ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಳೆದ ಐದು ತಿಂಗಳಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ವಿಪರೀತ ಮಳೆಯಿಂದ ಎಲ್ಲ ಬೆಳೆಗಳು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಸಮಯ ಹಾಳು ಮಾಡದೇ ಪ್ರತಿಯೊಬ್ಬ ರೈತನ ಒಣ ಬೇಸಾಯಕ್ಕೆ ೫೦ ಸಾವಿರ ರೂ. ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಮೂಲಕ ಜಿಲ್ಲಾಡಳಿತ ಹಾಗೂ ರಾಜ್ಯಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅಗ್ರಹಿಸಿದರು
ಪಟ್ಟಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ವಿಪರೀತ ಮಳೆಯಿಂದ ತಾಲ್ಲೂಕಿನ ಕೃಷಿ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳು ಹಾಳಾಗಿವೆ. ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ ೧೫ ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ನೀಡಲು ಒತ್ತಾಯಿಸಿದರು.
ತಾಲ್ಲೂಕ ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಬಸಗೊಂಡಪ್ಪ ಉಮ್ರಾಣಿ ಮಾತನಾಡಿ, ಭೀಮೆ, ಕೃಷ್ಣಾ ,ದೋಣಿ ಪ್ರವಾಹದಿಂದಾಗಿ ರೈತರ ಬೆಳೆಗಳು ಹಾಳಾಗಿ ಜೊತೆಗೆ ಮನೆ ಮಠಗಳು ಬಿದ್ದಿರುವ ಉದಾಹರಣೆಗಳಿವೆ. ಜೊತೆಗೆ ಹಲವು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಇದಕೆಲ್ಲ ಪರಿಹಾರ ನೀಡಬೇಕೆಂದು ಆಗ್ರಹ ಮಾಡುತ್ತಿದ್ದೇವೆ ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಪ್ರಕಾಶ ತೇಲಿ, ತಾಲ್ಲೂಕು ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಮೈತ್ರಿ, ಸುನಂದಾ ಸೊನ್ನಳ್ಳಿ, ಅಂಬವ್ವ ಬಿರಾದಾರ, ಎಂ. ಖ. ಮನಹಳ್ಳಿ, ರಮೇಶ ಚಾಂದಕವಟಗಿ, ಸಂಗಪ್ಪಗೌಡ ಬಿರಾದಾರ, ಶಿವಪ್ಪ ತಾಳಿಕೋಟಿ, ಮಹಾಂತಪ್ಪ ಸುಂಬಡ, ಕಾಶೀನಾಥ ಬಿರಾದಾರ ಪುಜಪ್ಪ ಗುಡ್ಡಳ್ಳಿ, ಅಶೋಕ ಬಿರಾದಾರ, ಸಿದ್ದಪ್ಪ ಪೂಜಾರಿ, ಶಿವಶಂಕರ ಬಿರಾದಾರ, ಶಿಖಂದರ್ ತೋನಶ್ಯಾಳ ಸೇರಿದಂತೆ ರೈತರು ಇದ್ದರು

