ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳಾ ಸಬಲೀಕರಣಕ್ಕೆ ಉದ್ಯಮಶೀಲತಾ ಯೋಜನೆಗಳು ನೆರವು ನೀಡುತ್ತವೆ. ಅಲ್ಲದೇ ಮಹಿಳೆಯರು ಸ್ವಯಂ ಉದ್ಯೋಗ ಕೈಕೊಳ್ಳಲು ಅವಕಾಶ ಕಲ್ಪಿಸುತ್ತವೆ ಎಂದು ಮುಕುಂದ ಝಳಕಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಉದ್ಯಮಶೀಲತೆಯ ಮೂಲಕ ಮಹಿಳೆಯರ ಸಬಲೀಕರಣ ಮತ್ತು ಸ್ವಯಂ ಉದ್ಯೋಗ ಯೋಜನೆಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಸಬಲೀಕರಣಗೊಳಿಸಲು ಉದ್ಯಮಶೀಲತಾ ಅಭಿವೃದ್ದಿ ಯೋಜನೆಗಳು ಸಹಾಯಕವಾಗಿವೆ. ಸರ್ಕಾರ ಹಣಕಾಸಿನ ನೆರವು, ಕೌಶಲ್ಯ ತರಬೇತಿ ಹಾಗೂ ವ್ಯವಹಾರ ಪ್ರಾರಂಭಿಸಲು ಅಗತ್ಯವಾದ ಅವಕಾಶಗಳನ್ನು ಒದಗಿಸುತ್ತದೆ. ಜೊತೆಗೆ ರೂಡಸೆಟ್ ಸಂಸ್ಥೆಯು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ, ಸಶಕ್ತರನ್ನಾಗಿ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ಹತ್ತಿ ಮಾತನಾಡಿ, ಆರ್ಥಿಕ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟುಕೊಂಡು ಮಹಿಳೆಯರಿಗೆ ಸ್ವ–ಉದ್ಯೋಗಕ್ಕಾಗಿ ಆರ್ಥಿಕ ಬೆಂಬಲ ಹಾಗೂ ತರಬೇತಿಯನ್ನು ನೀಡುವ ಹಲವು ಯೋಜನೆಗಳು ಸರ್ಕಾರದ ವತಿಯಿಂದ ಜಾರಿಗೆ ಬಂದಿವೆ. ಮಹಿಳೆಯರು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ವೈ ತಮ್ಮಣ್ಣ ಮಾತನಾಡಿದರು.
ಈ ಕಾರ್ಯಾಗಾರದಲ್ಲಿ ಒಟ್ಟು ಮೂರು ವಿಚಾರಗೋಷ್ಠಿಗಳು ನಡೆದಿದ್ದು, ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುಕುಂದ ಝಳಕಿ, ಪ್ರೊ.ಕಾಶೀಬಾಯಿ ಖ್ಯಾಡಗಿ ಮತ್ತು ಅಜಿತ ಗುಜ್ಜಾರ ಮಾತನಾಡಿದರು.
ಕಾರ್ಯಾಗಾರದಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ದಿವ್ಯಾ ಪೂಜಾರಿ ಪ್ರಾರ್ಥನಾ ಗೀತೆ ಹಾಡಿದರು. ಡಾ.ಅನಿತಾ ನಾಟಿಕಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಐ.ಕ್ಯೂ.ಎ.ಸಿ ಸಂಯೋಜಕಿ ಡಾ.ಭಕ್ತಿ ಮಹೀಂದ್ರಕರ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ರಶ್ಮೀ ದಾಸ್ಯಾಳ ಕಾರ್ಯಕ್ರಮ ನಿರೂಪಿಸಿದರು. ಎಂ.ಕಾಂ ವಿಭಾಗದ ಸಂಯೋಜನಾಧಿಕಾರಿ ಪ್ರೊ. ದಾನಮ್ಮ ಗಿಡವೀರ ವಂದಿಸಿದರು.

