ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬರುವ ಅಗಸ್ಟ೧ ಹಾಗೂ ೨ ರಂದು ಎರಡು ದಿನಗಳ ಕಾಲ ಪ್ರಸ್ತುತ ೨೦೨೫-೨೬ ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿವೆ.
ಅತಿಥೇಯ ಶಾಲೆಯಲ್ಲಿ ಕ್ರೀಡಾಕೂಟದ ರೂಪರೇಷೆಗಳನ್ನು ಚರ್ಚಿಸಿ ಸಿದ್ದತೆ ಕೈಗೊಳ್ಳಲು ಕರೆಯಲಾಗಿದ್ದ ನಿಡಗುಂದಿ ವ್ಯಾಪ್ತಿಯಲ್ಲಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿಪಡಿಸಲಾಗಿದೆ.
ಕ್ರೀಡಾಕೂಟದ ಸಂಘಟನಾ ಅಧ್ಯಕ್ಷರಾದ ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ದೈಹಿಕ ಶಿಕ್ಷಕರ ಸೂಕ್ತ ಸಲಹೆ,ಸೂಚನೆಗಳನ್ನು ಆಲಿಸಿ ಕ್ರೀಡಾಕೂಟದ ದಿನಾಂಕ ನಿಗದಿ ಸೇರಿದಂತೆ ಹಲವಾರು ವಿಷಂಯಗಳನ್ನು ಚರ್ಚಿಸಿ ಕ್ರೀಡಾಕೂಟ ಯಶಸ್ಸಿಯಾಗಿ ಜರುಗಿಸಲು ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ದೈಹಿಕ ಶಿಕ್ಷಕರ ಬಳಗದ ಸಹಕಾರ ಕ್ರೀಡಾಕೂಟ ಯಶಸ್ಸಿಗೆ ಅತ್ಯಗತ್ಯ. ಅಚ್ಚುಕಟ್ಟಾಗಿ, ಯಾವುದೇ ಸಮಸ್ಯೆಗಳಾಗದಂತೆ ಕೂಟ ನೆರವೇರಿಸಿಕೊಡಲು ಮನವಿ ಮಾಡಿದರು. ಸ್ವಾಗತ ಸಮಿತಿ, ನ್ಯಾಯದಾನ ಸಮಿತಿ, ಪಥ ಸಂಚಲನ ಸಮಿತಿ, ವೈದ್ಯಕೀಯ ಸಮಿತಿ, ಪರಿಶೀಲನಾ ಸಮಿತಿ, ಬಹುಮಾನ ದಾಖಲಾತಿ ಸಮಿತಿ, ವೇದಿಕೆ ಸಮಿತಿ, ಉಪಹಾರ ಹಾಗೂ ಊಟದ ವ್ಯವಸ್ಥಾಪಕ ಸಮಿತಿ,ಆಟದ ಸಾಮಗ್ರಿಗಳ ಸಮಿತಿ,ವೈಯಕ್ತಿಕ ಹಾಗೂ ಗುಂಪು ಆಟಗಳ ಸಮಿತಿ, ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಹಲ ಸಮಿತಿಗಳನ್ನು ರಚಿಸಿ ಕ್ರೀಡಾಕೂಟ ಸುವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುವುದು ಎಂದರು.
ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ,ಹಿರಿಯ ದೈಹಿಕ ಶಿಕ್ಷಕ ಎಸ್.ಎಚ್.ನಾಗಣಿ ಮಾತನಾಡಿ, ವಾಲಿಬಾಲ್, ಖೋಖೋ,ಥ್ರೋಬಾಲ್,ಕಬಡ್ಡಿ ಅಂಕಣ ಸುಸ್ಥಿತಿಯಲ್ಲಿವೆ. ಓಟದ ಟ್ರಾಕ್ ಸೇರಿದಂತೆ ಇತರೆ ಸಿದ್ದತೆ ಮಾಡಿಕೊಳ್ಳಲಾಗುವುದು. ವೃತ್ತಿ ಬಾಂದವರ ನೆರವಿನಿಂದ ಉಳಿದ ಅಗತ್ಯ ಸಿದ್ದತೆ ಕೈಗೊಳ್ಳಲಾಗುವುದು ಎಂದರು.ಜುಲೈ ೨೫ ರೊಳಗೆ ಆಯಾ ಶಾಲಾ ಕ್ರೀಡಾಪಟುಗಳ ಯಾದಿ ಸಂಘಟಕರಿಗೆ ಕಳುಹಿಸಲು ಕೋರಲಾಯಿತು .
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಸಂಘದ ಸಂಸ್ಕೃತಿ ಕಾರ್ಯದರ್ಶಿ ಶ್ರೀಮತಿ ಶೀಲವಂತರ, ವೃತ್ತಿ ಒಡನಾಡಿಗಳೆಲ್ಲರೂ ಹಲವಾರು ಕ್ರೀಡಾಕೂಟ ಸಂಘಟಿಸಿ ಯಶಸ್ಸು ಗೊಳಿಸಿರುವ ಅನುಭವ ಹೊಂದಿದ್ದಾರೆ. ಪ್ರಸ್ತುತ ಸಾಲಿನ ಈ ಕ್ರೀಡಾಕೂಟವೂ ಅತ್ಯಂತ ಅಚ್ಚುತನದಿಂದ ನೆರವೇರುವಂತೆ ತಾವೆಲ್ಲ ಬದ್ಧತೆಯಿಂದ ಶ್ರಮಿಸುವದಾಗಿ ಭರವಸೆ ನೀಡಿದರು.
ಹಿರಿಯ ದೈಹಿಕ ಶಿಕ್ಷಕ ಗಂಗಾಧರ ಹಿರೇಮಠ ಮಾತನಾಡಿ, ಮಕ್ಕಳ ಕ್ರೀಡೋತ್ಸವದ ಅಭಿರುಚಿಯೇ ನಮಗೆಲ್ಲ ಹಿತಾನುಭವ ನೀಡುವಂಥದ್ದು.ಮಕ್ಕಳು ಉಲ್ಲಾಸ ದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಪ್ರದಶಿ೯ಸಲು ಉತ್ತೇಜನದ ಪ್ರೋತ್ಸಾಹ ನೀಡೋಣ. ಈ ವಲಯದ ಕ್ರೀಡಾ ಹಬ್ಬದಲ್ಲಿ ಸಂಭ್ರಮಿಸಿ ನಲಿಯುವಂತೆ ಹುರಿದುಂಬಿಸೋಣ. ಕ್ರೀಡಾಕೂಟದ ಯಶಸ್ಸಿಗೆ ಕಾರಣರಾಗೋಣ ಎಂದರು.
ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಜಿ.ಎಂ.ಹಿರೇಮಠ, ಪಿ.ಎಸ್.ನಾಯಕ, ರಮೇಶ ವಡ್ಡರ, ಎಸ್.ಟಿ.ಬೀಳಗಿ, ಆರ್.ಕೆ.ಪವಾರ, ಎಸ್.ಎಸ್.ಲೋಕಾಪುರ, ಅಶೋಕ ಚಲವಾದಿ, ಎಲ್.ಜಿ.ಚಲವಾದಿ, ಯಲ್ಲಪ್ಪ ಬಿದ್ನಾಳ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಕರುಣಿಕ ಸಚೀನ ಹೆಬ್ಬಾಳ ಇತರರಿದ್ದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಗುಲಾಬಚಂದ ಜಾಧವ ನಿರೂಪಿಸಿ ವಂದಿಸಿದರು.

