ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ನೀರು ಮನೆ ಬಾಗಿಲಿನವರೆಗೆ ಬಂದು ಭಯಗೊಳಿಸಿದ ಘಟನೆ ಬುಧವಾರ ದೇವೂರ ತಾಂಡಾ-೨ರಲ್ಲಿ ಜರುಗಿತು.
ತಾಲ್ಲೂಕಿನ ದೇವೂರ ತಾಂಡಾ-೨ರಲ್ಲಿ ಬುಧವಾರ ಬೆಳಿಗ್ಗೆ ಸುರಿದ ಮಳೆ ಭಾರಿ ಅವಾಂತರಕ್ಕೆ ಕಾರಣವಾಯಿತು. ತಾಂಡಾದಲ್ಲಿ ಜರುಗುತ್ತಿರುವ ಚರಂಡಿ ಕಾಮಗಾರಿ ಕಾರಣದಿಂದ ಮಳೆಯ ನೀರು ಮನೆಯ ಬಾಗಿಲಿನವರೆಗೆ ನುಗ್ಗಿ ಬರಲು ಆರಂಭಿಸಿದ್ದು, ಗ್ರಾಮಸ್ಥರನ್ನು ಭಯಗೊಳಿಸಿತು. ನಂತರ ಮಳೆಯ ವೇಗ ಕಡಿಮೆಯಾಗುತ್ತಿದ್ದಂತೆಯೇ ನೀರಿನ ಹರಿಯುವಿಕೆಯು ಸಹ ಕಡಿಮೆಯಾಗಿ ನಿಟ್ಟುಸಿರು ಬಿಡುವಂತಾಯಿತು. ಅದಾಗ್ಯೂ ಮಳೆ ನೀರು ಮನೆಗಳಿಗೆ ನುಗ್ಗಿದೆ, ದಿನಬಳಕೆ ವಸ್ತುಗಳು ಹಾನಿಗೊಳಗಾಗಿವೆ ಎಂಬ ವದಂತಿ ತಾಲ್ಲೂಕು ಆಡಳಿತಕ್ಕೆ ತಲುಪಿದ ಕಾರಣ ತಹಶೀಲ್ದಾರ ಹಾಗೂ ಇಓ ಖುದ್ದಾಗಿ ತಾಂಡಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳು ಭೇಟಿ ನೀಡುತ್ತಿದ್ದಂತೆಯೇ, ಮಳೆ ನೀರು ತಾಂಡಾದಲ್ಲಿ ಮನೆ ಬಾಗಿಲಿನವರೆಗೆ ಬಂದು ಹೋಗಿದ್ದು ನಿಜ. ಆದರೆ ಮನೆಯೊಳಗೆ ನುಗ್ಗಿಲ್ಲ ಹಾಗೂ ಯಾವುದೇ ದಿನಬಳಕೆಯ ವಸ್ತುಗಳು ಹಾಳಾಗಿಲ್ಲ ಎಂದು ನಿವಾಸಿಗಳು ತಿಳಿಸಿದರು.
ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಮಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಸು ರಾಠೋಡ, ಪಿಡಿಓ ಎ.ಟಿ.ಅಂಗಡಿ ಇದ್ದರು.

