ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಚಿವ ಶಿವಾನಂದ ಪಾಟೀಲ ಅವರು ನನ್ನ ಕಾರ್ಯವೈಖರಿ ನೋಡಿ ವಿಶ್ವಾಸವಿಟ್ಟು ನಾನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದ್ದಾರೆ. ನಾನು ಈ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ಪಟ್ಟಣಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಅಭಿವೃದ್ದಿಗೆ ಆದ್ಯತೆ ನೀಡಿದ್ದೇನೆ ಎಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪದವೀಧರೆಯಾಗಿದ್ದು, ಮಹಿಳೆಯರು ಸಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಾಗಲೆಂಬ ಉದ್ದೇಶದಿಂದ ಹಾಗೂ ಜನರ ಸೇವೆ ಮಾಡುವ ಉದ್ದೇಶದಿಂದ ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರುವೆ. ನಾನು ಕಾನೂನು ಚೌಕಟ್ಟಿನಲ್ಲಿ ಪುರಸಭೆ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವೆ. ನನ್ನ ಅಧಿಕಾರದಲ್ಲಿ ನನ್ನ ಪತಿ ಸೇರಿದಂತೆ ಯಾರೂ ಹಸ್ತಕ್ಷೇಪ ಮಾಡುವದಿಲ್ಲ. ನನಗೆ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯರು, ಮುಖಂಡರು ನೀಡುವ ಮಾರ್ಗದರ್ಶನದಲ್ಲಿ ನಾನು ಮುನ್ನೆಡೆಯುತ್ತಿರುವೆ ಎಂದರು.
ನಾನು ಉಪಾಧ್ಯಕ್ಷರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುವದು ಸತ್ಯಕ್ಕೆ ದೂರದ ಮಾತು. ಪುರಸಭೆಯಿಂದ ತುರ್ತಾಗಿ ಕೈಗೊಳ್ಳಬೇಕಾದ ಕಾರ್ಯಗಳ ಸಂದರ್ಭದಲ್ಲಿ ಉಪಾಧ್ಯಕ್ಷರು ನಮಗೆ ಲಭ್ಯವಾಗದೇ ಇರುವದರಿಂದಾಗಿ ಅಂತಹ ಸಂದರ್ಭದಲ್ಲಿ ನಾವು ನಿರ್ಧಾರ ಕೈಗೊಂಡು ಕಾರ್ಯ ಕೈಗೊಂಡಿದ್ದೇವೆ. ಉಪಾಧ್ಯಕ್ಷರು ಲಭ್ಯವಿಲ್ಲದೇ ಸಂದರ್ಭದಲ್ಲಿ ಅಧ್ಯಕ್ಷರು ತಮ್ಮ ಕಾರ್ಯ ಕೈಗೊಳ್ಳಬಹುದು ಎಂದು ಪೌರಾಡಳಿತ ನಿಯಮ ಹೇಳುತ್ತದೆ ಎಂದರು.
ನಾನು ಎರಡನೇ ಬಾರಿಗೆ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಪುರಸಭೆ ಎಲ್ಲ ೨೩ ವಾರ್ಡಿಗಳಿಗೂ ಅನುದಾನ ನೀಡಲಾಗಿದೆ. ಕೆಲವೊಂದು ವಾರ್ಡಿನಲ್ಲಿ ವಿಶೇಷ ಅನುದಾನದಡಿಯಲ್ಲಿ ಕಾರ್ಯ ಕೈಗೊಳ್ಳಲಾಗಿದೆ. ಪುರಸಭೆಯಿಂದ ನಡೆಯುವ ಕಾಮಗಾರಿ ಜಿಪಿಎಸ್ ಮಾಡಿ ನಡೆಯುತ್ತದೆ. ಬಿಲ್ ತೆಗೆಯುವಾಗಲೂ ನಾನು ಪರಿಶೀಲನೆ ಮಾಡುವ ಜೊತೆಗೆ ಪುರಸಭೆ ಅಭಿಯಂತರ, ಥರ್ಟ್ ಪಾರ್ಟಿ ವೀಕ್ಷಿಸಿದ ನಂತರ ಕಾಮಗಾರಿ ಬಿಲ್ ತೆಗೆಯಲಾಗುತ್ತದೆ. ಇದರಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಯಲು ಅವಕಾಶವಿಲ್ಲ ಎಂದರು.
ಪಟ್ಟಣದಲ್ಲಿ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಆಲಮಟ್ಟಿ, ಹೆಬ್ಬಾಳದಲ್ಲಿರುವ ಮೋಟಾರ್ ಪಂಪ್ಹೌಸ್ನಲ್ಲಿರುವ ಮೋಟಾರ ರಿಪೇರಿ ಮಾಡಿಸಲಾಗಿದೆ. ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಯಿತು. ನನ್ನ ಮೂರು ತಿಂಗಳ ಅಧಿಕಾರ ಅವಧಿಯಲ್ಲಿ ಪಟ್ಟಣದ ಜನರ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ವಿದ್ಯುತ್ ದೀಪ ರಿಪೇರಿಗೆ ಆದ್ಯತೆ ನೀಡಲಾಗಿದೆ. ನನ್ನ ಮೂರು ತಿಂಗಳ ಅಧಿಕಾರವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಜು.೧೧ ರಂದು ಸಾಮಾನ್ಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮೂರು ತಿಂಗಳ ಜಮಾ-ಖರ್ಚಿನ ವಿವರವನ್ನು ತಿಳಿಸಲಾಗುವುದು ಎಂದರು.

