ಕೊಡಂಗಲ್ ರಾಜ್ಯ ಹೆದ್ದಾರಿಯಲ್ಲಿನ ತಗ್ಗು-ಗುಂಡಿಗಳು ಜಲಮಯ | ಕಣ್ತೆರೆಯದ ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ವರದಿ: ರಶ್ಮಿ ನೂಲಾನವರ
ಸಿಂದಗಿ: ಇದು ರಾಜ್ಯ ಹೆದ್ದಾರಿ. ಆದರೆ ಸ್ಥಳೀಯ ರಸ್ತೆಗಿಂತಲೂ ಹೆಚ್ಚು ಹಾಳಾಗಿದೆ. ನಿತ್ಯ ಈ ರಸ್ತೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಹಾಪೂರ, ಮಳ್ಳಿ, ಕೆಂಭಾವಿ, ಗೋಲಗೇರಿ, ಸಿಂದಗಿಗೆ ಬರಲು ಇದೇ ಪ್ರಮುಖ ದಾರಿಯಾದರೂ ಈ ರಸ್ತೆ ಇದುವರೆಗೂ ದುರಸ್ತಿಯಾಗದಿರುವುದು ದುರಂತವೇ ಸರಿ.
ಈ ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಪ್ರತಿದಿನ ಹಲವು ಬೈಕ್ ಸವಾರರು, ವಾಹನ ಚಾಲಕರು ಸಂಚರಿಸಲು ಪರದಾಡುವಂತಾಗಿದೆ.
ಹೇಳಿಕೊಳ್ಳಲು ಮಾತ್ರ ಇದು ಕೊಡಂಗಲ್ ರಾಜ್ಯ ಹೆದ್ದಾರಿ. ಆದರೆ ಈ ಹೆದ್ದಾರಿಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಹೊಲದ ರಸ್ತೆಯಲ್ಲಿ ಸಂಚರಿಸುವ ಅನುಭವವಾಗುತ್ತದೆ. ಈ ರಸ್ತೆಯ ಮೇಲೆ ನಿತ್ಯ ಇಲ್ಲಿಂದ ಪ್ರಯಾಣ ಬೆಳೆಸುವವರ ಸ್ಥಿತಿ ಅಧೋಗತಿ ಎನ್ನುವಂತಾಗಿದೆ. ಹೇಳೋರು-ಕೇಳೋರು ಯಾರು ಇಲ್ಲದಂತಾಗಿದೆ ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.
ಮಳೆ ಬಂದರೆ ಸಾಕು ಈ ರಸ್ತೆಯಲ್ಲಿನ ತಗ್ಗು-ಗುಂಡಿಗಳ ಜಲಮಯವಾಗಲಿದ್ದು, ವಾಹನ ಸವಾರರಿಗೆ ರಸ್ತೆಯೇ ಗೊತ್ತಾಗುತ್ತಿಲ್ಲ. ಇಂತಹ ದುಸ್ಥಿತಿಯೆಡೆಯ ಸುಧಾರಣೆಗೆ ಸರಕಾರ ಮೊದಲ ಆದ್ಯತೆ ನೀಡಬೇಕು. ಈ ಹೆದ್ದಾರಿಯು ಸಿಂದಗಿಯಿಂದ ಪ್ರಾರಂಭವಾಗುತ್ತದೆ. ಮನ್ನಾಪೂರ, ಯಂಕಂಚಿ, ಗೋಲಗೇರಿ ಸೇರಿದಂತೆ ವಿವಿಧೆಡೆ ರಸ್ತೆಯ ಮಧ್ಯದಲ್ಲಿಯೇ ಐದಾರು ಇಂಚುಗಳಷ್ಟು ಆಳ ಮತ್ತು ಅಗಲವಾದ ಹೊಂಡಗಳಾಗಿವೆ. ಹೊಂಡಗಳನ್ನು ತಪ್ಪಿಸುವ ಭರದಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಅಸಂತಾಪೂರ ಸಾರಿಗೆ ಇಲಾಖೆಯ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಡಾಂಬರ್ ಕಿತ್ತುಹೋಗಿರುವ ಪರಿಣಾಮ ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಈ ರಸ್ತೆಗೆ ಸಂಚರಿಸುವ ಅದೇಷ್ಟೋ ವಾಹನಗಳು ಅನೇಕ ಬಾರಿ ರಸ್ತೆ ಮಧ್ಯದಲ್ಲಿ ಹಾಳಾಗಿ ನಿಂತಿರುವ ಅನೇಕ ಉದಾಹರಣೆಗಳು ಇವೆ. ಸಂಬಂಧಿಕರು ಮಾತ್ರ ಇದಕ್ಕೂ ನಮಗೂ ಏನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಎರಡು-ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚಿನ ಹೊಂಡಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಕ್ಕೆ ಮತಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಇನ್ನಾದರೂ ಈ ರಸ್ತೆ ದುರಸ್ತಿಗೆ ಸಂಬಂಧಿಕರು ಮುಂದಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
“ಕೊಡಂಗಲ್ ರಾಜ್ಯ ಹೆದ್ದಾರಿಯ ಸ್ಥಿತಿ ಚಿಂತಾಜನಕವಾಗಿದೆ. ಆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕಾರಣ ಇದಕ್ಕೆ ಸಂಬಂದಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕು.”
– ಚಂದ್ರಶೇಖರ ಕೆಂಭಾವಿ
ಸಮಾಜ ಸೇವಕರು
“ಯಂಕಂಚಿ ಗ್ರಾಮದಿಂದ ಸಿಂದಗಿ ನಗರಕ್ಕೆ ಹೋಗಬೇಕಾದರೆ ಇದು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ. ಪ್ರತಿನಿತ್ಯ ಸಂಚಿರಿಸುವ ನಮಗೆ ಇದರಿಂದ ತುಂಬಾ ಕಷ್ಟವಾಗುತ್ತಿದೆ. ಸ್ವಲ್ಪ ಆಯಾ ತಪ್ಪಿದರೂ ನಮ್ಮ ಕೈ-ಕಾಲು ಮುರಿಯುತ್ತೋ ಏನೋ ಎಂಬಂತಾಗಿದೆ.”
*- ಸಿದ್ದರಾಮ ಡಗ್ಗಾ*ಯಂಕಂಚಿ ಗ್ರಾಮದ ನಿವಾಸಿ

