ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಶರಣ ಸಾಹಿತಿ ಎಂ.ಎಸ್. ಸಿಂಧೂರ ಅವರಲ್ಲಿ ದೇಶಾಭಿಮಾನ, ಭಾಷಾಭಿಮಾನ, ಬಸವಾಭಿಮಾನ ಮುಪ್ಪರಿಗೊಂಡಿತ್ತು. ಅಧ್ಯಯನಶೀಲರಾಗಿದ್ದ ಅವರು ನಡೆದಾಡುವ ನಿಘಂಟು ಆಗಿದ್ದರು. ಮಹಾರಾಷ್ಟ್ರದ ಜತ್ತ ಭಾಗದ ಗಡಿನಾಡಿನಲ್ಲಿ ಕನ್ನಡ ಧ್ವಜ ಹಾರಿಸಿದ್ದರು ಎಂದು ವಿಜಯಪುರ ಜಿಲ್ಲೆಯ ಮುಳವಾಡದ ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.
ತಾಲ್ಲೂಕಿನ ತುಂಗಳ ಗ್ರಾಮದ ಸಿಂಧೂರ ತೋಟದಲ್ಲಿ ಮಂಗಳವಾರ ಆಯೋಜಿಸಿದ್ದ ಶರಣ ಮಲ್ಲಪ್ಪ ಸಿಂಧೂರ, ಶರಣೆ ಶಾಂತಲಾ ಸಿಂಧೂರ ಸ್ಮರಣಾರ್ಥ ಸಿಂಧೂರ ಪ್ರತಿಷ್ಠಾನ ಆಶ್ರಯದಲ್ಲಿ ‘ಪ್ರತಿಭಾ ಪುರಸ್ಕಾರ’ ಹಾಗೂ ‘ಸಿಂಧೂರ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂಧೂರ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮರೇಗುದ್ದಿ ಅಡವಿ ಸಿದ್ಧೇಶ್ವರ ಮಠದ ಡಾ.ನಿರುಪಾದೀಶ ಸ್ವಾಮಿಗಳು ‘ಸಿಂಧೂರ ಸಿರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಲೇಖಕರು ಮತ್ತು ಸ್ವಾಮಿಗಳ ಕೈ ಸದಾ ಆಡುತ್ತಿರಬೇಕು ಎಂದು ಎಂ.ಎಸ್. ಸಿಂಧೂರ ಅವರು ಸದಾವಕಾಲ ಹೇಳಿತ್ತಿದ್ದರು. ಅವರಲ್ಲಿ ವಾಕ್ಚಾತುರ್ಯ ಕೌಶಲವಿತ್ತು ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ಸಿಂಧೂರ ಅವರು ತಮ್ಮ ಸಂಸ್ಕಾರವಂತ ಮಕ್ಕಳಲ್ಲಿ ಅವರು ಜೀವಂತವಾಗಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದವರು. ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತಿ ಮಲ್ಲಿಕಾರ್ಜುನ ಯಾಳವಾರ, ಮಹಾರಾಷ್ಟ್ರ ಸಂಖ ಗ್ರಾಮದ ಕನ್ನಡ ಹೋರಾಟಗಾರ ಡಾ.ಆರ್.ಕೆ. ಪಾಟೀಲ, ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ, ಬೀದರ-ಕಲಬುರ್ಗಿಯ ಕೆಎಂಎಫ್ ಅಧ್ಯಕ್ಷ ರಾಮಚಂದ್ರ ಕೆ. ಪಾಟೀಲ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೀಧರ ಇಟ್ನಾಳ ಶೇ 96.96, ಸವಿತಾ ತೇಲಿ ಶೇ 94.40, ರೇಣುಶ್ರೀ ಐಗಳಿ ಶೇ. 92.96, ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳಾದ ಭಾಗ್ಯಾ ಹೂಗಾರ ಶೇ 92.66, ಮೌನೇಶ ಕಂಬಾರ ಶೇ 92.66, ಭಾವನಾ ನೇಮಗೌಡ ಶೇ 92, ರೇಣುಕಾ ಸಾವಳಗಿ ಶೇ 90.50 ಅವರುಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಪಶುವೈದ್ಯ ಡಾ.ಭೀಮು ಖಾನಾಪುರ, ಎಂ.ಡಿ ಪದವಿ ಪಡೆದ ಡಾ.ಐಶ್ವರ್ಯ ಸಿಂಧೂರ, ಅಮೆರಿಕೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಗಂಗಾ ಸಿಂಧೂರ ಅವರನ್ನು ಗೌರವಿಸಲಾಯಿತು.
ಜಿ.ಎಂ.ಸಿಂಧೂರ ಸ್ವಾಗತಿಸಿದರು. ನಿವೃತ್ತ ಜಂಟಿ ನಿರ್ದೇಶಕ ಎಂ.ಎಂ. ಸಿಂಧೂರ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಸಿಂಧೂರ ಬಿನ್ನವತ್ತಳೆ ಓದಿದರು. ಸಾಹಿತಿ ಎಂ.ಬಿ. ಇಂಡಿ ನಿರೂಪಿಸಿದರು.