ದಲಿತ ಹೋರಾಟಗಾರ ಹಾಗೂ ಆರ್ಪಿಐ ಪಕ್ಷದ ಮುಖಂಡ ಜಿತೇಂದ್ರ ಕಾಂಬಳೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರಿಗೆ ಸಚಿವ ಸ್ಥಾನ ನೀಡಬೇಕು, ಕಟಕಧೋಂಡ ಮೂಲತ: ಇಂಡಿ ತಾಲೂಕಿನವರಾಗಿದ್ದು ಕಟಕಧೋಂಡ ಅವರಿಗೆ ಸಚಿವ ಸ್ಥಾನ ನೀಡಿದರೆ ದಲಿತ ಬಾಂಧವರಿಗೆ ನ್ಯಾಯ ದೊರಕುತ್ತದೆ ಹಾಗೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನದ ಬರ ಕಳಚುತ್ತದೆ ಎಂದು ದಲಿತ ಹೋರಾಟಗಾರ ಹಾಗೂ ಆರ್ಪಿಐ ಪಕ್ಷದ ಮುಖಂಡ ಜಿತೇಂದ್ರ ಕಾಂಬಳೆ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೋಹರ ಕಕ್ಕಯ್ಯ ಸಮುದಾಯಕ್ಕೆ ಸೇರಿದ ವಿಠ್ಠಲ ಕಟಕಧೋಂಡ ಸಾತ್ವಿಕ ಹಾಗೂ ಸರಳ ರಾಜಕಾರಣಿ, ಅನೇಕ ವರ್ಷಗಳಿಂದ ರಾಜಕೀಯದಲ್ಲಿರುವ ಅನುಭವಿ ರಾಜಕಾರಣಿ, ಎಲ್ಲ ಸಮುದಾಯಗಳನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ವ್ಯಕ್ತಿ, ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ, ಆ ಮೂಲಕ ಈ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯ, ಇಂದಿಗೂ ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಕಾಂಗ್ರೆಸ್ನಿಂದ ನ್ಯಾಯ ದೊರಕಿಲ್ಲ, ಈ ಸಮುದಾಯದ ಶಾಸಕರು ಸಹ ವಿಜಯಪುರ ಜಿಲ್ಲೆಯಲ್ಲಿ ಇಲ್ಲ, ಹೀಗಾಗಿ ಕಟಕಧೋಂಡರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಇಂಡಿ ಇಲ್ಲಿಯವರೆಗೂ ಸಚಿವ ಸ್ಥಾನವನ್ನೇ ಕಂಡಿಲ್ಲ, ಕಟಕಧೋಂಡ ಅವರು ಮೂಲತಃ ಇಂಡಿ ತಾಲೂಕಿನವರು. ಹೀಗಾಗಿ ಕಟಕಧೋಂಡ ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಎರಡು ವಿಷಯಗಳಿಗೂ ಆದ್ಯತೆ ದೊರಕಿ ಇಂಡಿಯ ಸಚಿವ ಸ್ಥಾನದ ಬರ ನೀಗಲಿದೆ ಎಂದರು.
ಇನ್ನೊಂದು ಸಚಿವ ಸ್ಥಾನ ಕೊಡಿಸುವುದಾಗಿ ಸಚಿವ ಡಾ.ಎಂ.ಬಿ. ಪಾಟೀಲರು ತಾವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ದಿನವೇ ಘೋಷಣೆ ಮಾಡಿದ್ದಾರೆ, ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಸೂತ್ರದ ಅಡಿಯಲ್ಲಿ ಕಟಕಧೋಂಡರಿಗೆ ಸಚಿವ ಸ್ಥಾನಕೊಡಿಸಲು ಸಚಿವ ಎಂ.ಬಿ.ಪಾಟೀಲರು ಪ್ರಯತ್ನಿಸಬೇಕು ಎಂದರು.
ಸಿದ್ರಾಮಪ್ಪ ಕಪಾಲಿ, ದತ್ತಾತ್ರೇಯ ಛತ್ರಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

