ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿದ್ದು ಎಂ.ಬಿ.ಎ ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆ ಮತ್ತು ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ಯುವ ಉದ್ಯಮಿಗಳಾಗಿ ನಾಡಿನ ಕೀರ್ತಿ ಬೆಳಗಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.
ಸೋಮವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ ಕಾಮರ್ಸ್ ಅಟೊನಾಮಸ್ ಕಾಲೇಜಿನಲ್ಲಿ ಡಿಪಾರ್ಟಮೆಂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಮತ್ತು ಸಂಶೋಧನ ಕೇಂದ್ರ ಆಯೋಜಿಸಿದ್ದ ಪಾಲಕರು ಮತ್ತು ಕಾಲೇಜು ಆಳಡಳಿತ ಮಂಡಳಿ ಸಭೆಯಲ್ಲಿ 14 ಜನ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಈಗ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೋರ್ಸುಗಳಿಗೆ ಸರಿಸಮನಾಗಿ ಮ್ಯಾನೇಜಮೆಂಟ್ ಕೋರ್ಸ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವೃತ್ತಿಕೌಶಲ್ಯ ಹೊಂದಿದವರಿಗೆ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳೂ ಇವೆ. ವಿದ್ಯಾರ್ಥಿಗಳು ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಅಧ್ಯಯನ ಮತ್ತು ಸಂಶೋಧನೆ ನಡೆಸಿ ಹೊಸ ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡ ವ್ಯವಹಾರ ಪ್ರಾರಂಭಿಸಿ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಬೇಕು. ಪಾಲಕರೂ ಕೂಡ ತಮ್ಮ ಮಕ್ಕಳಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು. ಬಿ.ಎಲ್.ಡಿ.ಇ ಸಂಸ್ಥೆ ನವ್ಯೋದ್ಯಮಕ್ಕಾಗಿ ಇನಕ್ಯೂಬೇಶನ್ ಸೆಂಟರ್ ಪ್ರಾರಂಭಿಸಿದ್ದು, ಅಲ್ಲಿ ಸ್ಟಾರ್ಟಪ್ ಮತ್ತು ಪ್ಲೇಸಮೆಂಟ್ ಗೆ ಬೇಕಾದ ನೆರವು ಲಭ್ಯವಿದೆ. ಎಂ.ಬಿ.ಎ ಕಾಲೇಜನ್ನು ರಾಜ್ಯದ ಅತ್ಯುತ್ತಮ ಮ್ಯಾನೇಜಮೆಂಟ್ ಕಾಲೇಜನ್ನಾಗಿ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ನಾನಾ ಕಂಪನಿಗಳಲ್ಲಿ ಉದ್ಯೋಗ ಪಡೆದ 14 ವಿದ್ಯಾರ್ಥಿಗಳಿಗೆ ಸುನೀಲಗೌಡ ಪಾಟೀಲ ನೇಮಕಾತಿ ಆದೇಶ ಪತ್ರ ವಿತರಿಸಿ ಶುಭ ಕೋರಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಬಗಲಿ, ಪೋಷಕರ ಪರವಾಗಿ ಅಡಿವೆಪ್ಪ ಸಾಲಗರ ಮಾತನಾಡಿದರು.
ಇದೇ ವೇಳೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮಣ ಪವಾರ ಸಹಸಂಪಾದಿಸಿರುವ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮತ್ತು ವೆಲ್ತ್ ಮ್ಯಾನೇಜಮೆಂಟ್ ಪುಸ್ತಕವನ್ನು ಸುನೀಲಗೌಡ ಪಾಟೀಲ ಅವರು ಬಿಡುಗಡೆ ಮಾಡಿದರು.
ವಿದ್ಯಾರ್ಥಿನಿ ಸನ್ಮಿತಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಮುರುಗೇಶ ಪಟ್ಟಣಶೆಟ್ಟಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೌರಿ ಕಲಗೊಂಡ ನಿರೂಪಿಸಿದರು. ಡಾ. ಅಶ್ವಿನಿ ಯರನಾಳ ವಂದಿಸಿದರು.

