ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಅಂಗವಾಗಿ ಅಲಾಯಿ ದೇವರ ಪಂಜಾ ಹಾಗೂ ಡೋಲಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.
ಕಲಕೇರಿ ಗ್ರಾಮದಲ್ಲಿ ರವಿವಾರ ಸಾಂಪ್ರದಾಯಿಕ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂನ್ನು ಅತ್ಯಂತ ಸಂಭ್ರಮ ಸಡಗರದೊಂದಿಗೆ ಆಚರಿಸಿ ಕೊನೆಯ ದಿನ ಸಂಪ್ರದಾಯದಂತೆ ಅಲಾಯಿ ದೇವರ ಮೆರವಣಿಗೆಯನ್ನು ಸಾವಿರಾರು ಭಕ್ತರ ಜಯಘೋಷದ ಮಧ್ಯೆ ಮೆರವಣಿಗೆ ನಡೆಸಲಾಯಿತು. ಹಲಿಗೆಮೇಳ, ವಾಧ್ಯಮೇಳದೊಂದಿಗೆ ಯುವ ಸಮೂಹದ ಅಲಾಯಿ ಕುಣಿತದೊಂದಿಗೆ ಗ್ರಾಮದ ಅಗಸಿ ಮಾರ್ಗವಾಗಿ ಮೆರವಣಿಗೆ ಸಾಗಿತು, ದಾರಿಯುದ್ದಕ್ಕೂ ನೆರೆದ ಜನಸ್ತೋಮ ಅಲಾಯಿ ದೇವರಿಗೆ ಉತ್ತತ್ತಿಯನ್ನು ಹಾರಿಸಿ ಧನ್ಯತಾಭಾವವನ್ನು ಮೆರೆದರು.
ಜಿಲ್ಲಾಧಿಕಾರಿಗಳು ಕಲಕೇರಿಯಲ್ಲಿ ಮೊಹರಂ ಹಬ್ಬ ನಿಷೇದಿಸಿದ ಹಿನ್ನೆಲೆಯಲ್ಲಿ, ಕಲಕೇರಿ ಗ್ರಾಮಸ್ಥರು ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಆಚರಿಸಲು ಅನುಮತಿಯನ್ನು ನಿಡುವಂತೆ ಕೊರಿದ್ದರ ಪ್ರಯುಕ್ತ ಮಾನ್ಯ ಕಲಬುರಗಿ ಉಚ್ಚನ್ಯಾಯಾಲಯವು ನೀಡಿದ ಆದೇಶದಂತೆ ಗ್ರಾಮದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ ನಡುವೆ ರವಿವಾರ ಸಂಜೆ ಮೊಹರಂ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲಾಯಿತು.
ಕಲಕೇರಿ ಪಿಎಸ್ಐ ಸುರೇಶ ಮಂಟೂರ ನೇತ್ರತ್ವದಲ್ಲಿ ಸೂಕ್ತ ಬಿಗಿ ಬಂದೋಬಸ್ತ ವಹಿಸಲಾಗಿತ್ತು.

