ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಕಳೆದ ವರ್ಷ ಪ್ರತಿಷ್ಠಾಪಿಸಿರುವ ರಾಷ್ಟ್ರವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆಯನ್ನು ಈ ಬಾರಿಯ ಸ್ವಾತಂತ್ರೋತ್ಸವದಂದು ತಾಲೂಕು ಆಡಳಿತದವರೇ ಮುಂದೆ ನಿಂತು ಅನಾವರಣಗೊಳಿಸಬೇಕೆಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಶಾಳ ಗ್ರಾಮದ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಜಾಗದಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನ ಪ್ರತಿಮೆ ಪ್ರತಿಷ್ಠಾಪಿಸಿದರೆ ಮೇಲ್ವರ್ಗದ ಜನರು ವಿರೋಧ ಮಾಡುತ್ತಾರೆ ಎಂದರೆ ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಡುವುದಕ್ಕಾಗಿ ಜಾತಿ, ಮತ, ಪಂಥ ಭೇದವಿಲ್ಲದೆ ತ್ಯಾಗ ಬಲಿದಾನ ಮಾಡಿದವರನ್ನು ಅವಮಾನಿಸಿದಂತೆ ಮತ್ತು ಅದು ರಾಷ್ಟ್ರದ್ರೋಹಕ್ಕೆ ಸಮ ಎಂದು ನಾವು ಭಾವಿಸಿದ್ದೇವೆ. ರಾಯಣ್ಣನಂತ ವೀರ ಇನ್ಯಾರು ಇರಲು ಸಾಧ್ಯ? ಅವರನ್ನು ಇಡೀ ದೇಶ ಕೊಂಡಾಡುತ್ತಿರುವಾಗ ಜಾತಿಯ ಕಾರಣಕ್ಕೆ ಪ್ರತಿಮೆಗೆ ವಿರೋಧ ಮಾಡುವುದು ಎಷ್ಟು ಸರಿ? ಒಂದು ವರ್ಷದಿಂದ ಈ ಕಾರಣಕ್ಕಾಗಿ ಮಾಶಾಳ ಗ್ರಾಮದಲ್ಲಿ ಪೊಲೀಸ್ ವಾಹನ ನಿಲ್ಲುವಂತಾಗಿದೆ. ಯಾವಾಗ ಏನು ಸಮಸ್ಯೆ ಭುಗಿಲೇಳುತ್ತದೋ ಗೊತ್ತಾಗದಂತಾಗಿದೆ. ಇದೆಲ್ಲಾ ತಾಲೂಕು ಆಡಳಿತದ ಗಮನಕ್ಕೆ ಬಂದಿಲ್ಲವೇ? ಶಾಸಕರ ಗಮನಕ್ಕೆ ಬಂದಿಲ್ಲವೇ? ಅಥವಾ ಎಲ್ಲಾ ಗೊತ್ತಿದ್ದು ಸುಮ್ಮನಿದ್ದಾರೋ ಅರ್ಥವಾಗುತ್ತಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೆ ಶಾಸಕ ಎಂ.ವೈ ಪಾಟೀಲ್ ಅವರಿಗೆ ಹಿಂದುಳಿದ ವರ್ಗದ ಜನರಿಂದ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದ ಅವರು ಜಿಲ್ಲೆಯಲ್ಲಿ ದಲಿತರು, ಹಿಂದುಳಿದ ವರ್ಗದವರು ನೆಮ್ಮದಿಯಾಗಿ ಬದುಕು ನಡೆಸಲಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕುವಂತ ವಾತಾವರಣ ಸೃಷ್ಟಿಸಲು ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇನ್ನು ರಾಯಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದ ಸರಿಯಲ್ಲ. ಮಾಶಾಳದಲ್ಲಿನ ರಾಯಣ್ಣನವರ ಪ್ರತಿಮೆಯನ್ನು ಸ್ವತಃ ಶಾಸಕರು, ತಾಲೂಕು ಆಡಳಿತದವರು ಮುಂದಾಗಿ ಗೌರವ ಪೂರ್ವಕವಾಗಿ ಅನಾವರಣಗೊಳಿಸಬೇಕು. ಇಲ್ಲದಿದ್ದರೆ ಅಗಸ್ಟ್ ೧೫ರಂದು ಮಾಶಾಳದಲ್ಲಿ ದಲಿತ ಸೇನೆ ಕಾರ್ಯಕರ್ತರು, ಕುರುಬ ಸಮಾಜದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ರಾಯಣ್ಣನವರ ಪ್ರತಿಮೆ ಅನಾವರಣಗೊಳಿಸುತ್ತೇವೆ. ಈ ವೇಳೆ ಯಾವುದೇ ರೀತಿಯ ಗಲಭೆಗಳು, ಘರ್ಷಣೆಗಳು ಉಂಟಾದರೆ ಅದಕ್ಕೆ ತಾಲೂಕು ಆಡಳಿತ, ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯಾದ್ಯಕ್ಷ ಹನುಮಂತ ಯಳಸಂಗಿ, ವಿಭಾಗೀಯ ಅಧ್ಯಕ್ಷ ಮಹಾಂತೇಶ ಬಳೂಂಡಗಿ, ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ತಾಲೂಕು ಅಧ್ಯಕ್ಷ ಮಹಾದೇವ ಬಂಕಲಗಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬೀರಣ್ಣ ಕನಕಟೇಲರ್, ಮುಖಂಡರಾದ ಬಾಲಾಜಿ ಗೋಡಕೆ, ಶಿವಲಿಂಗ ಚಲಗೇರಿ, ಸುನೀಲ್ ಪೂಜಾರಿ, ರಮೇಶ ಸೂಲೇಕರ, ಸಂತೋಷ ಸಿಂಗೆ, ಕಪೀಲ್ ವಾಲಿ, ಸಮೀರ್ ಅವಟಿ, ಸಿದ್ದು ಪೂಜಾರಿ ಕಾಳನೂರ, ಸಂತೋಷ ಪೂಜಾರಿ ಶಿರಸಗಿ, ಮಡಿವಾಳ ಹೊಸಮನಿ, ಸುನೀಲ್ ಸಿಂಧೆ, ರವಿ ಕಾಂಬಳೆ ಇದ್ದರು.

