ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮೊದಲು ಮೂರು ದಿನಗಳ ನಡೆಯುತ್ತಿದ್ದ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಐತಿಹಾಸಿಕ ಜಾತ್ರಾಮಹೋತ್ಸವವು ಕಳೆದ ಮೂರು ವರ್ಷಗಳಿಂದ ಐದು ದಿನಗಳ ಕಾಲ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಎಲ್ಲರ ಸಹಕಾರದಿಂದ ಐತಿಹಾಸಿಕ ಜಾತ್ರೆಗೆ ಮೆರಗು ಬರುತ್ತಿರುವುದು ಹರ್ಷದಾಯಕ ಸಂಗತಿ. ಈ ವರ್ಷದ ಜಾತ್ರಾಮಹೋತ್ಸವವು ಆ. ೧೧ ರಿಂದ ೧೫ ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಜಾತ್ರಾಮಹೋತ್ಸವದ ಯಶಸ್ವಿಗೆ ವಿವಿಧ ಇಲಾಖೆಯ ಸಹಕಾರ ಸೇರಿದಂತೆ ಎಲ್ಲ ಜನರ ಸಹಕಾರ ಅಗತ್ಯ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದ ಮುಂಭಾಗ ಗುರುವಾರ ಸಂಜೆ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನಡೆಯುತ್ತಿರುವ ಬಸವೇಶ್ವರ ಜಾತ್ರೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಕಳ್ಳರು ಜನರ ಕೊರಳಲ್ಲಿದ್ದ ಬಂಗಾರದ ಚೈನ್ ಹೊಡೆದಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ಸಾಂಗೋಪ ಸಾಂಗವಾಗಿ ನಡೆದುಕೊಂಡು ಬರುತ್ತಿದೆ. ಬಸವೇಶ್ವರ ದೇವಾಲಯವು ಸರ್ಕಾರಕ್ಕೆ ಹೋಗಿದ್ದರೂ ಸಹ ಪಟ್ಟಣದ ಎಲ್ಲ ಹಿರಿಯರು, ಯುವಜನಾಂಗ ಸೇರಿದಂತೆ ಎಲ್ಲ ಜನತೆ ಸೇರಿಕೊಂಡು ಜಾತ್ರೆಯನ್ನು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಲ್ಲಿ ಯಾರಿಗೂ ಅಸಮಾಧನವಾಗದಂತೆ ನೋಡಿಕೊಂಡು ಹೋಗಲಾಗುತ್ತಿದೆ. ಪ್ರತಿ ವರ್ಷ ಜಾತ್ರೆಗೆ ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಬಸವೇಶ್ವರ ಆಶಯದಂತೆ ಈ ವರ್ಷದ ಜಾತ್ರೆ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬಂಜಾರ ಸಮುದಾಯಕ್ಕೆ ಸೇರಿದ ರವಿ ರಾಠೋಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಸಮಿತಿಯಲ್ಲಿ ಎಲ್ಲ ಜನಾಂಗಕ್ಕೆ ಸೇರಿದ ಜನರನ್ನು ಪದಾಽಕಾರಿಗಳನ್ನಾಗಿ ಮಾಡಲಾಗಿದೆ. ಜಾತ್ರೆಗೆ ಬರುವ ಎಲ್ಲ ಜನರಿಗೂ ಕುಡಿಯುವ ನೀರು, ದಾಸೋಹ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಲಾಗುವದು. ಈಗಾಗಲೇ ಜಾತ್ರೆ ಯಶಸ್ವಿಗೆ ಅಗತ್ಯ ಸಿದ್ಧತೆ ಭರದಿಂದ ನಡೆದಿದೆ ಎಂದರು.
ಜಾತ್ರೆಯಲ್ಲಿ ಹಾಕಲಾಗುವ ಅಂಗಡಿಗಳಿಗೆ ತಾತ್ಕಲಿಕವಾಗಿ ವಿದ್ಯುತ್ ಅಗತ್ಯವಿದೆ. ಇದಕ್ಕಾಗಿ ಹೆಸ್ಕಾಂ ಇಲಾಖೆಯು ಅಂಗಡಿಗಳನ್ನು ಹಾಕುವ ಜಾಗೆಯಲ್ಲಿ ತಾತ್ಕಲಿಕವಾಗಿ ಕಂಬಗಳನ್ನು ಹಾಕಿ ಅವರಿಗೆ ವಿದ್ಯುತ್ ಪೂರೈಕೆ ಮಾಡಬೇಕು. ಇದರಿಂದ ತಮ್ಮ ಇಲಾಖೆಗೆ ಆದಾಯ ಬರುತ್ತದೆ. ಅವರಿಗೆ ಹೆಸ್ಕಾಂ ಇಲಾಖೆಯು ಸಹಕಾರ ನೀಡಬೇಕೆಂದ ಸಭೆಯಲ್ಲಿ ಹಾಜರಿದ್ದ ಹೆಸ್ಕಾಂ ಅಽಕಾರಿಗಳಿಗೆ ಹೇಳಿದ ಅವರು, ಪುರಸಭೆ ಮುಖ್ಯಾಽಕಾರಿಗಳು ಆ.೧೦ ರಿಂದ ಹತ್ತು ದಿನಗಳ ಕಾಲ ಬಸವೇಶ್ವರ ದೇವಸ್ಥಾನದ ಸುತ್ತಮುತ್ತವಿರುವ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ಬದಿಯಲ್ಲಿನ ಹಣ್ಣು-ತರಕಾರಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಬೇರೆಡೆ ವ್ಯವಸ್ಥೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ವಾಹನಗಳ ಸಂಚಾರ, ಜಾತ್ರೆಗೆ ಬರುವ ಜನರಿಗೆ ಅನುಕೂಲ ಮಾಡಿಕೊಡಬೇಕೆಂದರು.
ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಮಾತನಾಡಿ, ಆಗಷ್ಟ್ 11 ರಿಂದ 15 ರವರೆಗೆ ನಡೆಯುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯು ಇತರರಿಗೆ ಮಾದರಿಯಾಗುವಂತೆ ಎಲ್ಲರ ಸಹಕಾರ ಪಡೆದುಕೊಂಡು ಯಶಸ್ವಿಗೊಳಿಸಯಬೇಕು. ಐದು ದಿನಗಳವರೆಗೆ ನಡೆಯಲಿರುವ ಬಸವೇಶ್ವರ ಜಾತ್ರೆಗೆ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತದಿಂದ ನೀಡಲಾಗುವುದು. ಜಾತ್ರೆಗೆ ಯಾವುದೇ ರೀತಿಯ ಭಂಗ ಬರದಂತೆ ಶಾಂತಿಯುತವಾಗಿ ಜಾತ್ರೆ ನಡೆಯುವಂತೆ ಜಾತ್ರಾ ಉತ್ಸವ ಸಮಿತಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಜಾತ್ರೆಗೆ ಭಂಗ ತರುವಂತಹ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಜಾತ್ರೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಜಾತ್ರೆಗೆ ಹೆಚ್ಚು ಜನರು ಬರುವ ನಿರೀಕ್ಷೆಯಿದೆ.. ಜಾತ್ರೆ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕಿನಿಂದ ಹಿಡಿದು ಬಸ್ ನಿಲ್ದಾಣದವರೆಗೂ ಮುಖ್ಯ ರಸ್ತೆಗಳ ಎರಡು ಬದಿಯಲ್ಲಿ ಸಾರ್ವಜನಿಕರು ತಮ್ಮ ಬೈಕ್ ಹಾಗೂ ಇತರೆ ವಾಹನಗಳನ್ನು ನಿಲ್ಲಿಸದೇ ನಿಗದಿ ಪಡಿಸಿದ ಸ್ಥಳದಲ್ಲಿ ನಿಲುಗಡೆ ಮಾಡುವ ಮೂಲಕ ಪಲ್ಲಕ್ಕಿ ಉತ್ಸವ, ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬರುವ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾತ್ರಯಲ್ಲಿ ಧೂಪಪಾನ, ಮಧ್ಯಪಾನ ಮಾಡದಂತೆ ಗಮನ ಹರಿಸಬೇಕು. ಜಾತ್ರೆಯಲ್ಲಿ ಏನಾದರೂ ಗಲಾಟೆ ಮಾಡುವವರು ಕಂಡುಬಂದರೆ ಅಂತಹವರ ಮೇಲೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಜಾತ್ರಾ ಉತ್ಸವ ಸಮಿತಿಯವರು ಜಾತ್ರೆಯ ಸಂದರ್ಭದಲ್ಲಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಜಾತ್ರೆಗೆ ನಮ್ಮ ಇಲಾಖೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಪಟ್ಟಣದ ಬಸವೇಶ್ವರ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯದ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಜಾತ್ರೆಯಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಕದುಡುವ ಕೆಲಸ ಮಾಡುವ ಸಾಧ್ಯತೆಗಳಿರುತ್ತವೆ. ಅಂತಹವರ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಪುರಸಭೆಯು ಆಯಕಟ್ಟಿನಲ್ಲಿ ಸ್ಥಳದಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ, ಆರೋಗ್ಯ ಇಲಾಖೆಯು ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಮಾಡಬೇಕು. ಜಾತ್ರೆಗೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕೆಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಯಾರಿಗೂ ನೋಯಿಸಿದ ರೀತಿಯಲ್ಲಿ ಜಾತ್ರೆ ಅಚ್ಚುಕಟ್ಟಾಗಿ ಮಾಡಬೇಕು. ಜಾತ್ರೆಯಲ್ಲಿ ದಾಸೋಹ ವ್ಯವಸ್ಥೆ ಸರಿಯಾಗಿ ನಡೆಯಬೇಕು. ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು.
ಬಸವೇಶ್ವರ ಸೇವಾ ಸಮಿತಿ ಎಂ.ಜಿ. ಆದಿಗೊಂಡ ಅವರು ಐದು ದಿನ ಕಾಲ ನಡೆಯುವ ಜಾತ್ರೆಯಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ನೀಡಿ ಮಾತನಾಡಿದರು.
ಸಭೆಯಲ್ಲಿ ಬಸವೇಶ್ವರ ಸೇವಾ ಸಮಿತಿಯ ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ,ಸಂಕನಗೌಡ ಪಾಟೀಲ, ಪುರಸಭೆ ಮುಖ್ಯಧಿಕಾರಿ ವಿದ್ಯಾಧರ ಕಲಾದಗಿ, ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ ಸ್ವಾಗತಿಸಿ, ನಿರೂಪಿಸಿದರು. ಸಂಗಮೇಶ ಓಲೇಕಾರ ವಂದಿಸಿದರು.

