ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕು ಆಡಳಿತದ ವತಿಯಿಂದ ಆ.೧೫ರಂದು ಆಯೋಜಿಸುವ ೭೯ನೇ ಸ್ವಾತಂತ್ಯೋತ್ಸವದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಕರೆ ನೀಡಿದರು.
ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಸ್ವಾತಂತ್ರೋತ್ಸವದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರೋತ್ಸವದ ದಿನಾಚರಣೆ ಪ್ರಯುಕ್ತ ಆ.೧೫ರಂದು ಬೆಳಿಗ್ಗೆ ೮:೩೦ ಕ್ಕೆ ಪಟ್ಟಣದ ಶ್ರೀ ಸಂಗಮೇಶ್ವರ ಶಾಲಾ ಕಾಲೇಜ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳ ಸ್ವಚ್ಛತೆ ಕುರಿತು ಪ.ಪಂ.ಮುಖ್ಯಾಧಿಕಾರಿಗಳು ನಿಗಾ ವಹಿಸಬೇಕು. ಸ್ವಾತಂತ್ರೋತ್ಸವದ ದಿನಾಚರಣೆ ಸಮಾರಂಭದಲ್ಲಿ ಯಾವುದೇ ಗೊಂದಲಗಳಾದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪ.ಪಂ.ಮುಖ್ಯಾಧೀಕಾರಿ ಬಾಬಾಸಾಹೇಬ ತಾವಸೆ, ತಾ.ಪಂ.ಅಧಿಕಾರಿ ಸಂಜಯ ಖಡಗೇಕರ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಹವಾಲ್ದಾರ, ಪ.ಪಂ.ಸದಸ್ಯ ಶ್ರೀಕಾಂತ ಗಂಟಗಲಿ, ಚೇತನ ನೀರಾಳೆ ಸೇರಿದಂತೆ ಪ.ಪಂ.ಸದಸ್ಯರು, ಶಿರಸ್ತೆದಾರ ರವಿ ಹಡಪದ, ಕಂದಾಯ ನೀರಿಕ್ಷಕ ವಿಠ್ಠಲ ಕೋಳಿ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ಸಂಘಟನೆಯ ಗಣ್ಯರಾದ ಪ್ರಭಾಕರ ನೀರಾಳೆ, ದೇವೆಂದ್ರಪ್ಪ ಪಾಟೀಲ, ಮಹಾದೇವ ಬನಸೋಡೆ ಸೇರಿದಂತೆ ವಿವಿಧ ಸಂಘಟನೆಯ ಗಣ್ಯರು ಹಾಗೂ ಪೋಲಿಸ್ ಇಲಾಖೆ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

