ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಲು ಆಗ್ರಹಿಸಿ ಕರವೇ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರದಲ್ಲಿ ಸಾಕಷ್ಟು ಗೊಬ್ಬರವಿದ್ದರೂ ಅದರ ಅಭಾವವನ್ನು ಸೃಷ್ಟಿ ಮಾಡಿ ರಸಗೊಬ್ಬರಕ್ಕಾಗಿ ರಾಜ್ಯದಲ್ಲಿ ರೈತರು ಪರದಾಡುವಂತೆ ರಾಜ್ಯ ಸರಕಾರ ಮಾಡಿದೆ ಎಂದು ಕರವೇ ಮುಖಂಡ ಸಿದ್ದು ಬುಳ್ಳಾ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ರೈತರಿಗಾಗಿ ಸಮರ್ಪಕವಾಗಿ ರಸಗೊಬ್ಬರ ಪೂರೈಸುವಂತೆ ಪ್ರತಿಭಟಿಸಿ, ತಾಲೂಕು ದಂಡಾಧಿಕಾರಿ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಸಗೊಬ್ಬರ ಅಭಾವವನ್ನು ಸೃಷ್ಟಿ ಮಾಡಿ ಅದರ ಬೆಲೆಯನ್ನು ಹೆಚ್ಚಿಗೆ ಮಾಡಿ ದ್ವಿಗುಣಗೊಳಿಸಿ ಸರಕಾರ ದುಪ್ಪಟ್ಟು ಬೆಲೆಯನ್ನು ರೈತರ ಮೇಲೆ ಹಾಕುವ ಹುನ್ನಾರ ತಾಲೂಕು ಮತ್ತು ಇಡೀ ರಾಜ್ಯದಲ್ಲಿ ಅಧಿಕಾರಿಗಳು ಮತ್ತು ವರ್ತಕರು ಮಾಡುತ್ತಿದ್ದಾರೆ. ಇದು ಮೊದಲು ನಿಲ್ಲಬೇಕು. ಕೃಷಿ ಅಧಿಕಾರಿಗಳು ಎಲ್ಲ ಗೋದಾಮುಗಳನ್ನು ಪರಿಶೀಲನೆ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಕರವೇ ಗೋದಾಮುಗಳಿಗೆ ಮುತ್ತಿಗೆ ಹಾಕಿಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ, ಶ್ರೀಕಾಂತ ಬಿಜಾಪೂರ, ಮಲ್ಲನಗೌಡ ಬಗಲಿ, ಚೇತನ ರಾಂಪೂರ, ತಾಲೂಕಾಧ್ಯಕ್ಷ ಮುತ್ತು ಹಿಪ್ಪರಗಿ, ಶ್ರೀಶೈಲ ಚೆಳ್ಳಗಿ, ಮಹಾಂತೇಶ ಪರಗೊಂಡ, ಸಮೀರಪಟೇಲ್, ಸಂತೋಷ ಕ್ಷತ್ರಿ, ರಾಜು ಮದರಖಾನ, ಬಸನಗೌಡ ಬಿರಾದಾರ, ಮಹಾಂತೇಶ ಸಾತಿಹಾಳ, ಸಿದ್ರಾಮ ಹಳ್ಳಿ, ರಾಜು ಮಂದೇವಾಲ, ಲಕ್ಕಪ್ಪಗೌಡ ಬಿರಾದಾರ, ಗಂಗಾಧರ ಜಮಖಂಡಿ, ರವಿ ಸಿಂದಗಿ, ವಿಲಾಸ ಪವಾರ, ಯಲ್ಲು ಬಮ್ಮನಳ್ಳಿ, ಮಾಳು ಬಾಗೇವಾಡಿ, ಮುತ್ತು ಪಾಟೀಲ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.

