ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಜಾತಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ದಸರಾ ರಜೆ ೧೦ ದಿನಗಳ ಕಾಲ ವಿಸ್ತರಿಸಬೇಕೆಂಬ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕರ ಸಂಘದ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ.
ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಯಲು, ಶಾಲೆ ಆರಂಭಗೊಂಡರೆ ಅದಕ್ಕಾಗಿ ಶಿಕ್ಷಕರಿಗೆ ಆಗುವ ಸಮಸ್ಯೆಗಳ ಕುರಿತು, ಮಂಗಳವಾರ ಬೆಳಿಗ್ಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ಶಿಕ್ಷಕ ಸಂಘದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಶ್ಮಿ ಮಹೇಶ ಅವರಿಗೆ ಭೇಟಿ ನೀಡಿ ಇನ್ನೂ ಕನಿಷ್ಠ ೧೦ ದಿನಗಳ ಕಾಲ ರಜೆ ನೀಡಬೇಕೆಂದು ಮನವಿ ಮಾಡಲಾಯಿತು.
ಅದಕ್ಕಾಗಿಯೇ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸಿ, ಅ.೮ ರಿಂದ ಅ.೧೮ ರವರೆಗೆ ದಸರಾ ರಜೆ ವಿಸ್ತರಿಸಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಯುಕ್ತ ಮನಿಷ್ ಮೌದ್ಗಿಲ್, ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಮಧುಸೂಧನ್ ಪಾಲ್ಗೊಂಡರೇ, ಟೆಲಿಕಾನ್ಫರೆನ್ಸ್ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ರಶ್ಮಿ ಮಹೇಶ್, ವಿಕಾಸ ಸುರಳಿಕರ್ ಪಾಲ್ಗೊಂಡರು.
ಸಭೆಯ ನಂತರ ಸ್ವತಃ ಮುಖ್ಯಮಂತ್ರಿಗಳೇ ಶಿಕ್ಷಕರ ಸಂಘದ ಮನವಿಯ ಮೇರೆಗೆ ರಜೆ ನೀಡುವುದಾಗಿ ಘೋಷಿಸಿದರು.
೨೦ ಲಕ್ಷ ರೂ ಪರಿಹಾರ
ಸಮೀಕ್ಷೆ ಮಾಡುವಾಗ ಮೃತಪಟ್ಟ ಸಮೀಕ್ಷಕರಿಗೆ ೨೦ ಲಕ್ಷ ರೂ ಪರಿಹಾರವನ್ನು ಸಂಘದ ಮನವಿಯ ಮೇರೆಗೆ ಸರ್ಕಾರ ಘೋಷಿಸಿದೆ. ಈಚೆಗೆ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲ್ಲೂಕು ರಾಂಪೂರ ಬಳಿ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರು ಸೇರಿ ಮೂವರು ಮೃತಪಟ್ಟಿದ್ದರು. ಮೃತ ಕುಟುಂಬಕ್ಕೆ ತಲಾ ೨೦ ಲಕ್ಷ ರೂ ಘೋಷಿಸಲಾಗಿದೆ.
೧೦ ದಿನಗಳ ಕಾಲ ರಜೆ ವಿಸ್ತರಿಸಲು ಕಾರಣರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಶಿಕ್ಷಣ ಸಚಿವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

