ನವದೆಹಲಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಹಾಗೂ ಸಿಂದಗಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶೇಡಬಾಳ-ವಾಡಿ ರೈಲ್ವೆ ಯೋಜನೆ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲಿ ಸಮೀಕ್ಷೆ ಕಾರ್ಯ ನಡೆದಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ವಾಣಿಜ್ಯ ಮತ್ತು ವ್ಯವಹಾರಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆ ಗೈಯುತ್ತಿರುವ ಪಟ್ಟಣವಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇಲ್ಲಿನ ಜನರು ವ್ಯವಹಾರ ವಹಿವಾಟಿಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ತೆರಳಬೇಕಾದ ಅನಿವಾರ್ಯವಿದೆ. ಆದರೆ ಸಿಂದಗಿ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರಿಗೆ ಇತರ ರಾಜ್ಯ, ಜಿಲ್ಲೆಗಳ ಜೊತೆಗೆ ವ್ಯವಹರಿಸಲು ತೊಂದರೆ ಉಂಟಾಗುತ್ತಿದೆ. ಇಂಡಿ, ಮುದ್ದೇಬಿಹಾಳ, ಬ.ಬಾಗೇವಾಡಿ ಸೇರಿದಂತೆ ಹೋಬಳಿಗಳಿಗೂ ಸಹ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪಟ್ಟಣವೆನಿಸಿರುವ ಸಿಂದಗಿ ನಗರಕ್ಕೆ ರೈಲು ಸಂಚಾರ ಇಲ್ಲದಿರುವುದು ವಿಷಾದನೀಯ.
ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹಲವು ಜನಪ್ರತಿನಿಧಿಗಳು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾದರೂ ಯಾರೊಬ್ಬರೂ ಈ ವಿಷಯದ ಬಗ್ಗೆ ಗಂಭೀರತೆ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸಿದರಿಂದ ಸಿಂದಗಿ ಪಟ್ಟಣ ರೈಲು ಸಂಚಾರ ಪಡೆದುಕೊಂಡಿಲ್ಲಿ. ಆದ್ದರಿಂದ ಇನ್ನಾದರೂ ಸ್ವಾತಂತ್ರ ಪೂರ್ವದಿಂದಲೇ (೧೯೩೫) ಬೇಡಿಕೆಯಾಗಿರುವ ಶೇಡಬಾಳ-ವಾಡಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಬೇಕು. ಈ ಮಾರ್ಗವಾಗಿ ರೈಲು ಸಂಚರಿಸಿದರೆ ಸಿಂದಗಿ ಪಟ್ಟಣ ಸೇರಿ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಬೇಕು. ಈ ಮೂಲಕ ಬಹು ವರ್ಷಗಳ ಬೇಡಿಕೆಯಾದ ಶೇಡಬಾಳ-ವಾಡಿ ರೈಲು ಸಂಚಾರ ಯೋಜನೆ ಈಡೇರಲಿ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಇಂಡಿ ರೈಲು ನಿಲ್ದಾಣದಲ್ಲಿ ಗದಗದಿಂದ ಮುಂಬೈಗೆ ಸಂಚರಿಸುವ ರೈಲನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲುವಂತೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಆದಷ್ಟು ಬೇಗನೆ ಈ ಎರಡು ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು. ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬಾಳು ಮುಳಜಿ, ಪ್ರಭು ಹೊಸಮನಿ ಇದ್ದರು.

