ಜಯದೇವ ಜಗದ್ಗುರುಗಳ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮೀಕ್ಷೆಯಲ್ಲಿ ಗಾಣಿಗರು ಧರ್ಮದ ಜಾಗದಲ್ಲಿ “ಹಿಂದೂ” ಹಾಗೂ ಜಾತಿ, ಉಪಜಾತಿ ಜಾಗದಲ್ಲಿ “ಗಾಣಿಗ” ಎಂದು ಬರೆಸಿ ಎಂದು ಅಖಿಲ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಸಮುದಾಯಕ್ಕೆ ತಿಳಿಸಿದರು.
ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಜಗದ್ಗುರು ಶ್ರೀ ಜಯದೇವ ಶಿವಯೋಗೇಶ್ವರ ಟ್ರಸ್ಟ್ ಸಹಯೋಗದಲ್ಲಿ ನಗರದ ಜಿ.ಪಂ ರಸ್ತೆಯಲ್ಲಿರುವ ವನಶ್ರೀ ಸಂಸ್ಥಾನಮಠದಲ್ಲಿ ಜರುಗಿದ ಜಯದೇವ ಜಗದ್ಗುರಗಳ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದ ಗಾಣಿಗರು ರಾಜ್ಯದಲ್ಲಿ ಸುಮಾರು 35-40 ಲಕ್ಷ ಜನಸಂಖ್ಯೆ ಹೊಂದಿದ್ದರೂ, ಇತ್ತೀಚೆಗೆ ಜಯಪ್ರಕಾಶ ಹೆಗ್ಡೆ ಅವರು ಸಲ್ಲಿಸಿದ ಕಾಂತರಾಜು ಆಯೋಗದ ವರದಿಯಲ್ಲಿ ಸಮುದಾಯ ಕೇವಲ ಸುಮಾರು 7 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ಸಮುದಾಯದ ಏಲ್ಗೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮಾಜ ಸಂಘಟನೆ ಅನಿವಾರ್ಯ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದು ಮುಖ್ಯ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಗೋ ಸಂತತಿ ಅನಾದಿ ಕಾಲದಿಂದಲೂ ಅನ್ನದಾತನ ಬೆನ್ನೆಲುಬು, ದೇಶದ ಸಂಪತ್ತು. ಹಿಂದೂ ಧರ್ಮದಲ್ಲಿ ಗಾಣಿಗ ಸಮಾಜ ಸಂಪೂರ್ಣ ಕೃಷಿಯನ್ನೇ ನಂಬಿ ಎತ್ತುಗಳ ಮೂಲಕ ಗಾಣದೆಣ್ಣೆ ತಯಾರಿಸುವ ಪವಿತ್ರ ಕಾಯಕ ಮಾಡಿಕೊಂಡು ಬಂದಿದೆ. ಹಾಗಾಗಿ ಗಾಣಿಗರು ಗೋ ಸಂತತಿಯ ಪಾಲನೆ ಜೊತೆಗೆ ಅವುಗಳ ಹತ್ಯೆಯನ್ನು ಖಂಡಿಸಿ ಗೋ ರಕ್ಷಣೆಗೆ ಸಂಕಲ್ಪಿಸಬೇಕು. ಗಾಣಿಗ ಸಮಾಜ ಸಂಘಟನೆಯಾಗುವ ಜೊತೆಗೆ, ಇಡಿ ದೇಶದ ಸ್ವಾಸ್ಥ್ಯ, ಭೂತಾಯಿಯ ಆರೋಗ್ಯ ಸಂಪತ್ತನ್ನು ಕಾಪಾಡುವಲ್ಲಿ ಕೊಡುಗೆಯನ್ನು ಕೊಡುವಂತಾಗಬೇಕು ಎಂದು ಆಶಿಸಿದರು.
ವಿಧಾನ ಪರಿಷತ್ತಿನ ಹಿರಿಯ ಮಾಜಿ ಸದಸ್ಯರುಗಳಾದ ಜಿ.ಎಸ್.ನ್ಯಾಮಗೌಡ ಹಾಗೂ ಬಿ.ಜಿ.ಪಾಟೀಲ ಹಲಸಂಗಿ ಅವರು ಮಾತನಾಡಿ, ಗಾಣಿಗ ಸಮುದಾಯದ ಏಲ್ಗೆಗಾಗಿ ಹಾಗೂ ಜಯದೇವ ಜಗದ್ಗುರುಗಳು ಸಮಾಜಕ್ಕೆ ಅರ್ಪಿಸಿ ಹೋದ ಆಸ್ತಿ ಸಂರಕ್ಷಿಸಿ ಸಮಾಜಕ್ಕೆ ಸದ್ವಿನಿಯೋಗ ಆಗುವಂತೆ ಸಮಾಜದ ಟ್ರಸ್ಟ್, ಸಂಘಸಂಸ್ಥೆಗಳ ಮುಖಂಡರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕಿ ಮಹಾನಂದಾ ಸಿದ್ದಣ್ಣ ಬಿರಾದಾರ ಉಪನ್ಯಾಸಗೈದರು.
ಇದೇ ವೇಳೆ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ನೀಟ್ ನಲ್ಲಿ ಅತ್ಯಧಿಕ ಅಂಕ ಪಡೆದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವನಶ್ರೀ ಸಂಸ್ಥಾನಮಠದ ಅಧ್ಯಕ್ಷ ಸಿದ್ದಮುತ್ಯಾ, ಹಿರೆರೂಗಿ ಸುಗಲತಾಯಿ ಮಾತೋಶ್ರೀ, ಸಂಗನಬಸವ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಮಾಜಿ ಶಾಸಕ ರಮೇಶ ಭೂಸನೂರ, ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಪ್ರ.ಕಾರ್ಯದರ್ಶಿ ಬಾಬು ಸಜ್ಜನ ಮಾಜಿ ಅಧ್ಯಕ್ಷ ಶರಣಬಸಪ್ಪ ಅರಕೇರಿ, ಹಿರಿಯರಾದ ಬಾಬುಸಾಹುಕಾರ ಮೇತ್ರಿ, ಎನ್.ಎಸ್.ಲೋಣಿ, ಎಸ್.ಎಸ್.ಶಿರಾಡೋಣ, ಎನ್.ಎಸ್.ದೇವರ, ಯುವ ಘಟಕದ ಜಿಲ್ಲಾಧ್ಯಕ್ಷ ಗುರುನಾಥ ಅಂದೇವಾಡಿ, ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

