ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನಲ್ಲಿ ಹರಿಯುವ ಭೀಮಾನದಿಯ ಪ್ರವಾಹಕ್ಕೆ ಒಳಗಾಗಿರುವ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೇಲೆ ಮಳೆ.. ಕೆಳಗೆ ಹೊಳೆ.. ಯಾವಾಗ ಏನಾಗುತ್ತದೆ ಎಂಬ ಭಯದಲ್ಲಿ ಜನತೆ ಬದುಕುತ್ತಿದ್ದಾರೆ.
ನದಿ ಪಾತ್ರದ ಜನರು ಕಳೆದ ಒಂದು ವಾರದಿಂದ ಏರುತ್ತದೆ ಸಾಗಿರುವ ಭೀಮಾನದಿಯ ನೀರಿನ ಹರಿವಿನ ಪ್ರಮಾಣ ಗುರುವಾರ ರಾತ್ರಿ ಇಡೀ ಏರಿಕೆ ಕಂಡು ಶುಕ್ರವಾರ ಬೆಳಗಿನಿಂದ ಸಾಯಂಕಾಲದವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆದಿದೆ. ಈ ಎರಡು ದಿನವಿಡೀ ಸುರಿದ ಮಳೆಗೆ ಜನ ಕಂಗಾಲಾಗಿದ್ದಾರೆ. ಎರಡು-ಮೂರು ದಿನಗಳಿಂದ ವಿಶ್ರಾಂತಿ ಕೊಟ್ಟಿದ್ದ ಮಳೆರಾಯ ಶುಕ್ರವಾರ ಇಡಿ ದಿನ ಮಳೆಸುರಿದ ಪರಿಣಾಮ ಜನತೆಯಲ್ಲಿ ಭಯ ಹುಟ್ಟಿಸುವಂತಾಗಿದೆ, ಮಳೆಯೊಂದಿಗೆ ತಂಪಾದ ಗಾಳಿ ಬೀಸುತ್ತಿದ್ದು ಇದು ಕೂಡ ಜನರ ಜೀವನದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವತ್ತ ಸಾಗಿದೆ.
ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ ಗುರುವಾರ 3 ಲಕ್ಷ 50 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಶುಕ್ರವಾರ ಬೆಳಗಿನ ಶುಭೋದಯ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಸಾಯಂಕಾಲದವರಿಗೆ ಅದೇ ರೀತಿ ಮುಂದುವರೆದಿದೆ
ಶುಕ್ರವಾರ ಸೊನ್ನ ಬ್ಯಾರೇಜಿನಲ್ಲಿ 3 ಲಕ್ಷ 55 ಸಾವಿರ ಕ್ಯೂಸೆಕ್ಸ್ ನೀರು 28 ಗೇಟ್ ಗಳ ಮೂಲಕ ಹೊರಬಿಡಲಾಗುತ್ತಿದೆ.
ಸೀನಾ ನದಿಯಿಂದ 2 ಲಕ್ಷ 15 ಸಾವಿರ ಕ್ಯೂಸೆಕ್ಸ್, ಉಜನಿ ಮತ್ತು ವೀರ ಜಲಾಶಯಗಳಿಂದ 80 ಸಾವಿರ ಕ್ಯೂಸೆಕ್ಸ್, ಅಲ್ಲದೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾನದಿ ಪಾತ್ರದಲ್ಲಿ ಬೀಳುತ್ತಿರುವ ಮಳೆಯಿಂದ ಸುಮಾರು 60 ಸಾವಿರ ಕ್ಯೂಸೆಕ್ಸ್ ಒಟ್ಟು 3 ಲಕ್ಷ 55 ಸಾವಿರ ಕ್ಯೂಸೆಕ್ಸ್ ನೀರು ಸೊನ್ನ ಬ್ಯಾರೇಜ್ ನಲ್ಲಿ ಹರಿಯುತ್ತಿದೆ.
ಪ್ರವಾಹ ಸೃಷ್ಟಿ ಮಾಡಿರುವ ಸೀನಾ ನದಿ ಪಾತ್ರದಲ್ಲಿ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿರುವುದರಿಂದ ನಾಳೆ ಮತ್ತು ನಾಡಿದ್ದು ಪ್ರವಾಹದಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಫ್ಜಲಪುರ ಕೆಎನ್ ಎನ್ಎಲ್ ಎ ಇ ಇ ಸಂತೋಷ್ ಕುಮಾರ್ ಸಜ್ಜನ ತಿಳಿಸಿದ್ದಾರೆ.
ಭೀಮಾ ನದಿ ತೀರದ ಗ್ರಾಮಗಳಾದ ಕಡಣಿ, ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ಕುರುಬತಹಳ್ಳಿ ,ಮಡ್ನಳ್ಳಿ, ದೇವಣಗಾಂವ, ಶಂಬೆವಾಡ, ಕಡ್ಲೆವಾಡ, ಕುಮಸಗಿ, ಚಿಕ್ಕ ಹಾವಳಗಿ, ಬಗಲೂರ, ಶಿರಸಿಗಿ, ಸೇರಿದಂತೆ ಅನೇಕ ಗ್ರಾಮಗಳ ಜನರು, ತೋಟದವಸ್ತಿ ಜನರು, ಜಾನುವಾರುಗಳು ಹಾಗೂ ಜಮೀನುಗಳಲ್ಲಿ ನೀರು ಹೊಕ್ಕಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರವಾಹ ಪೀಡಿತ ಗ್ರಾಮಗಳಲ್ಲಿ ಇಂದು ಸರ್ಕಾರ ಕಾಳಜಿ ಕೇಂದ್ರಗಳನ್ನು ತೆರೆದಿದೆ ತಾರಾಪುರದಲ್ಲಿ 3 ಕುಟುಂಬಗಳು, ತಾವರಖೇಡದಲ್ಲಿ 3 ಕುಟುಂಬ, ದೇವಣಗಾಂವ 3 ಕುಟುಂಬ, ಕಡ್ಲೆವಾಡದಲ್ಲಿ 6 ಕುಟುಂಬ ಕುಮಸಿಗಿಯಲ್ಲಿ 40 ಕುಟುಂಬಗಳನ್ನು ರಕ್ಷಿಸಿ ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಎಡಿ ಪ್ರಶಾಂತ ಸನ್ನಿ, ಸಿಂದಗಿಯ ತಹಸಿಲ್ದಾರ್ ಕರೆಪ್ಪ ಬೆಳ್ಳಿ ಅವರ ನೇತೃತ್ವದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಹಳೆ ತಾರಾಪುರದಲ್ಲಿ ವಾಸವಾಗಿರುವ ಉಳಿದ ಎಲ್ಲಾ ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ದೇವಣಗಾಂವದ ಹನುಮಾನ್ ದೇವಸ್ಥಾನ, ಶಾಂತೇಶ್ವರ ದೇವಸ್ಥಾನ ,ಅಂಬಿಗರ ಚೌಡಯ್ಯ ದೇವಸ್ಥಾನ, ಕದಂಬ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆ, ಬಾಲಕರ ವಸತಿ ನಿಲಯ, ಪ್ರಗತಿಪರ ಶಿಕ್ಷಣ ಸಂಸ್ಥೆಯ ಆವರಣ ಸಮೀಪ, ನೀರು ನುಗ್ಗಿದೆ.

