ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿನ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಗುರು ರಾಯರ ಆರಾಧನಾ ಮಹೋತ್ಸವವು ಮಂಗಳವಾರ ಉತ್ತಾರಾರಾಧನೆ ಮೂಲಕ ಸಂಪನ್ನಗೊಂಡಿತು.
ಬೆಳಗ್ಗೆ ಸುಪ್ರಭಾತ, ವಿವಿಧ ಅರ್ಚಕರ ನೇತೃತ್ವದಲ್ಲಿ ರಥಾಂಗ ಹವನ, ಶ್ರೀಹರಿ-ವಾಯುಸ್ತುತಿ ಪುನಶ್ಚರಣ, ಶ್ರೀಗುರುಸ್ತೋತ್ರ ಅಷ್ಟೋತ್ತರ ಶತಃಪಠಣಪೂರ್ವಕ ಶ್ರೀಗುರುಸಾರ್ವಭೌಮರಿಗೆ 108 ಕಲಶದಿಂದ ವಿವಿಧ ಹಣ್ಣು ಹಂಪಲಗಳ ಕ್ಷೀರಾಭಿಷೇಕ ಹಾಗೂ ಮಹಾಪಂಚಾಮೃತಾಭಿಷೇಕ ನೆರವೇರಿಸಲಾಯಿತು.
ನಂತರ ಶ್ರೀಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಜತೆಗೆ ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿದ ರಜತ ರಥೋತ್ಸವ ಸಂಭ್ರಮದಿಂದ ನಡೆಯಿತು. ವಿವಿಧ ಭಜನಾ ತಂಡಗಳು ಗುರು ರಾಯರ ಸ್ಮರಣೆಯ ಹಾಡುಗಳನ್ನು ಹಾಡಿದರು. ಬಡಾವಣೆಯ ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಕೋಲಾಟ ಆಡಿ ಗಮನ ಸೆಳೆದರು.
ಆರಾಧನಾ ಮಹೋತ್ಸವದ ಕೊನೆಯ ದಿನದ ಹಿನ್ನೆಲೆಯಲ್ಲಿ ಅಪಾರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದು ಪುನೀತರಾದರು.
ಗಣ್ಯರಾದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನೂತನ ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಜು ಕುರಿಯವರ, ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮುಖಂಡರಾದ ರಾಜೇಶ ದೇವಗಿರಿ, ಉಮೇಶ ವಂದಾಲ ಸಂಜೆಯಪಾಟೀಲ್ ಕನಮಡಿ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು.
ಅರ್ಚಕರಾದ ಶ್ರೀನಿವಾಸ ಆಚಾರ ಗೊಠೆ, ಅಪ್ಪಣ್ಣಾಚಾರ ಗೊಠೆ, ಪ್ರಾಣೇಶ ಮಮದಾಪೂರ, ಶ್ರೀಮಠದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪ್ರಕಾಶ್ ಅಕ್ಕಲಕೋಟ್ ಶ್ರೀನಿವಾಸ ಬೆಟಗೇರಿ, ಅಪ್ಪಣ್ಣ ಗಾಯಿ, ವಿಜಯ ಜೋಶಿ ವಿಕಾಸ್ ಪದಕ್ಕೆ ವಿನಾಯಕ ಕುಲಕರ್ಣಿ, ನಾರಾಯಣ ಜೋಶಿ, ದತ್ತಾತ್ರೇಯ ಜೋಶಿ, ವಿಶಾಲ ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಅನಿಲ ಅಗ್ನಿಹೋತ್ರಿ ಗೋವಿಂದ ದೇಶ್ಪಾಂಡೆ ಮತ್ತಿತರರಿದ್ದರು.

