿಗೆ, ಅಧಿಕಾರಿಗಳಿಗೆ ಹಾಗೂ ಪತ್ರಿಕಾ ಮಾದ್ಯಮದವರಿಗೆ ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಮನೋಜ ಹಟ್ಟಿ, ಬಾಳೆಶ ಬ್ಯಾಕೋಡ, ಮಹಾಂತೇಶ ಜಾಲಿಕಟ್ಟಿ, ಸುರೇಶ ಪೂಜಾರಿ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಯಮನಪ್ಪ ಮಾದರ, ಹಣಮಂತ ಬಜಂತ್ರಿ ಸೇರಿದಂತೆ ಗ್ರಾಮದ ಪ್ರಮುಖರು ಅಭಿನಂದನೆ ಸಲ್ಲಿಸಿದ್ದು ಸದರೀ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸಿ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.


