ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಸರಕಾರ ರೈತರಿಗಾಗಿ ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಜವಾಬ್ದಾರಿ ಸಹಕಾರಿ ಸಂಸ್ಥೆಯದಾಗಿದ್ದು ಅವರ ಹಿತ ಕಾಯಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಬದ್ದರಾಗಿರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸಲಹೆ ನೀಡಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಬಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ರೈತ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿದ್ದು ಅಭಿವೃದ್ದಿಯಲ್ಲಿ ಮುಂಚೂನಿಯಲ್ಲಿವೆ. ಈಭಾಗದ ರೈತರ ಜೀವನಾಡಿಯಾಗಿರುವ ಗ್ರಾಮದ ಪಿಕೆಪಿಎಸ್ ಸಂಸ್ಥೆ ಈಗಾಗಲೇ ಲಾಭದಲ್ಲಿದ್ದು ರೈತ, ನೇಕಾರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ದಿಗೆ ಶೃಮಿಸುವ ಮೂಲಕ ಸಂಘವನ್ನು ಇನ್ನೂ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕೆಂದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಮಾತನಾಡಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲು ಈ ಹಿಂದೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು ಅನುಮೋದನೆಯೂ ದೊರೆತಿದೆ. ಆದರೆ ಅಧಿಕಾರಿಗಳು ವಿಳಂಭಧೋರಣೆ ಅನುಸರಿಸುತಿದ್ದು ತೀವೃಗತಿಯಲ್ಲಿ ಶಾಖೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಂಭಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಹದಿನೈದು ದಿನಗಳಲ್ಲಿ ಕಾರ್ಯಗತಗೊಳಿಸುವುದಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಚನ್ನಪ್ಪಾ ಶ್ರೀಶೈಲಪ್ಪ ಬಿಳ್ಳೂರ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಭು ಯಮನವ್ವ ಗೋವಿಂದಗೋಳರನ್ನು ಗೌರವಿಸಲಾಯಿತು.
ಹಿಂದಿನ ಅಧ್ಯಕ್ಷ ಹಣಮಂತ ಬಸಪ್ಪ ನೇಸೂರ, ನಿಂಗಪ್ಪ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜೇರಿ, ಆನಂದ ಕವಟಿ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ನಾಗಪ್ಪ ಆಲಕನೂರ, ಹಣಮಂತ ಮಲ್ಲಪ್ಪ ಕೋಳಿ, ಮಹಾಂತೇಶ ಜಾಲಿಕಟ್ಟಿ, ಅವ್ವನಪ್ಪ ಮುಗಳಖೋಡ, ಚನ್ನಪ್ಪ ತೇಲಿ ಸೇರಿದಂತೆ ಹಲವಾರು ಜನ ಪ್ರಮುಖರು, ಪಿಕೆಪಿಎಸ್ ನಿರ್ದೇಶಕರು ರೈತ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಂ.ವ್ಹಿ. ವಜ್ಜರಮಟ್ಟಿ ಸ್ವಾಗತಿಸಿ ನಿರೂಪಿಸಿದರು, ಮಹಾಲಿಂಗ ಹಳ್ಳೂರ ವಂದಿಸಿದರು.

