ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ವರ್ಷದ ೧೨ ತಿಂಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಭಕ್ತಿ ಭಾವೈಕ್ಯತೆಯಿಂದ ಕೂಡಿರುತ್ತದೆ. ಭಗವಂತನಲ್ಲಿ ಪ್ರಾರ್ಥಿಸಲು ಒಳ್ಳೆಯ ಸಂದರ್ಭ ಇದಾಗಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಹಮ್ಮಿಕೊಂಡ ಭಕ್ತಗಣ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾನವ ಕುಲಕ್ಕೆ ಬರುವ ಕಂಟಕಗಳು ತೊಲಗಿ ಎಲ್ಲೆಡೆ ಸುಖಶಾಂತಿ ನೆಲೆಸಲಿ ಎಂದು ಪ್ರಭುಲಿಂಗೇಶ್ವರನಲ್ಲಿ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸೋಣ. ಶ್ರಾವಣ ಮಾಸದ ನಿಮಿತ್ಯ ಎಲ್ಲ ದೇವಸ್ಥಾನಗಳಲ್ಲಿ ಪೂಜಾದಿ ಕಾರ್ಯಕ್ರಮಗಳು ನಡೆಯುತ್ತವೆ. ಒಳ್ಳೆಯ ಮನಸ್ಸು, ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಮುನ್ನಡೆಯೋಣ. ಅಲ್ಲಮಪ್ರಭು ದೇವರನ್ನು ಸ್ಮರಿಸಿಕೊಳ್ಳುವ ಈ ಪಾದಯಾತ್ರೆಯಲ್ಲಿ ಪ್ರತಿ ಸೋಮವಾರ ಎಲ್ಲ ಭಕ್ತಾದಿಗಳು ನಿರಂತರವಾಗಿ ಪಾಲ್ಗೊಳ್ಳುವ ಮೂಲಕ ಭಕ್ತಿಭಾವ ಪಸರಿಸೋಣ ಎಂದರು.
ಪ್ರತೀ ವರ್ಷದಂತೆ ಈ ಬಾರಿಯೂ ಬಂಡಿಗಣಿ ಬಸವಗೋಪಾಲ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳಿಂದ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.
ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಅವ್ವನಪ್ಪಾ ಮುಗಳಖೋಡ, ಪ್ರಕಾಶ ಪೂಜಾರಿ, ಉಪನ್ಯಾಸಕ ಡಾ. ಹಣಮಂತ ಕುಂಬಾರ, ಮಹಾಲಿಂಗ ಕಾಜಗಾರ, ಶಿವಾನಂದ ದಿನ್ನಿಮನಿ, ಪ್ರಕಾಶ ಹಳ್ಳೂರ ಸೇರಿದಂತೆ ಹಲವಾರು ಜನ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

