ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಸಿಎಂ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಸಲ್ಲಿಸಲಾಯಿತು.
ಅವರು ಸಲ್ಲಿಸಿದ ಮನವಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಆದೇಶದಂತೆ ಅಂತಹವರ ಮೇಲೆ ಮತ್ತು ಅಂತಹ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಆಧಿಕಾರಿಗಳ ಆದೇಶದಂತೆ ಅಂತಹವರ ಮೇಲೆ ಮತ್ತು ಅಂತಹ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಆಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದೆ. ಈ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಮೂಲ ಕಾರಣ ವೃತ್ತಿಗಾಗಿ ನಾಯಕ ತಳವಾರ ಜಾತಿಗೆ ಸೇರದೆ ಇತರ ಜಾತಿಗೆ ಅಂದರೆ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗೆ ಸೇರಿದವರು ತಳವಾರಿಕೆ ವೃತ್ತಿ ಮಾಡುತ್ತಿದ್ದು. ನಾಯಕ ತಳವಾರರ ಹೆಸರು ಜಾತಿ ಸೂಚಕ ಪದವಾಗಿರುತ್ತದೆ. ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನದೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಾಗ ಅಲ್ಲಿಂದ ಪರಿಶಿಷ್ಟ ಪಂಗಡದ ಪಟ್ಟಿಯ ಕ್ರಮ ಸಂಖ್ಯೆ 38ರಲ್ಲಿ ಸೇರಿಸಿರುವುದು ನಾಯಕ ತಳವಾರ ಜಾತಿ ಮಾತ್ರ, ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗೆ ಸೇರಿದ ತಳವಾರರನ್ನು ಅವರು ಸೇರಿರುವ ಇತರ ಹಿಂದುಳಿದ ವರ್ಗಗಳ ಪ್ರವರ್ಗ-1 ರ ಕ್ರಮ ಸಂಖ್ಯೆ 6 ರಲ್ಲಿ ಬೆಸ್ತ ಮುಂತಾದವುಗಳ ಜೊತೆ ಸೇರಿಸಿ ಉದ್ಭವಿಸಿರುವ ಗೊಂದಲಕ್ಕೆ ತೆರೆ ಎಳೆಯಬೇಕು. ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಸಮಯದಿಂದ ಪರಿಶಿಷ್ಟ ವರ್ಗಗಳ ಇಲಾಖೆಗೆ ಸ್ವತಂತ್ರ ಸಚಿವರಿಲ್ಲದೆ ತೊಂದರೆಯಾಗಿದೆ. ಆದ್ದರಿಂದ ಕೂಡಲೆ ಪರಿಶಿಷ್ಟ ವರ್ಗಗಳ ಇಲಾಖೆಗೆ ಸ್ವತಂತ್ರ ಕ್ಯಾಬಿನೆಟ್ ಸಚಿವರನ್ನ ನೇಮಿಸಬೇಕು. ತಳವಾರ ಹೆಸರಿನಲ್ಲಿ ಕೋಳಿ, ಕಬ್ಬಲಿಗ,ಬೆಸ್ತಾ, ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಪ್ರಾರಂಭಮಾಡಿದರು. ಈ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಪಡಿಸಲು ಎಸ್.ಟಿ, ಎಸ್.ಸಿ, ಒಬಿಸಿ ಕಾಯಿದೆ ಕಲಂ 4 ಮತ್ತು 4ಎ ರಲ್ಲಿ ತಹಸೀಲ್ದಾರ ಮತ್ತು ಮೇಲಾಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಈ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆದೇಶ ನೀಡಬೇಕು. ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡಲೇ ವಿದ್ಯಾರ್ಥಿ ವೇತನ ಹಣವನ್ನು ಬಿಡುಗಡೆ ಮಾಡುವುದು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಜನಾಂಗದ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯದ ವಿವಿಧ ಭಾಗಗಳಲ್ಲಿ ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ಬಾಕಿ ಬಿಡುಗಡೆಗಾಗಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 500 ಕೋಟಿ ಅನುದಾನ ಬಿಡುಗಡೆ ಮಾಡುವುದು. ಈಗಾಗಲೇ ಗುರುತಿಸಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬುವುದು ಹಾಗೂ ಹೊಸದಾಗಿ ಬ್ಯಾಕ್ಲಾಗ್ ಹುದ್ದೆಗಳನ್ನು ಗುರುತಿಸುವುದು.ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ಸಂಶೋಧನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗದ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಅತ್ಯಾಚಾರ ಮುಂತಾದ ಘಟನೆಗಳು ಹೇಚ್ಚಾಗುತ್ತಿದ್ದು ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಹೋರಾಟಗಾರರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಕೂಡಲೆ ಹಿಂಪಡೆದು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಗಿರಿಜನ ಉಪಯೋಜನೆಯಡಿ ನಿಗದಿಯಾಗಿರುವ ಅನುದಾನವನ್ನು ಪರಿಶಿಷ್ಟರಲ್ಲದವರ ಉಪಯೋಗಕ್ಕೆ ಬಳಸಬಾರದು. ಅಂತಹ ಪ್ರಕರಣಗಳಲ್ಲಿ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದರೂ ಇಲಾಖೆಗಳಲ್ಲಿ ಪದೋನ್ನತಿ ನೀಡುವಾಗ ವಿಳಂಬ ಧೋರಣೆ ಅನುಸರಣೆ ಸರಿಯಲ್ಲ. ವಿಳಂಬ ಮಾಡದೆ ಮೀಸಲಾತಿಯನುಸಾರ ಪದೋನ್ನತಿ ನೀಡಬೇಕೆಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಬೇರೆ ಬೇರೆ ಸಮುದಾಯಗಳಿಂದ ಒತ್ತಡಗಳು ಬರುತ್ತಿರುವುದು. ಈ ಒತ್ತಡಗಳಿಗೆ ಸರ್ಕಾರ ಸ್ಪಂದಿಸುತ್ತಿರುವುದನ್ನು ಪತ್ರಿಕೆಗಳ ಮುಖೇನ ಗಮನಿಸಲಾಗುತ್ತಿದೆ. ಇದು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿರುವುದರಿಂದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರವ ನಾವುಗಳು ಸರ್ಕಾರದ ಕ್ರಮವನ್ನು ವಿರೋಧಿಸುತ್ತೇವೆ ಎಂದು ವಾಲ್ಮೀಕಿ ಸಮಾಜ ಬಾಂಧವರು ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ರವಿ ನಾಯಕೋಡಿ, ಪರಸು ಬಡಿಗೇರ, ಶೇಖಪ್ಪ ಲಿಂಗದಳ್ಳಿ, ಶ್ರೀಶೈಲ ಜಾಲವಾದಿ, ಮಂಜು ಗುಡಗುಂಟಿ, ಪಿ.ವೈ. ಕೋಳೂರ, ಪ್ರಕಾಶ ರಾಗಪ್ಪಗೋಳ, ರಾಜು ರ್ಯಾಗೇರಿ, ರಾಜು ಮಾಸ್ತಾಳ, ಶಿವಪ್ಪ ಬಡಿಗೇರ, ಬಸನಗೌಡ ಪಾಟೀಲ, ಶ್ರೀಶೈಲ ಹೊನಳ್ಳಿ, ಶಿವಪ್ಪ ಬಡಿಗೇರ, ಕಾಶಿನಾಥ ಬಡಿಗೇರ, ಶಿಕ್ಷಕ ಬೇವೂರ , ಅನಿಲ ಯಲಗೊಂಡ, ಅನಿಲ ಶಾಖಾಪುರ ಸೇರಿದಂತೆ ಇತರರು ಇದ್ದರು.

