ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಕಾನೂನುಬದ್ಧ ಹಕ್ಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ಆರ್ಟ ಆಫ್ ಗಿವಿಂಗ್ ಫೌಂಡೇಶನ್ ರಾಷ್ಟ್ರೀಯ ರಾಯಭಾರಿ ಶಿಫಾ ಜಮಾದಾರ ಹೇಳಿದರು.
ಮಂಗಳವಾರ ಗುರುನಾನಕ ನಗರದಲ್ಲಿ ಆರ್ಟ ಆಫ್ ಗಿವಿಂಗ್ ಫೌಂಡೇಶನ್ ಪರವಾಗಿ ಅಸಂಘಟಿತ ಕಾರ್ಮಿಕ ಮಕ್ಕಳಿಗೆ ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಜಾಗೃತಿ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಶಾಲಾ ಬ್ಯಾಗನ್ನು ವಿತರಿಸಿ ಮಾತನಾಡುತ್ತಾ ಕಾರ್ಮಿಕರು ಜೀವನೋಪಾಯಕ್ಕೆ ತಮ್ಮ ಮಕ್ಕಳನ್ನೇ ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವುದು ಆರ್ಥಿಕ ಸಮಸ್ಯೆಯಿಂದ ಬಾಲಕಾರ್ಮಿಕ ಕೆಲಸಕ್ಕೆ ಕಳುಸುತ್ತಿರುವುದು ಅಪಾಯಕಾರಿಗಿದ್ದು ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದ್ದು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪತ್ರಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯಗಳು ಮತ್ತು ಮೌಲ್ಯಗಳನ್ನು ಒದಗಿಸುತ್ತದೆ. ಸಮಾಜದಲ್ಲಿ ಬಾಲಕಾರ್ಮಿಕ ಸಂಖ್ಯೆ ಕಂಡು ಬರುತ್ತಿದೆ. ಇದರ ನಿರ್ಮೂಲನೆಗೆ ಎಲ್ಲರು ಕೈ ಜೋಡಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಾಮಾಜಿಕ ಕಾರ್ಯಕರ್ತ ಸುರೇಶ ಬಿಜಾಪುರ ಮಾತನಾಡುತ್ತಾ, ಅನೇಕ ಸರ್ಕಾರಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದ ಫಲಾನುಭವಿಗಳಿಗೆ ದಕ್ಕುತ್ತಿಲ್ಲ. ನಿಜ ಬಡವರನ್ನು ಸ್ಲಮ್ದಲ್ಲಿ ವಾಸಿಸುತ್ತಿರುವ ಜನರಿಗೆ ಸರಿಯಾಗಿ ಗುರುತಿಸಿ ಅವರಿಗೆ ಮೂಲಭೂತ ಸೌಕರ್ಯ ಹಾಗೂ ಮನೆಗಳ ಹಂಚಿಕೆ ಮತ್ತು ಯೋಜನೆಗಳನ್ನು ತಲುಪಿಸುವಂತೆ ಮಾಡಬೇಕಾಗಿದೆ. ಅವರ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಬೇಕಾಗಿದೆ. ಇದರಿಂದ ಉದ್ಯೋಗಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದರು.
ಗುರುನಾನಕ ನಗರದಲ್ಲಿ ಕಾರ್ಮಿಕರ ಮನೆ ಮನೆಗೆ ತೆರಳಿ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಬೇಕೆಂದು ಜಾಗೃತಿ ಮೂಡಿಸಲಾಯಿತು ಹಾಗೂ ಎಲ್ಲಾ ಮಕ್ಕಳಿಗೆ ಶಾಲಾ ಬ್ಯಾಗಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾನಕಸಿಂಗ್ ಮತ್ತು ಉಜ್ವಲ್ ಸಿಂಗ್ ಉಪಸ್ಥಿತರಿದ್ದರು.

