ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ತಾಲೂಕಿನ ಜಂಬಿಗಿ ಕೆ.ಡಿ ಹಾಗೂ ತುಂಗಳ ರಸ್ತೆ ಮಾರ್ಗದ ಮಧ್ಯೆದ ಜಂಬಗಿ ಕೆ.ಡಿ ಗ್ರಾಮದ ಗಿರಮಲ್ಲ ಬಿರಾದಾರ ತೋಟದ ವಸ್ತಿ ಕಾಡುಪ್ರಾಣಿಯೊಂದು ಇವರ ನಾಯಿ ಮರಿ ಮತ್ತು ಆಡು ತಿಂದು ಅವರ ಹೊಲದಲ್ಲಿ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಹಾಗೂ ತೋಟದ ವಸ್ತಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಚಿರತೆ ಆಕಾರದ ಪ್ರಾಣಿಯನ್ನು ನೋಡಿದ್ದೇನೆ ಎಂದು ರೈತರಾದ ಗಿರಮಲ್ಲ ಬಿರಾದಾರ ಹೇಳುತ್ತಾರೆ. ಹಾಗೂ ಗ್ರಾಮಸ್ಥರು ಹೆಜ್ಜೆ ಗುರುತು ಹಾಗೂ ನಾಯಿಮರಿಯನ್ನು ತಿಂದು ಬಿಟ್ಟಿದ್ದನ್ನು ನೋಡಿ ಸಾವಳಗಿ ಪೊಲೀಸ್ ಠಾಣೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಗಮನಕ್ಕೆ ತಂದಿರುತ್ತಾರೆ.
ಇದಕ್ಕೆ ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾವಳಗಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆಗೆ ಚರ್ಚಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಾವಳಗಿ ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಗುಡಿಮನಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹಾರಗೊಂಡ, ಪ್ರಕಾಶ್ ಕರಾವಳಿ, ಈರಣ್ಣ ಪೋದ್ದಾರ, ಪೊಲೀಸ್ ಸಿಬ್ಬಂದಿಗಳಾದ ವಿಶಾಲ್ ಭಜಂತ್ರಿ, ಶ್ರೀಶೈಲ ಜಂಬಿಗಿ, ಗ್ರಾಮಸ್ಥರಾದ ಶ್ರೀಶೈಲ ಅಲ್ಲವಗೋಳ, ಗಿರಿಗೌಡ ಪಾಟೀಲ, ರವಿ ಐಗಿಳಿ, ಮಾಲಿಂಗಪ್ಪ ಕುಂಚನೂರ ಅನೇಕರು ಉಪಸ್ಥಿತರಿದ್ದರು.
“ಚಿರತೆ ಅಥವಾ ಕತ್ತೆ ಕಿರುಬ ಎಂಬುದನ್ನು ಪತ್ತೆ ಹಚ್ಚಿ ಚಿರತೆಯಾಗಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ನಾವು ಹೆಚ್ಚಿನ ಕಾರ್ಯಚರಣೆ ನಡೆಸಿ, ಅಲ್ಲಲ್ಲಿ ಸಿಸಿ ಕ್ಯಾಮೆರಾ ಹಾಗೂ ಮಾಂಸಾಹಾರವನ್ನು ಇಟ್ಟು ಅದನ್ನು ಬೋನಿನಲ್ಲಿ ಬಂಧಿಸುತ್ತೇವೆ. ಅದಕ್ಕಾಗಿ ಗ್ರಾಮಸ್ಥರಲ್ಲಿ ಮನವಿ, ದನ ಕರು, ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನು ಯಾರೂ ರಾತ್ರಿ ವೇಳೆ ಹೊರಗಡೆ ಪ್ರಾಣಿಗಳನ್ನು ಕಟ್ಟಬೇಡಿ ಹಾಗೂ ಚಿಕ್ಕ ಮಕ್ಕಳನ್ನು ಹೊರಗಡೆ ಬಿಡಬೇಡಿ, ಒಬ್ಬಂಟಿಯಾಗಿ ತಿರುಗಾಡಬೇಡಿ ಎಂದು ರೈತರಲ್ಲಿ ಮನವಿ ಮಾಡುತ್ತೇವೆ.”
– ಕಿರಣ್ ದಾಸರೆಡ್ಡಿ
ಜಮಖಂಡಿ ವಿಭಾಗ ವಲಯ ಅಧಿಕಾರಿ
ಕೋಟ್ ೨
“ನನಗೂ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಅಧಿಕಾರಿಗಳಿಗೂ ಹಾಗೂ ಪೊಲೀಸ್ ಇಲಾಖೆ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಮುಂದಿನ ಕ್ರಮ ಕೈಗೊಳ್ಳುತ್ತೇವೆ.”
– ಅನೀಲ ಬಡಿಗೇರ
ಜಮಖಂಡಿ ತಹಶೀಲ್ದಾರ

“ಗ್ರಾಮದ ಜನರು ಭಯಪಡುವ ಅಗತ್ಯವಿಲ್ಲ, ಗ್ರಾಮದಲ್ಲಿ ಸಿಬ್ಬಂದಿ ಯೋಜನೆ ರಾತ್ರಿಗಸ್ತು ತಿರುಗಾಡಲು ಸೂಚಿಸುತ್ತೇನೆ. ಜನರು ಕೂಡ ಜಾಗೃತರಾಗಿರಬೇಕು. ಅದು ಚಿರತೆಯಾಗಿದ್ದರೂ ಮತ್ತು ಕತ್ತೆಕಿರುಬಾಗಿದ್ದರೂ ಯಾವುದೇ ಪ್ರಾಣಿ ಇದ್ದರೂ ಜನರಿಗೆ ತೊಂದರೆಯಾಗದಂತೆ ನಾವು ಕಾಳಜಿ ವಹಿಸುತ್ತೇವೆ.”
– ಅಪ್ಪು ಐಗಳಿ
ಪಿಎಸ್ಐ, ಸಾವಳಗಿ ಪೊಲೀಸ್ ಠಾಣೆ

