ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 300 ಮೀ ಉದ್ದದ ಬೃಹತ್ ತಿರಂಗಾ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು “ಭಾರತ್ ಮಾತಾ ಕೀ ಜೈ” “ವಂದೇ ಮಾತರಂ” ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗವನ್ನು ಹಿಡಿದು ನಗರದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರವಿದೆ, ಅವರಿಗೆ ದೇಶದ ಕುರಿತು ಇದ್ದ ದೇಶಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು, ಭಾರತ ದೇಶಕ್ಕೆ ಸ್ವತಂತ್ರ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದರು.
ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಎಬಿವಿಪಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮವನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ನಗರದ ತುಂಗಳ ಶಿಕ್ಷಣ ಸಂಸ್ಥೆ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಶಾಂತಿನಿಕೇತನ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಹಾಗೂ ಹಲವಾರು ಕಾಲೇಜುಗಳ 1,200 ವಿದ್ಯಾರ್ಥಿಗಳು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುಮಾ ಬೋಳರೆಡ್ಡಿ, ಅಮಿತಕುಮಾರ ಬಿರಾದಾರ, ಸಂಜು ಕುಲಕರ್ಣಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಮಂಜುನಾಥ ಹಳ್ಳಿ, ಐಶ್ವರ್ಯ ಕುಲಕರ್ಣಿ, ಸ್ನೇಹಾ ಹಿರೇಮಠ, ಪ್ರವೀಣ ಬಿರಾದಾರ, ಸುರೇಖಾ ಕುಲಕರ್ಣಿ, ಚೇತನ ಕೋರವಾರ, ದಾನಮ್ಮ ಹೊಸಮನಿ, ತ್ರಿಶಿಲಾ ರಾಠೋಡ, ಸುನೀಲ ರಾಠೋಡ, ಸಂಪತ್, ಮೋಹನ ಗುಣದಾಳ, ಸುರೇಶ ಲೋನಾರ ಇತರರು ಉಪಸ್ಥಿತರಿದ್ದರು.
“ಯಾವುದೇ ಶತ್ರು ದೇಶಗಳ ಆಂತಕ ಇಂದು ಭಾರತಕ್ಕೆ ಇಲ್ಲ, ಅಷ್ಟು ಬಲಿಷ್ಠವಾದ ಸೇನೆ ಇಂದು ದೇಶದಲ್ಲಿ ಇದೆ. ಆದರೆ ಕೆಲವೊಂದಿಷ್ಟು ದೇಶದ ಒಳಗಡೆ ಇರುವ ದೇಶವಿರೋಧಿ ಶಕ್ತಿಗಳ ಬಗ್ಗೆ ಜಾಗೃತರಾಗಿ ಇರಬೇಕಾಗಿದೆ.
– ಸಚಿನ ಕುಳಗೇರಿ
ಎಬಿವಿಪಿ ರಾಜ್ಯ ಕಾರ್ಯದರ್ಶಿ
“ತಿರಂಗಾ ನಮ್ಮ ದೇಶದ ಹೆಮ್ಮೆಯ ಪ್ರತೀಕ. ಆ ತಿರಂಗಾವನ್ನು ಹಿಡಿದಿದ್ದು ನಮ್ಮ ಸೌಭಾಗ್ಯ.”
– ಸಾಕ್ಷಿ ಕೋಟ್ಯಾಳ
ತುಂಗಳ ಕಾಲೇಜು ವಿದ್ಯಾರ್ಥಿನಿ