ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪಾನಿಸಾಹೇಬ ಉರುಸ್ ಸಾಕ್ಷಿ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಜಾತಿ ಜಾತಿ ಎಂದು ಹೊಡೆದಾಡದೇ, ಬೇಧಭಾವ ಮಾಡದೇ ಎಲ್ಲರೂ ಕೂಡಿ ಬಾಳಿದರೇ ಭೂಮಿಯೇ ಸ್ವರ್ಗ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಶನಿವಾರ ನಡೆದ ಹಜರತ್ ಬಾಬಾ ಪಾನಿಸಾಹೇಬ ಉರುಸ್ (ಜಾತ್ರೆ) ಹಾಗೂ ಸರ್ವ ಧರ್ಮ ಭಾವೈಕ್ಯತೆಯ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರು ಮನುಷ್ಯರನ್ನು ಸೃಷ್ಠಿ ಮಾಡಿದ, ಮನುಷ್ಯ ಜಾತಿಯನ್ನು ಸೃಷ್ಠಿ ಮಾಡಿದನು. ಗಂಡು ಮತ್ತು ಹೆಣ್ಣು ಎರಡೇ ಜಾತಿ, ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇಯಾಗಿದೆ. ಭೂಮಿಯ ಮೇಲೆ ಯಾರೂ ಹೆಚ್ಚಿನ ಜಾತಿಯವರಲ್ಲ ಯಾರೂ ಕಡಿಮೆ ಜಾತಿಯವರಲ್ಲ. ಮನುಷ್ಯ ಜಾತಿ ಅಂತ ಮಾತ್ರ ನಮ್ಮಲಿರಬೇಕು. ಮಕ್ಕಳ ತಲೆಯಲ್ಲಿ ಜಾತಿ ಎಂಬ ವಿಷ ಬೀಜ ತುಂಬದೇ ನೀತಿ, ಪ್ರೀತಿ, ಕರುಣೆ, ಮಮಕಾರ ತುಂಬಬೇಕು. ಎಲ್ಲರೂ ದ್ವೇಷ ಬಿಟ್ಟು ಪ್ರೀತಿ ಮಾಡಬೇಕು, ಪ್ರೀತಿಗಿಂತ ಮತ್ತೊಂದು ವಸ್ತು ಈ ಜಗತ್ತಿನಲ್ಲಿ ಇಲ್ಲ ಎಂದರು.
ಹೂವಿನ ಹಿಪ್ಪರಗಿಯ ಗುರುಲಿಂಗಾನಂದ ಮಹಾರಾಜ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮ ಮಾತನಾಡಿ ಭಾವದೊಳಗೆ ದೇವನಿರುವನು. ಲಕ್ಷ ಲಕ್ಷ ಜಾತಿಗಳನ್ನು ಮಾಡಿಕೊಂಡವರು ನಾವೇ. ನಮ್ಮೊಳಗೆ ನಾವು ಪರಮಾತ್ನನನ್ನು ಕಂಡುಕೊಳ್ಳಬೇಕಾಗಿದೆ. ನಮ್ಮಲ್ಲಿ ಒಂದೇ ಅತ್ಮ ಇರುವದು. ಮನುಷ್ಯತ್ವ ಎಂಬುವದು ಜಗತ್ತಿನಲ್ಲಿ ಎಲ್ಲರಿಗೂ ಒಂದೇ. ಸಾಧನೆಗೆ ಮಹತ್ವ ಕೊಡಬೇಕು ಅಲ್ಲಿ ಜಾತಿಗಲ್ಲ. ದೇವನೊಬ್ಬ ಇದ್ದಾನೆ, ಎಲ್ಲರಲ್ಲೂ ತುಂಬಿದ್ದಾನೆ, ಎಲ್ಲರ ಹೃದಯದ ಅಂತರಾಳದಲ್ಲಿ ಇದ್ದಾನೆ. ಗುಣದಿಂದ ಭಾವದಿಂದ ದೊಡ್ಡವರಾಗಬೇಕು ಎಂದರು.
ಮಕ್ತುಮಸಾಬ ಮಂಟೂರ ಮಾತನಾಡಿದರು.
ಶಾಲಾ ಬಾಲಕಿಯರಾದ ದಾನೇಶ್ವರಿ ರವಿ ನಾವಿ, ವೈಭವಿ ಮಾನೆ ವಿಧ್ಯಾರ್ಥಿಗಳಿಂದ ನಡೆದ ಭರತನಾಟ್ಯ ನೃತ್ಯ ಎಲ್ಲರ ಗಮನ ಸೆಳೆಯಿತು. ದಿಂಗಾಲೇಶ್ವರ ಶ್ರೀಗಳು ನೃತ್ಯ ಮಾಡಿದ ಬಾಲಕಿಯರಿಗೆ ಆಶೀರ್ವದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಕುಂಭಮೇಳ ನೆರವೇರಿತು.
ಖಾಜಾ ಸೈಯ್ಯದ ಶಹಾ ಹುಜುರ್ ಅಹ್ಮದ್ ಹುಸೇನ್ ಚಿಸ್ತಿ ಅಲ್ ಖಾದ್ರಿ ಸಜ್ಜಾದನಸೀನ ಕ್ವಾಜಾ ಅಮಿನೊದ್ದಿನ್ ದರ್ಗಾ ವಿಜಯಪುರ, ರಾಚಯ್ಯ ಸಕ್ಕರಿಮಠ, ಕಮೀಟಿ ಮುಖ್ಯಸ್ಥ ನೂರುದ್ದಿನ ಮುಲ್ಲಾ, ಅಬ್ದುಲ್ ಕರೀಮ್ ಮುಲ್ಲಾ, ಆರ್.ಎಸ್.ಪಾಟೀಲ, ಐ.ಎಸ್.ರುದ್ರಗೌಡರ, ಅಣ್ಣಾಸಾಬ ಬಿರಾದಾರ, ಕಮೀಟಿ ಸದಸ್ಯರು, ಸಮಸ್ತ ಗ್ರಾಮದ ಗುರುಹಿರಿಯರು, ಯುವಕರು, ಮಹಿಳೆಯರು ಮಕ್ಕಳು ಇದ್ದರು.
ಸ್ವಾಗತವನ್ನು ಶಿವಾನಂದ ಬಿರಾದಾರ, ನಿರೂಪಣೆಯನ್ನು ಎಂ.ಐ.ಜಿಡ್ಡಿ, ಎಸ್.ಆರ್.ಕೋಳಿ, ವಂದನಾರ್ಪಣೆಯನ್ನು ಸಿದಗೊಂಡ ರುದ್ರಗೌಡರ ನೆರವೇರಿಸಿದರು.

