ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅನುಭವ ಮಂಟಪವನ್ನು ಪೀರ್ ಶಾ ಬಂಗ್ಲೆಯಾಗಿ ಪರಿವರ್ತಿಸಿದ ಕುರಿತಂತೆ ಹಾಗೂ ಎ.ಎಸ್.ಐ ಸಂರಕ್ಷಿತ ಸ್ಮಾರಕಗಳನ್ನು ವಕ್ಫ್ ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ 2024ರ ನವೆಂಬರ್ 11 ರಂದು ಬರೆದಿದ್ದ ಪತ್ರಕ್ಕೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರವರು ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿರುವ ಜ್ಞಾನಯೋಗಿ ಬಸವೇಶ್ವರ ರವರು 12ನೇ ಶತಮಾನದಲ್ಲಿ ಸ್ಥಾಪಿಸಲಾದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಆಗಿತ್ತು. ಕೆಲ ಪಟ್ಟಭದ್ರರು ಒತ್ತುವರಿ ಮಾಡಿಕೊಂಡು ಅನುಭವ ಮಂಟಪವನ್ನು ಪೀರ್ ಪಾಶಾ ಬಂಗ್ಲೆ ಮಾಡಿಕೊಂಡಿದ್ದಾರೆ. ಇದರಿಂದ ವಿಶ್ವದ ಮೊದಲ ಸಂಸತ್ತಿಗೆ ಚ್ಯುತಿಯಾಗಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದೆ. ಈ ಕುರಿತು ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಆಶ್ವಾಸನೆ ನೀಡಿದ್ದಾರೆ.
ಅದೇ ರೀತಿ ವಿಜಯಪುರ ದಲ್ಲಿ ಪ್ರಸ್ತುತ ವಕ್ಫ್ ನಿಯಂತ್ರಣದಲ್ಲಿರುವ ಎ.ಎಸ್.ಐ ಸಂರಕ್ಷಿತ 43 ಸ್ಮಾರಕಗಳ ಮಾಹಿತಿಯನ್ನು ಇಲಾಖೆಯು ಸಂಗ್ರಹಿಸುತ್ತಿದ್ದು, ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.
ಅತಿಕ್ರಮಣವನ್ನು ಪರಿಹರಿಸಲು ಮತ್ತು ಅನುಭವ ಮಂಟಪವನ್ನು ಅದರ ಹಿಂದಿನ ವೈಭವಕ್ಕೆ ಪುನಃಸ್ಥಾಪಿಸಲು ಸಚಿವಾಲಯವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ತ್ವರಿತ ಪ್ರತಿಕ್ರಿಯೆಗಾಗಿ ಶೇಖಾವತ್ ಜಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

