ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ದುರುದ್ದೇಶಪೂರ್ವಕವಾಗಿ ಅವಮಾನಗೈದು ಗೂಂಡಾಗಿರಿಯ ವಿಕೃತ ಮೆರೆದ ಆರೋಪಿ ಮೇಲೆ ಜಾಮೀನುರಹಿತ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ಕಾರ್ಯದರ್ಶಿ ರಮೇಶ ಸಾಸಾಬಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದು ದುಷ್ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಹಾಗೂ ನ್ಯಾಯಾಧೀಶರ ಮೇಲೆ ಶೂ ಎಸೆದ ಕೋಮುವಾದಿ ಹೀನ ಮನಸ್ಸಿನ ಆರೋಪಿ ವಕೀಲನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿರುವ ಸಿಜೆಐ ಗವಾಯಿ ಅವರ ಮೇಲೆ ನ್ಯಾಯಾಲಯದ ಕೋಣೆಯಲ್ಲಿ ಆರೋಪಿ ವಕೀಲನು ಶೂ ಎಸೆಯುತ್ತಾ, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿರುವುದು ಅತ್ಯಂತ ಆಘಾತಕಾರಿಯಾದುದು. ಪೂರ್ವನಿಯೋಜಿತವಾಗಿ ದುರುದ್ದೇಶದಿಂದ ನಡೆಸಿದ ಘಟನೆಯು ದೇಶದ ಸಂವಿಧಾನದ ಜಾತ್ಯಾತೀತ ಬುನಾದಿಗೆ ವಿರುದ್ಧವಾಗಿ ಕೋಮುವಾದಿ ಹಾಗೂ ಜಾತಿವಾದಿ ಹೀನ ಮನಸ್ಥಿತಿಯ ಶಕ್ತಿಗಳು ಇದರ ಹಿಂದೆ ಇರುವಂತಿದೆ. ಸಂವಿಧಾನ ಅಪಮೌಲ್ಯಗೊಳಿಸುವ ಕೆಲ ಬಿಜೆಪಿ ನಾಯಕರ ಹೇಳಿಕೆಗಳು ಆರೋಪಿಗೆ ಇಂತಹ ದುಷ್ಕೃತ್ಯ ನಡೆಸಲು ಬಲ ತುಂಬಿವೆ. ಕೋಮುವಾದಿ ಶಕ್ತಿಗಳು ದುಷ್ಕೃತ್ಯಕ್ಕೆ ಗುರಿಯಾಗಿರುವ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ರಕ್ಷಣೆಯನ್ನು ಖಾತ್ರಿಪಡಿಸಬೇಕು. ಅಸಹಿಷ್ಣುತೆಯಿಂದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಧಾಳಿಗೆ ಮುಂದಾದ ವ್ಯಕ್ತಿ ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

