ವಚನಗಳು ಮತ್ತು ಬಸವ ತತ್ವಗಳನ್ನು ವಿಶ್ವದ ಐದಾರು ಪ್ರಮುಖ ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ಘೋಷಿಸಿದ ಸಚಿವ ಎಂ.ಬಿ.ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಚನಗಳು ಮತ್ತು ಬಸವ ತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ನೀಡುವುದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ
ರವಿವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ My Me is Thee (ನನ್ನೊಳಗಿನ ನಾನು ನೀನೇ) ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರು ಜಗತ್ತಿನಲ್ಲಿ ಮೊದಲ ಸಂಸತನ್ನು ಸ್ಥಾಪಿಸಿ ಎಲ್ಲ ಕಾಯಕ ವರ್ಗದವರಿಗೆ ಪ್ರಾತಿನಿಧ್ಯ ನೀಡಿ ಸಮ ಮತ್ತು ಸುಂದರ ಸಮಾಜ ನಿರ್ಮಿಸುವ ಕನಸು ಕಂಡಿದ್ದರು. ಲಿಂಗಾಯಿತ ಜಾತಿಯಲ್ಲ. ಅದು ಜಾತಿ ರಹಿತ ಧರ್ಮ. ಅಂದು ಕಲ್ಯಾಣ ಕ್ರಾಂತಿ ನಡೆಯದಿದ್ದರೆ ಇಂದು ಇಂದು ಇಡೀ ದೇಶವೇ ಬಸವ ಧರ್ಮವಾಗುತ್ತಿತ್ತು ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯಂಥ ಸದಾ ವ್ಯಸ್ಥವಾಗಿರುವ ಇಲಾಖೆಯಲ್ಲಿ ಕೆಲಸದಲ್ಲಿದ್ದುಕೊಂಡು ಬಸವರಾಜ ಯಲಿಗಾರ ಅವರು ವಚನಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಜಗತ್ತಿಗೆ ತಲಪುವಂತೆ ಮಾಡಿರುವುದು ಶ್ಲಾಘನೀಯವಾಗಿದೆ. ಇಂಥ ಬಸವಮುಖಿ ಚಿಂತರಕರಿಗೆ ಸದಾ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಬೀದರ ಜಿಲ್ಲೆಯ ಬಸವ ಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ಬಸವಣ್ಣನ ಯಾವುದೇ ಒಂದು ಸಮುದಾಯ, ಪ್ರದೇಶದ ಸ್ವತ್ತಲ್ಲ. ಬಸವಣ್ಣನವರ ನಿಜವಾದ ಬಸವತತ್ವಗಳು ಇನ್ನೂ ಜಗತ್ತಿಗೆ ತಲುಪಿಲ್ಲ. ಅನೇಕ ಮಠಗಳಿಗೂ ಮುಟ್ಟಿಲ್ಲ. ಬಹುತೇಕರಿಗೆ ಲಿಂಗಪೂಜೆಯ ಪದ್ಧತಿಯೂ ತಿಳಿದಿಲ್ಲ. ಬಸವತತ್ವದಲ್ಲಿ ರಾಜ ಮಹಾರಾಜರಿಗೆ ದೇವರ ಸ್ಥಾನ ನೀಡುವುದು, ಆಕೃತಿಗೆ ಆಸ್ಪದವಿಲ್ಲ. ಬಸವ ತತ್ವದಂತೆ ಆಯತ, ಲಿಂಗಾಯತ, ಸ್ವಾಯತ್ತ ಸಾಧಿಸಬೇಕು. ಮನುಕುಲದ ತತ್ವಗಳ ಸಾರವನ್ನು ತಿಳಿದುಕೊಂಡು ದೇವರಾಗುವುದೇ ಲಿಂಗಾಯಿತ ಎಂಬುದಾಗಿದೆ. ಮನುಷ್ಯರೆಲ್ಲರೂ ಒಂದೇ ಎನ್ನುವುದು ಅದರ ಸಾರವಾಗಿದೆ. ಯಲಿಗಾರ ಅವರು ಕಲೆಗಾರರಾಗಿದ್ದು, ಬಸವತತ್ವದ ಎಲ್ಲ ಸಾರಾಂಶವನ್ನು ತಮ್ಮ ಗ್ರಂಥದಲ್ಲಿ ಸ್ಪುಟವಾಗಿ ದಾಖಲಿಸಿದ್ದಾರೆ. ಭಾರತದಲ್ಲಿ ಯಾವುದೇ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯಕ್ಕೆ ಸರಿಸಮನಾಗಿಲ್ಲ. ಧರ್ಮ ಮತ್ತು ಜಾತಿ ಹಾಗೂ ಬಡತನ ಮತ್ತು ಶ್ರೀಮಂತ ಇಂದು ಪ್ರಮುಖ ವಿಷಯಗಳಾಗಿವೆ. ಅದನ್ನು ಬದಿಗಿಟ್ಟು ಎಲ್ಲರನ್ನೂ ಮಾನವೀಯತೆ, ಸಹೋದರತೆಯಿಂದ ಅಪ್ಪಿಕೊಂಡರೆ ಬಸವಣ್ಣನವರು ಸಾರ್ವತ್ರಿಕವಾಗುತ್ತಾರೆ. ಮುಂಬರುವ ದಿನಗಳಲ್ಲಿ ನಾವು ರಚಿಸಿರುವ ಸತ್ಯಶೋಧನೆ ಗ್ರಂಥವನ್ನು ಯಲಿಗಾರ ಅವರು ಇಂಗ್ಲಿಷ್ ಭಾಷೆಗೆ ಅನುವಾದಿಸಬೇಕು ಎಂದು ಅವರು ಹೇಳಿದರು.
ವಿಜಯಪುರ ತಬ್ಲಿಕ್ ಜಮಾತ್ ಮುಖ್ಯಸ್ಥ ಮೌಲಾನಾ ಅಬೂಬಕರ ಮಾತನಾಡಿ, ಜಾತಿ ವ್ಯವಸ್ಥೆ ಹೋಗಲಾಡಿಸಿ ನ್ಯಾಯಕ್ಕಾಗಿ ಬಸವಣ್ಣನವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ನಾವು ಬಸವಣ್ಣನವರ ವಚನಗಳನ್ನು ಹಿಂದಿ ಮತ್ತು ಉರ್ದು ಭಾಷೆಗಳಿಗೆ ಅನುವಾದ ಮಾಡಿಸುತ್ತೇವೆ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಇಸ್ಲಾಂ ಧರ್ಮಗಳಲ್ಲಿರುವ ಸಮಾನ ಅಂಶಗಳ ಅಧ್ಯಯನ ನಡೆಸಿ ಗ್ರಂಥ ಪ್ರಕಟಿಸುತ್ತೇವೆ ಎಂದು ಹೇಳಿದರು.
ಹಿರಿಯ ಸಾಹಿತಿ ದೇವನೂರ ಶಂಕರ ಮಾತನಾಡಿ, ಬಸವಾದಿ ಶರಣರ ವಚನಗಳು ಶರಣ ಸಂಸ್ಕೃತಿಯ ಅರಿವು ಮತ್ತು ಜ್ಞಾನದ ಜ್ಯೋತಿಯ ಪ್ರತೀಕವಾಗಿವೆ. ಬದುಕು ಹೂವಿನಂತಿರಬೇಕಾದರೆ ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಒಂದೇ ಎಂದು ಜೀವನ ಸಾಗಿಸಬೇಕಿದೆ. ಐರೋಪ್ಯ ರಾಷ್ಟ್ರಗಳು ಕನಸನ್ನು ಕಾಣುವ ಹೊತ್ತಿನಲ್ಲಿ ನಮ್ಮ ಶರಣರು ಸಮಾನತೆ ಜಾರಿಗಾಗಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಬದುಕು ಪ್ರದರ್ಶನವಾಗಬಾರದು. ನಿದರ್ಶನವಾಗಬೇಕು ಎಂಬುದನ್ನು ವಚಗಳ ಮೂಲಕ ಸಾರಿದರು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಶಾಸಕ ಅರುಣ ಶಹಾಪುರ ಮಾತನಾಡಿ, ವಚನ ಸಾಹಿತ್ಯ ಕೇವಲ ಚಿಂತಕರಿಗೆ ಎಂಬಂತಾಗಿದ್ದು, ಅದನ್ನು ಪ್ರತಿಯೊಬ್ರಿಗೂ ತಲುಪಿಸಬೇಕಾಗಿದೆ. ನೈತಿಕಿ ಶಿಕ್ಷಣದ ಸಾರ ವಚನ ಸಾಹಿತ್ಯದಲ್ಲಿದ್ದು, ಈ ವಚನ ಸಾಹಿತ್ಯವನ್ನು ಪಠ್ಯಕ್ರಮಗಳಲ್ಲಿ ಅಳವಡಿಸುವ ಮೂಲಕ ಈಗಿನಿಂದಲೇ ಮಕ್ಕಳಲ್ಲಿ ನೈತಿಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಬೆಂಗಳೂರು ಅಕ್ಕನಮನೆ ಪ್ರತಿಷ್ಠಾನದ ಲೇಖಕಿ ಸಿ. ಸಿ. ಹೇಮಲತ ಮಾತನಾಡಿ, ಇಂದು ಪೋಷಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಬಸವರಾಜ ಯಲಿಗಾರ ಅವರು ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿರುವುದು ವಚನ ಸಾಹಿತ್ಯ ಇಂದಿನ ಮಕ್ಕಳು ಮತ್ತು ಯುವಕರಿಗೆ ಬಹು ಉಪಯೋಗಿಯಾಗಿವೆ ಎಂದು ಹೇಳಿದರು.
ಅಮೇರಿಕದ ಫ್ಲೋರಿಡಾದ ಪ್ರಾಧ್ಯಾಪಕ ಗಿಲ್ ಬೆನ್ ಹೆರೂತ್ ಮಾತನಾಡಿ, ಇಸ್ರೆಲ್ ನನ್ನ ಜನ್ಮಭೂಮಿಯಾಗಿದ್ದು, ಬಸವಣ್ಣನವರ ವಚನ ಸಾಹಿತ್ಯದಿಂದ ಪ್ರೇರಿತನಾಗಿದ್ದೇನೆ. ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಈ ಸಾಹಿತ್ಯವನ್ನು ಹೇಳುತ್ತೇನೆ. ಬಸವರಾಜ ಯಲಿಗಾರ ಅವರು ರಚಿಸಿರುವ ಗ್ರಂಥ ಕರ್ನಾಟಕ, ಭಾರತವಷ್ಟೇ ಅಲ್ಲ, ಜಗತ್ತಿಗೂ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.
ಬಸವ ಸಾಹಿತಿ ಬಸವರಾಜ ಯಲಿಗಾರ ಮಾತನಾಡಿ, ತಾವು ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲು ನೆರವಾದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿ ವೇದಿಕೆಗೆ ಆಹ್ವಾನಿಸಿ ಗೌರವಿಸಿದರು.
ಹಿರಿಯ ಸಾಹಿತಿ ಸಾಹಿತಿ ಬಿ. ಆರ್. ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಬಸವರಾಜ ಯಲಿಗಾರ ಮತ್ತು ಅವರ ಪತ್ನಿ ಶಿಲ್ಪಾ ಬಸವರಾಜ ಯಲಿಗಾರ ದಂಪತಿಗೆ ಹಿರಿಯ ಸಾಹಿತಿ ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ 40 ಸಂಪುಟ ಗ್ರಂಥಗಳನ್ನು ನೀಡಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಾಹಿತಿ ರಾಜಶೇಖರ ಮಠಪತಿ(ರಾಗಂ), ಸಾಹಿತಿ ಬಿ. ಆರ್. ಬನಸೋಡೆ, ಶಿಕ್ಷಕ ಅಶೋಕ ಹಂಚಲಿ, ನ್ಯಾಯವಾದಿ ಮಹ್ಮದಗೌಸ್ ಹವಾಲ್ದಾರ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಪೊಲೀಸ್ ಅಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಎಎಸ್ಐ ಧಾರವಾಡ ಮುಖ್ಯಸ್ಥ ರಮೇಶ ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು.
ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಕುಮಾರಿ ದಿಕ್ಷಾ ಮತ್ತು ದಿವ್ಯ ಭಿಸೆ ಭರತ ನಾಟ್ಯ ಪ್ರದರ್ಶಿಸಿದರು. ಸಾಕ್ಷಿ ಹಿರೇಮಠ ವಚನ ಗಾಯನ ಹೇಳಿದರು. ಸಾನಿಯಾ ಜಿದ್ದಿ ನಿರೂಪಿಸಿದರು. ಶರಣು ಸಬರದ ವಂದಿಸಿದರು.

